ಕರ್ನಾಟಕ

karnataka

ETV Bharat / state

ಇಂದು ಸಂಜೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಕರೆ

ಬಜರಂಗದಳವನ್ನು ನಿಷೇಧಿಸುತ್ತೇವೆಂದ ಕಾಂಗ್ರೆಸ್​ ವಿರುದ್ಧ ಈಗಾಗಲೇ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಪಕ್ಷ ಪ್ರತಿಭಟನೆ, ವಿರೋಧ ನಡೆಸುತ್ತಿದ್ದು, ಇಂದು ಸಂಜೆ ಈ ಹೇಳಿಕೆಯನ್ನು ಖಂಡಿಸಿ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣಕ್ಕೆ ಕರೆ ನೀಡಲಾಗಿದೆ.

By

Published : May 4, 2023, 3:52 PM IST

bjp
ಶೋಭಾ ಕರಂದ್ಲಾಜೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಅಬ್ಬರ ಜೋರಾಗಿದೆ. ಈ ಮಧ್ಯೆ ಆಯಾ ಪಕ್ಷಗಳು ಈಗಾಗಲೇ ತಮ್ಮ ಪ್ರಣಾಳಿಕೆಗಳನ್ನು ಘೋಷಿಸಿವೆ. ಈ ಕಾಂಗ್ರೆಸ್​ ಘೋಷಿಸಿರುವ ಚುನಾವಣಾ ಪ್ರಣಾಳಿಕೆ ಬಿಜೆಪಿ, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಕಣ್ಣನ್ನು ಕೆಂಪಾಗಿಸಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಬಜರಂಗದಳ ನಿಷೇಧ ವಿಷಯದಲ್ಲಿ ವಾಕ್ಸಮರ ಮುಂದುವರೆದಿದೆ.

ಇದರ ನಡುವೆಯೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ನಿಷೇಧ ಪ್ರಸ್ತಾಪ ಖಂಡಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಇಂದು ಸಂಜೆ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣಕ್ಕೆ ಕರೆ ನೀಡಿದೆ. ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷದ ನಾಯಕರು ಹನುಮಾನ್ ಚಾಲೀಸಾ ಪಾರಾಯಣ ಮಾಡುವುದಾಗಿ ಪ್ರಕಟಿಸಿದ್ದಾರೆ.

ವಿಶ್ವ ಹಿಂದೂ ಪರಿಷದ್ ಕರೆ

ಕಾಂಗ್ರೆಸ್ ಪಕ್ಷವು 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಅಂಶವನ್ನು ಪ್ರಕಟಿಸಿರುವುದು ಎಲ್ಲಾ ಹಿಂದೂ ಸಂಘಟನೆಗಳಿಗೆ ಹಾಗೂ ಹಿಂದು ಸಮಾಜಕ್ಕೆ ಆತಂಕಕಾರಿಯಾಗಿದೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯಾದ್ಯಂತ ಸಜ್ಜನ ಶಕ್ತಿಯ ಜಾಗೃತಿಗಾಗಿ, ಧರ್ಮ ಸಂಸ್ಕೃತಿಗಳ ರಕ್ಷಣೆಗಾಗಿ ಮತ್ತು ಹಿಂದುತ್ವದ ವಿಜಯಕ್ಕಾಗಿ ಸಂಕಲ್ಪವನ್ನು ಮಾಡಿ ಎಲ್ಲರೂ ಇಂದು ಸಂಜೆ 7.00 ಗಂಟೆಗೆ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮವನ್ನು ನಡೆಸುವಂತೆ ವಿಶ್ವ ಹಿಂದೂ ಪರಿಷದ್​ ಸಮಸ್ತ ಕಾರ್ಯಕರ್ತರಿಗೆ ಹಾಗೂ ಹಿಂದೂ ಬಂಧುಗಳಿಗೆ ಕರೆ ನೀಡಿದೆ.

ಇದನ್ನೂ ಓದಿ:ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್​​ ವಿರುದ್ಧ ಬಿಎಸ್​ ಯಡಿಯೂರಪ್ಪ ಕಿಡಿ

ತಮ್ಮ ತಮ್ಮ ಮನೆಗಳಲ್ಲಿ, ಊರುಗಳಲ್ಲಿ, ಬಡಾವಣೆಗಳಲ್ಲಿ ಮತ್ತು ಆಯ್ಕೆ ಅನುಕೂಲಕರ ಸ್ಥಳಗಳಲ್ಲಿ ಎಲ್ಲರೂ ಸೇರಿ ಈ ಪಾರಾಯಣವನ್ನು ಮಾಡಿ ಬಜರಂಗಬಲಿ ಹನುಮಂತನನ್ನು ಪ್ರಾರ್ಥಿಸುವಂತೆ ಕೋರಿದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದ ಹನುಮಾನ್ ಚಾಲೀಸಾ ಪಾರಾಯಣ ಕರೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ.

ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಂಜೆ 7.00 ಗಂಟೆಗೆ ಮಲ್ಲೇಶ್ವರದ 8ನೇ ಅಡ್ಡರಸ್ತೆಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿಂಭಾಗ ಇರುವ ಶ್ರೀರಾಮ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಿಸಲಿದ್ದಾರೆ. ಅದೇ ರೀತಿ ಬಿಜೆಪಿ ಸಂಘಟನಾತ್ಮಕ ಜವಾಬ್ದಾರಿ ಹೊತ್ತಿರುವ ಇತರ ನಾಯಕರು ಸಮೀಪದ ದೇವಾಲಯದಲ್ಲಿ ನಡೆಯುವ ಹನುಮಾನ್ ಚಾಲೀಸಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಶೋಭಾ ಕರಂದ್ಲಾಜೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಬಜರಂಗದಳವನ್ನು ಯಾರಿಂದಲೂ ಬ್ಯಾನ್​ ಮಾಡಲು ಸಾಧ್ಯವಿಲ್ಲ-ಬಿಎಸ್​ವೈ: ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆಯಲ್ಲಿ ಒಂದಾಗಿದ್ದ ಬಜರಂಗದಳದ ನಿಷೇಧ ಅಂಶಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ ಎಸ್ ​​ಯಡಿಯೂರಪ್ಪ ಅವರು ಕಾಂಗ್ರೆಸ್​ ವಿರುದ್ಧ ಗುಡುಗಿದ್ದು, ಬಜರಂಗದಳ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ನವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ‘‘ ಎಂದು ಕಿಡಿಕಾರಿದರು.

ABOUT THE AUTHOR

...view details