ಬೆಂಗಳೂರು: ನಗರದಲ್ಲಿ ಬಡ, ಮಧ್ಯಮ ವರ್ಗದ ಜನರ ಹಸಿವು ನೀಗಿಸುವ ಸಲುವಾಗಿ ತೆರೆಯಲಾಗಿರುವ ಇಂದಿರಾ ಕ್ಯಾಂಟೀನ್ಗಳ ಪೈಕಿ ಕೆಲವು ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ.
ನಗರದ ಪಾರ್ವತಿಪುರ, ಸಂಪಿಗೆ ರಾಮನಗರ, ಬಿಸ್ಮಿಲ್ಲಾನಗರ, ಹೊಸಹಳ್ಳಿ, ಪುಲಿಕೇಶಿ ನಗರ, ಎಚ್ಎಸ್ಆರ್ ಲೇಔಟ್ನ ಸೋಮಸುಂದರ ಪಾಳ್ಯ, ಸುಬ್ರಮಣ್ಯಪುರಂನ ವಸಂತನಗರ, ಮಹದೇವಪುರದ ಎ. ನಾರಾಯಣಪುರ, ಕೋಗಿಲು, ಪ್ರಕೃತಿನಗರ ಸೇರಿದಂತೆ 40 ಕಡೆಗಳಲ್ಲಿ ಕ್ಯಾಂಟೀನ್ಗಳ ಕಾರ್ಯನಿರ್ವಹಣೆ ನಿಂತಿದೆ ಎಂದು ತಿಳಿದು ಬಂದಿದೆ.
ನಗರದ 198 ವಾರ್ಡ್ಗಳಲ್ಲೂ ಒಂದೊಂದು ಇಂದಿರಾ ಕ್ಯಾಂಟೀನ್ ತೆರೆಯಲು ಯೋಜನೆ ರೂಪಿಸಲಾಗಿತ್ತು. 20 ವಾರ್ಡ್ಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕ್ಯಾಂಟೀನ್ ತೆರೆಯಲಾಗಿತ್ತು. ಕೆಲವೆಡೆ ಕಟ್ಟಡ ಸಿದ್ಧಗೊಳಿಸಿದ್ದರೂ ಉದ್ಘಾಟನೆಯಾಗಿರಲಿಲ್ಲ. ಕೆಲ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕ್ಯಾಂಟೀನ್ಗಳೂ ಬಾಗಿಲು ಮುಚ್ಚುತ್ತಿದ್ದು, ಇವುಗಳಿಗೆ ಆಹಾರ ಪೂರೈಸಲು ಅದಮ್ಯ ಚೇತನ, ರಿವ್ಸಾರ್ ಹಾಗೂ ಶೆಫ್ಟಾಕ್ ಸಂಸ್ಥೆಗಳಿಗೆ ತಲಾ 55 ಲಕ್ಷ ರೂಪಾಯಿ ಟೆಂಡರ್ ನೀಡಲಾಗಿತ್ತು. 2020 ಮತ್ತು 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕ್ಯಾಂಟೀನ್ನತ್ತ ಜನರು ಬರುವುದು ಕಡಿಮೆಯಾಗಿತ್ತು. ಆದರೂ, ಈ ಮೂರು ಸಂಸ್ಥೆಗಳಿಗೆ ಟೆಂಡರ್ ವಿಸ್ತರಿಸಲಾಗಿತ್ತು.
ಬಾಕಿ ಉಳಿದ ಸಬ್ಸಿಡಿ ಹಣ: ಪಾಲಿಕೆಯು ಆಹಾರ ಪೂರೈಸುತ್ತಿರುವ ಗುತ್ತಿಗೆ ಕಂಪನಿಗಳಿಗೆ ವಾರ್ಷಿಕ ನವೀಕರಣ ಪತ್ರ ನೀಡುತ್ತಿಲ್ಲ. ಆರು ತಿಂಗಳಿನಿಂದ ಸಬ್ಸಿಡಿ ನೀಡಿಲ್ಲ. ಕೆಲವೆಡೆ ಗ್ರಾಹಕರ ಕೊರತೆ ಉಂಟಾಗಿದೆ. ಹೀಗಾಗಿ ಕೆಲ ಕ್ಯಾಂಟೀನ್ಗಳ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ಟೆಂಡರ್ ಪ್ರಕಾರ, ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 58.30 ರೂ ನಿಗದಿಪಡಿಸಲಾಗಿದೆ. ಇದರಲ್ಲಿ 25 ರೂಪಾಯಿ ಗ್ರಾಹಕರಿಂದ ಪಡೆಯಲಾಗುತ್ತದೆ. ಉಳಿದ 33.30 ರೂಪಾಯಿ ಹಣವನ್ನು ಪಾಲಿಕೆ ನೀಡಬೇಕಾಗಿದೆ.