ಕರ್ನಾಟಕ

karnataka

ETV Bharat / state

11 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ 999 ಸಿಬ್ಬಂದಿ ಎತ್ತಂಗಡಿ: ಕಮಲ್ ಪಂತ್​ ಆದೇಶ

11 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಹೆಡ್​ ಕಾನ್‍ಸ್ಟೇಬಲ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

By

Published : Jul 25, 2021, 2:06 PM IST

police-department
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​

ಬೆಂಗಳೂರು: ಬಹಳಷ್ಟು ಹೆಡ್​ ಕಾನ್‍ಸ್ಟೇಬಲ್‍ಗಳು 11 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ಶನಿವಾರ ವರ್ಗಾವಣೆ ಆದೇಶ ಮಾಡಲಾಗಿದೆ. ಸಬ್ ಇನ್‍ಸ್ಪೆಕ್ಟರ್​ಗಳನ್ನೂ ಇದೇ ಮಾದರಿಯಲ್ಲಿ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ವರ್ಗಾವಣೆ ಮಾಡುವ ಮೂಲಕ ಅಂತವರಿಗೆ ಶಾಕ್ ನೀಡಲಾಗಿದೆ. ನಗರದ ಸಾಕಷ್ಟು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಗೊತ್ತಿದ್ದರೂ ವಿವಿಧ ಆಮಿಷಗಳಿಗೆ ಒಳಗಾಗಿ ಕ್ರಮ ಕೈಗೊಳ್ಳುತ್ತಿರಲಿಲ್ಲ. ಹೆಡ್​ ಕಾನ್‍ಸ್ಟೇಬಲ್‍ಗಳು ಮಾತ್ರವಲ್ಲದೆ ಸಬ್ ಇನ್‍ಸ್ಪೆಕ್ಟರ್​ಗಳು ಸಹ ಕೆಲ ವರ್ಷಗಳಿಂದ ಗ್ರಾಮೀಣ ಭಾಗಕ್ಕೆ ಹೋಗದೆ ನಗರದಲ್ಲೇ ಠಿಕಾಣಿ ಹೂಡಿರುವ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಹಂತ-ಹಂತವಾಗಿ ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಚಿಂತಿಸಲಾಗಿದೆ ಎನ್ನಲಾಗುತ್ತಿದೆ.

ಒಂದೆಡೆ ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳು, ಮತ್ತೊಂದು ಕಡೆ ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿ ಲಂಚ ಪಡೆಯುತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿತ್ತು. ಈ ನಡುವೆ ಕೆಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಲಾಭಿ ನಡೆಸಿ 8ಕ್ಕೂ ಅಧಿಕ ವರ್ಷಗಳಿಂದ ಯಾವುದೇ ವರ್ಗಾವಣೆ ಇಲ್ಲದೆ ಒಂದೇ ಕಡೆ ಕೆಲಸ ಮಾಡುತ್ತಿದ್ದರು.

ನಗರ ಪೊಲೀಸ್ ಇತಿಹಾಸದಲ್ಲಿ ಮೊದಲು:ನಗರದ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ 999 ಹೆಡ್ ಕಾನ್‍ಸ್ಟೇಬಲ್‍ಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿತ್ತು. ಏಕಕಾಲಕ್ಕೆ ಸರಿ ಸುಮಾರು ಒಂದು ಸಾವಿರ ಮಂದಿಯನ್ನು ವರ್ಗಾವಣೆ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗ್ತಿದೆ.

ಪೊಲೀಸ್ ಠಾಣೆಗಳಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಏಕಕಾಲಕ್ಕೆ 999 ಹೆಡ್ ಕಾನ್‍ಸ್ಟೇಬಲ್‍ಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ಹಿಂದೆ ಒಂದೇ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲಾವಧಿ ಕರ್ತವ್ಯದಲ್ಲಿದ್ದ ಮುಖ್ಯ ಪೇದೆಗಳನ್ನು ವರ್ಗಾವಣೆ ಮಾಡಿ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್​ ಆದೇಶಿಸಿದ್ದರು.

ABOUT THE AUTHOR

...view details