ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡ ಮಾಕನಳ್ಳಿ ಗಿರೀಶ್ ನೇತೃತ್ವದಲ್ಲಿ ಅಪಾರ ಪ್ರಮಾಣದ ವೀರಶೈವ ಸಮುದಾಯದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಗುರುವಾರ ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಮಲ್ಲತ್ತಹಳ್ಳಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ಮೂಲಕ ಕ್ಷೇತ್ರದಲ್ಲಿ 45 ಸಾವಿರದಷ್ಟಿರುವ ಲಿಂಗಾಯತ ಸಮುದಾಯದ ಮತ ಸೆಳೆಯುವ ಕಾಂಗ್ರೆಸ್ ಪ್ರಯತ್ನಕ್ಕೆ ಒಂದಿಷ್ಟು ಸಫಲತೆ ಸಿಕ್ಕಿತು. ಸಾಕಷ್ಟು ಸಂಖ್ಯೆಯ ವೀರಶೈವ ಸಮುದಾಯದ ಪ್ರತಿನಿಧಿಗಳು ಕಾಂಗ್ರೆಸ್ ಸೇರುವ ಮೂಲಕ ಇದುವರೆಗೂ ಬಿಜೆಪಿಯ ಮತ ಬ್ಯಾಂಕ್ ಆಗಿದ್ದ ಲಿಂಗಾಯತ ಸಮುದಾಯ ಕಾಂಗ್ರೆಸ್ ನತ್ತಲೂ ಒಲವು ತೋರುತ್ತಿದೆ ಎಂಬ ಸಂದೇಶವನ್ನು ಚುನಾವಣೆ ಸಂದರ್ಭದಲ್ಲಿ ನೀಡುವ ಕಾರ್ಯದಲ್ಲಿ ಡಿಕೆಶಿ ಯಶಸ್ಸು ಕಂಡರು.
ರಾಜರಾಜೇಶ್ವರಿ ದೇವಿ ದರ್ಶನ ಮಾಡಿದ ಡಿಕೆಶಿ ಮತದಾನಕ್ಕೆ ಇನ್ನೊಂದು ವಾರ ಇರುವ ಸಂದರ್ಭದಲ್ಲಿ ಮತ್ತಷ್ಟು ನಾಯಕರನ್ನು ಕಾಂಗ್ರೆಸ್ ನತ್ತ ಸೆಳೆಯುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನ ಡಿಕೆಶಿ ಮಾಡಿದರು. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಸೇರಿದಂತೆ ವಿವಿಧ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡಿರುವ ಶಿವಕುಮಾರ್ ಪಕ್ಷದ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ರನ್ನ ಗೆಲ್ಲಿಸಿಕೊಳ್ಳಲು ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾರೆ.
ಇಂದು ನಡೆದ ಸೇರ್ಪಡೆ ಸಮಾರಂಭದಲ್ಲಿ ಕೊಡಗು ಕೂಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು, ಕುಣಿಗಲ್ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು, ಮಳವಳ್ಳಿ ಸುತ್ತೂರು ಶಾಖೆಯ ರಾಗಿಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿಗಳು ಮತ್ತಿತರರು ಇದ್ದರು.
ವಿನಯ್ ಗೌಡ ಭೇಟಿ ಮಾಡಿದ ಡಿಕೆಶಿ :ಪ್ರಚಾರದ ಭಾಗವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಿಂದೂ ಜಾಗೃತಿ ಸೇನೆ ಸಂಸ್ಥಾಪಕ ವಿನಯ್ ಗೌಡ ಅವರ ರಾಜರಾಜೇಶ್ವರಿ ನಗರದ ಬೆಮೆಲ್ ಬಡಾವಣೆ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸುವ ಕಾರ್ಯದಲ್ಲಿ ತೊಡಗಿರುವ ಶಿವಕುಮಾರ್ ಇದರ ಭಾಗವಾಗಿಯೇ ಇಂದು ವಿನಯ್ ಗೌಡರನ್ನು ಭೇಟಿ ಮಾಡಿ ಸಮಾಲೋಚಿಸಿದರು.
ದೇವಾಲಯ ದರ್ಶನ :ಇಂದು ಸಂಜೆ ಡಿಕೆಶಿ ಅವರು ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇಗುಲದಲ್ಲಿ ಗುರುವಾರ ಸಂಜೆ ಪೂಜೆ ನೆರವೇರಿಸಿದರು. ದಿನವಿಡೀ ಕ್ಷೇತ್ರದಲ್ಲಿದೆ ಸಂಚರಿಸಿದ ಡಿಕೆಶಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕ್ಕಿಂತ ಮುಖ್ಯವಾಗಿ ಚುನಾವಣೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಹಲವು ಸಮುದಾಯದ ಮುಖಂಡರನ್ನು ಭೇಟಿಮಾಡಿ ಚರ್ಚಿಸಿದ್ದು ಗಮನಸೆಳೆಯಿತು.