ಕರ್ನಾಟಕ

karnataka

ETV Bharat / state

ಮಂಗಳೂರು; ಆಟದ ಮೈದಾನದಲ್ಲಿ ಮಾರ್ಕೆಟ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ - ಮಂಗಳೂರು ಮಹಾನಗರ ಪಾಲಿಕೆ ನಗರದ ನೆಹರೂ ಆಟದ ಮೈದಾನ

ಮಂಗಳೂರು ನಗರದಲ್ಲಿನ ನೆಹರೂ ಆಟದ ಮೈದಾನದಲ್ಲಿನ ಫುಟ್ಬಾಲ್ ಅಂಕಣದಲ್ಲಿ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್​, ಮಾರುಕಟ್ಟೆ ಕಾಮಗಾರಿಗೆ ತಡೆಯಾಜ್ಞೆ ವಿಧಿಸಿದೆ.

High Court
ಹೈಕೋರ್ಟ್

By

Published : Jun 17, 2020, 6:49 PM IST

ಬೆಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ನಗರದ ನೆಹರೂ ಆಟದ ಮೈದಾನದಲ್ಲಿ ಕೈಗೊಂಡಿದ್ದ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳಾದ ವಿಜಯ ಸುವರ್ಣ, ಮೊಹಮ್ಮದ್ ಹುಸೈನ್, ಅಂಥೋಣಿ ಸೆಬಾಸ್ಟಿಯನ್ ಫರ್ನಾಂಡಿಸ್ ಸೇರಿದಂತೆ 11 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಎಚ್. ಸುನಿಲ್ ಕುಮಾರ್ ವಾದಿಸಿ, ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ತೆರೆದ ಸ್ಥಳಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಈ ಮೈದಾನವನ್ನು 1985, 2010, 2017 ರಲ್ಲಿ ಆಟದ ಮೈದಾನ ಎಂದೇ ಸರ್ಕಾರ ಗುರುತಿಸಿದೆ. ಹಾಗೆಯೇ ಸೆಕ್ಷನ್ 6ರ ಪ್ರಕಾರ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಇಂತಹ ಪ್ರದೇಶಗಶಳನ್ನು ಕೈಗೊಳ್ಳುವಂತಿಲ್ಲ. ಮುಖ್ಯವಾಗಿ ಆಟದ ಮೈದಾನದಲ್ಲಿ ಮಾರುಕಟ್ಟೆಗೆ ಕಟ್ಟಡಗಳನ್ನು ನಿರ್ಮಿಸಿದರೆ ಸಾರ್ವಜನಿಕರ ಓಡಾಟಕ್ಕೂ ತೊಂದರೆ ಉಂಟಾಗುತ್ತದೆ. ಮುಂದಿನ ಪೀಳಿಗೆಗೆ ಆಟದ ಮೈದಾನ ಉಳಿಸುವ ಅಗತ್ಯವಿದೆ. ಮೇಲ್ದರ್ಜೆಗೇರಿಸಿದ ಮಾರುಕಟ್ಟೆ ನಿರ್ಮಿಸುವ ಅಗತ್ಯವಿದ್ದರೆ ಬೇರೆ ಜಾಗದಲ್ಲಿಯೂ ನಿರ್ಮಿಸಬಹುದು ಎಂದು ವಾದಿಸಿದರು.

ವಾದ ಪುರಸ್ಕರಿಸಿದ ಪೀಠ, ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:

ಮಂಗಳೂರು ನಗರದ ನೆಹರೂ ಸಾರ್ವಜನಿಕ ಮೈದಾನ 21 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಮೈದಾನದಲ್ಲಿರುವ ಫುಟ್ಬಾಲ್ ಅಂಕಣದಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ನಿರ್ಮಿಸಲು ಮುಂದಾಗಿದೆ. ಇದರಿಂದ ಸ್ಥಳೀಯರ ದಿನನಿತ್ಯದ ಆಟೋಟಗಳಿಗೆ, ಸಾರ್ವಜನಿಕರ ವಾಯು ವಿವಾಹರಕ್ಕೆ ತೊಂದರೆ ಆಗಲಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮೇ 14ರಂದು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಿ ನೆಹರೂ ಮೈದಾನದ ಫುಟ್ಬಾಲ್ ಅಂಕಣದಲ್ಲಿ ತರಕಾರಿ ಮತ್ತು ಮಾಂಸ ಮಾರುಕಟ್ಟೆ ನಿರ್ಮಾಣ ಮಾಡದಂತೆ ಮತ್ತು ಆಟದ ಮೈದಾನವನ್ನು ಸಂರಕ್ಷಿಸುವಂತೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವವರೆಗೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details