ಕರ್ನಾಟಕ

karnataka

ETV Bharat / state

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಖರ್ಗೆ ನಾಮಪತ್ರ ಸಲ್ಲಿಕೆ - ರಾಜ್ಯಸಭೆ ಚುನಾವಣೆ

ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನ ಹಲವು​ ಮುಖಂಡರು ಉಪಸ್ಥಿತರಿದ್ದರು.

Mallikarjun kharge files nomination
Mallikarjun kharge files nomination

By

Published : Jun 8, 2020, 3:26 PM IST

ಬೆಂಗಳೂರು: ಜೂನ್​ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡುವುದಕ್ಕೂ ಮುಂಚಿತವಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.


ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು, ಜೆಡಿಎಸ್ ಒಬ್ಬರನ್ನು ಹಾಗೂ ಕಾಂಗ್ರೆಸ್ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್​ ಖರ್ಗೆ ರಾಜ್ಯ ನಾಯಕರ ಜೊತೆ ತೆರಳಿ ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣಾಧಿಕಾರಿ ಎಂ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.


ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು.

ಮಲ್ಲಿಕಾರ್ಜುನ್​ ಖರ್ಗೆ 4 ಸೆಟ್​ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು. ಪ್ರತಿ ಸೆಟ್ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್​​ನ ನಾಲ್ವರು ನಾಯಕರು ಜೊತೆಗಿದ್ದರು. ಪ್ರತಿ ನಾಮಪತ್ರಕ್ಕೆ ತಲಾ ಹತ್ತು ಮಂದಿ ಸೂಚಕರು ಸಹಿ ಮಾಡಿದ್ದು, ಒಟ್ಟು 40 ಸೂಚಕರ ಸಹಿ ಒಳಗೊಂಡ ನಾಲ್ಕು ಸೆಟ್ ನಾಮಪತ್ರಗಳನ್ನು ಮಲ್ಲಿಕಾರ್ಜುನ್​ ಖರ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿದರು.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಖರ್ಗೆ ನಾಮಪತ್ರ ಸಲ್ಲಿಕೆ


ನಾಮಪತ್ರ ಸಲ್ಲಿಕೆ ನಂತರ ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮಲ್ಲಿಕಾರ್ಜುನ್​ ಖರ್ಗೆ ರಾಜ್ಯಸಭೆ ಅಭ್ಯರ್ಥಿಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಲವು ಹಿರಿಯ ನಾಯಕರು ಸೂಚಕರಾಗಿ ಸಹಿ ಹಾಕಿದ್ದೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ಧಾರವಿದು. ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆ ಮನಗಂಡು ಆಯ್ಕೆ ಮಾಡಲಾಗಿದೆ. ಮೋದಿ ಸರ್ಕಾರದ ವೈಫಲ್ಯವನ್ನು ಮಲ್ಲಿಕಾರ್ಜುನ್​ ಖರ್ಗೆ ಬಯಲಿಗೆಳೆದಿದ್ದರು. ಬಿಜೆಪಿಯವರು ಸೇರಿ ಅವರನ್ನ ಸೋಲಿಸಿದ್ದರು. ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಸೋಲಿಸಿದ್ದರು. 11 ಚುನಾವಣೆಗಳಲ್ಲಿ ಸೋಲು ಕಾಣದೇ ಅವರು ಗೆದ್ದು ಬಂದಿದ್ದರು. ಪಕ್ಷಕ್ಕೆ ಅವರ ಕೊಡುಗೆ ಅಪಾರ ಎಂದರು.


ಜನ ಮೆಚ್ಚಿದ ನಾಯಕರಾಗಿದ್ದ ಗುರ್ತಿಸಿಕೊಂಡವರು. ನಾವು ಖರ್ಗೆ ಒಬ್ಬರ ಹೆಸರನ್ನೇ ಶಿಫಾರಸು ಮಾಡಿದ್ದೆವು. ನಮ್ಮ‌ ಮಾತನ್ನ ಪರಿಗಣಿಸಿ ಹೈಕಮಾಂಡ್ ಆಯ್ಕೆ ಮಾಡಿದೆ. ನಾನು ಸೋನಿಯಾ ಗಾಂಧಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿರಿಯ ನಾಯಕರು ರಾಜ್ಯಸಭೆಯಲ್ಲಿರಬೇಕು. ಬಿಜೆಪಿಯನ್ನು ಎದುರಿಸುವ ಶಕ್ತಿ ಅವರಿಗಿದೆ. ಅದಕ್ಕೆ ನಾವೆಲ್ಲರೂ ಅಭಿನಂದನೆ ಸಲ್ಲಿಸ್ತೇವೆ ಎಂದರು. ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ವಿಚಾರವಾಗಿ ಮಾತನಾಡಿ, ನಾವು ಇಂಟರ್​ನಲ್ ಚರ್ಚೆ ಮಾಡಿದ್ದೇವೆ. ಪ್ರಧಾನಿಯವರ ಬಗ್ಗೆ ನಾವು ಮಾತನಾಡಲ್ಲ. ದೇಶದ ವಿಚಾರವನ್ನ ನಾವು ಚರ್ಚೆ ಮಾಡ್ತಿದ್ದೇವೆ. ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.

ಖರ್ಗೆ ದೊಡ್ಡ ಆಸ್ತಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಖರ್ಗೆಯವರು ರಾಷ್ಟ್ರಕ್ಕೆ ಒಂದು ದೊಡ್ಡ ಆಸ್ತಿ. ಪ್ರತಿಪಕ್ಷದವರು ಕೂಡ ಅವರನ್ನ ಒಪ್ಪಿಕೊಂಡಿದ್ದಾರೆ. ಖರ್ಗೆಯವರನ್ನೇ ಆರಿಸಿ ಕಳಿಸುವಂತೆ ಹೇಳಿದ್ದರು. ಸೋನಿಯಾ, ರಾಹುಲ್ ಗಾಂಧಿ ಆಯ್ಕೆ ಮಾಡಿದ್ದಾರೆ. ನಮ್ಮೆಲ್ಲಾ ಕಾರ್ಯಕರ್ತರು ಸರ್ವಸಮ್ಮತವಾಗಿ ಒಪ್ಪಿಕೊಂಡಿದ್ದೆವು. ಜನರ ಪರ ಧ್ವನಿಯಾಗಿ ಅಲ್ಲಿ ಮಾತನಾಡ್ತಾರೆ. ಸೋನಿಯಾ, ರಾಹುಲ್​ಗೆ ಅಭಿನಂದನೆ ಸಲ್ಲಿಸ್ತೇವೆ ಎಂದರು.

ಹೈಕಮಾಂಡ್ ಅಪೇಕ್ಷೆ ಈಡೇರಿಸುತ್ತೇನೆ:

ಮಲ್ಲಿಕಾರ್ಜುನ್​ ಖರ್ಗೆ ಮಾತನಾಡಿ, ಸೋನಿಯಾ, ರಾಹುಲ್ ಗಾಂಧಿ ನನ್ನನ್ನ ಆಯ್ಕೆ ಮಾಡಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆ ನಡೆದರೆ ಎಲ್ಲಾ ಶಾಸಕರು ನನ್ನನ್ನ ಬೆಂಬಲಿಸುತ್ತಾರೆ. ಹೈಕಮಾಂಡ್ ಆಪೇಕ್ಷೆ ಈಡೇರಿಸುತ್ತೇನೆ. ಜನರ ಪರವಾದ ಧ್ವನಿ ಎತ್ತುತ್ತೇನೆ ಎಂದರು.

ABOUT THE AUTHOR

...view details