ಬೆಂಗಳೂರು : ಇದನ್ನು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅನ್ನಬೇಕೋ, ಅಥವಾ ಪೊಲೀಸ್ ಸಿಬ್ಬಂದಿಯ ಅಸಹಾಯಕತೆ ಅನ್ನಬೇಕೋ ಗೊತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಅನುಕೂಲವಾಗಲಿ ಎಂದು ಚಾಲ್ತಿಯಲ್ಲಿರುವ 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಚಪ್ಪಲಿ ಕಳೆದು ಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿರುವ ವಿಚಿತ್ರ ಘಟನೆ ತಡರಾತ್ರಿ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ ಪೊಲೀಸ್ ನಿಯಂತ್ರಣ ಕೋಣೆಯ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು 'ಕಾರ್ ಸ್ಟ್ರೀಟ್ ನಲ್ಲಿರುವ ಬಾಲಂಭಟ್ಟ ಹಾಲ್ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಹಿಂತಿರುಗಿ ಬಂದು ನೋಡಿದಾಗ ತನ್ನ ಚಪ್ಪಲಿ ಕಳೆದುಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ. ವಿಧಿಯಿರದೇ ಪೊಲೀಸ್ ನಿಯಂತ್ರಣ ಕೋಣೆಯ ಸಿಬ್ಬಂದಿ ಸಮೀಪದಲ್ಲಿ ಬೀಟ್ ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ ದೂರುದಾರನ ಜೊತೆ ಸೇರಿ ಚಪ್ಪಲಿ ಹುಡುಕಾಡಿ ಕೊನೆಗೆ ಚಪ್ಪಲಿ ಸಿಗದ ಕಾರಣ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.
ಚಪ್ಪಲಿ ಕಳೆದು ಹೋದದ್ದಕ್ಕೆ ಆನ್ಲೈನ್ನಲ್ಲಿ ದೂರು ಸಲ್ಲಿಸಿದ್ದ ವ್ಯಕ್ತಿ: ದೇವಸ್ಥಾನದಲ್ಲಿ ಚಪ್ಪಲಿ ಬಿಟ್ಟು ಹೋದಾಗ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚೆಗೆ ಉತ್ತರಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಚಪ್ಪಲಿ ಕಳ್ಳತನವಾಗಿದ್ದಕ್ಕೆ ಆನ್ಲೈನ್ನಲ್ಲಿ ಎಫ್ಐಆರ್ ದಾಖಲಿಸಿದ್ದರು. ಕಾನ್ಪುರ್ ಜಿಲ್ಲೆಯ ದಬೌಲಿ ಪೊಲೀಸ್ ಠಾಣೆ ವ್ಯಾಪ್ತಿ ನಿವಾಸಿ ಕಾಂತಿ ಶರಣ್ ನಿಗಮ್ ಎಂಬವರು ತಮ್ಮ ಚಪ್ಪಲಿ ದೇವಸ್ಥಾನದ ಹೋದಾಗ ಕಳವು ಆದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.