ಕರ್ನಾಟಕ

karnataka

By

Published : Dec 30, 2019, 1:00 PM IST

ETV Bharat / state

ಗಡಿ ವಿಚಾರವಾಗಿ ಮಹಾರಾಷ್ಟ್ರ ಕ್ಯಾತೆ.. 'ಮಹಾ'ನಡೆಗೆ ರಾಜ್ಯ ಸಚಿವರು ಕಿಡಿ

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತೇ ಕ್ಯಾತೆ ತೆಗೆದಿದ್ದು, ಈ ಕುರಿತು ಸಚಿವರಾದ ಆರ್​. ಅಶೋಕ್, ಜಗದೀಶ್ ಶೆಟ್ಟರ್ ಹಾಗೂ ಸಿ.ಟಿ. ರವಿ ಮಹಾರಾಷ್ಟ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Maharashtra riot on the border issue
ಗಡಿ ವಿಚಾರವಾಗಿ ಮಹಾರಾಷ್ಟ್ರ ಕ್ಯಾತೆ.. ಸಚಿವರು ಏನಂದ್ರು

ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತೇ ಕ್ಯಾತೆ ತೆಗೆದಿದ್ದು, ಈ ಕುರಿತು ಸಚಿವರಾದ ಆರ್​. ಅಶೋಕ್, ಜಗದೀಶ್ ಶೆಟ್ಟರ್ ಹಾಗೂ ಸಿ.ಟಿ. ರವಿ ಮಹಾರಾಷ್ಟ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಆರ್.ಅಶೋಕ್ ಮಾತನಾಡಿ ಮಹಾರಾಷ್ಟ್ರದ ಕ್ಯಾತೆ ಹೊಸದೇನಲ್ಲ. ಹೊಸ ಸರ್ಕಾರ ಬಂದಾಗ ಕ್ಯಾತೆ ತೆಗೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ತಿಳಿಸಿದರು. ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ಗಡಿ ವಿಚಾರದಲ್ಲಿ ರಾಜ್ಯ ರಾಜಿ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಸೇನೆ ಜೊತೆ ಕಾಂಗ್ರೆಸ್ ನಿಂತಿದೆ

ಇನ್ನು ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಉದ್ಧವ್ ಠಾಕ್ರೆ ಸಿಎಂ ಆದ ನಂತರ ಗಡಿ ಗಲಾಟೆ ಪ್ರಾರಂಭವಾಗಿದ್ದು, ಗಡಿಯಲ್ಲಿ ಒಂದು ರೀತಿಯ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ಲಾಭ ಪಡೆದುಕೊಳ್ಳಲು ಶಿವಸೇನೆ ಹೊರಟಿದೆ ಎಂದು ಕಿಡಿ ಕಾರಿದರು. ಈಗಾಗಲೇ ಮಹಾಜನ್ ವರದಿ ಅಂತಿಮವಾಗಿದೆ. ಈ ರೀತಿ ಪ್ರಚೋದನೆ ಮಾಡುವುದು ಸರಿಯಲ್ಲ. ಕೊಲ್ಲಾಪುರದಲ್ಲಿ ನಮ್ಮ ಸಿಎಂ ಪ್ರತಿಕೃತಿ ದಹಿಸಿರುವುದು ಸರಿಯಲ್ಲ ಎಂದರು. ಕಾನೂನು ಹೋರಾಟ ಬೇಕಾದರೆ ಮಾಡಲಿ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಶಿವಸೇನೆ ಜೊತೆ ಕಾಂಗ್ರೆಸ್ ನಿಂತಿದೆ. ಈಗ ರಾಜ್ಯ ನಾಯಕರು ಇದರ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳಿದ್ರು. ರಾಜ್ಯ ನಾಯಕರು ಮೈತ್ರಿ ಪಕ್ಷದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಗಡಿ ವಿಚಾರ ಸಂಬಂಧ ಪ್ರಚೋದನೆಗೆ ಬೆಂಬಲ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ರು. ಬೆಳಗಾವಿ ಕರ್ನಾಟಕದ ಭಾಗವಾಗಿದ್ದು, ಮರಾಠಿಗರು ಹಾಗೂ ಕನ್ನಡಿಗರು ಸಹೋದರತ್ವದಿಂದ ಇದ್ದಾರೆ ಎಂದು ತಿಳಿಸಿದರು.

ಗಡಿ ವಿಚಾರವಾಗಿ ಮಹಾರಾಷ್ಟ್ರ ಕ್ಯಾತೆ.. ಸಚಿವರು ಏನಂದ್ರು

ಫಡ್ನವೀಸ್ ಹೇಳಿಕೆಗೆ ಸಿ.ಟಿ. ರವಿ ಆಕ್ಷೇಪ

ಬೆಳಗಾವಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು, ಕರ್ನಾಟಕ ಅದನ್ನು ಅತಿಕ್ರಮಿಸಿದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಸಚಿವ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆ ರೀತಿ ಹೇಳಿಕೆ ನೀಡುವುದು ಬಾಲಿಷ ಎನಿಸುತ್ತದೆ. ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಕಡೆಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ‌‌. ಹಾಗೆಂದು ಆ ಪ್ರದೇಶಗಳನ್ನು ಮಹಾರಾಷ್ಟ್ರ ವಶಪಡಿಸಿಕೊಂಡಿದೆ ಎಂದರೆ ಮೂರ್ಖತನವಾಗುತ್ತದೆ ಎಂದು ಕಿಡಿ ಕಾರಿದರು.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆಂದು ಪ್ರಧಾನಿ ಮೋದಿ ಪ್ರಯತ್ನಿಸುತ್ತಿರುವಾಗ, ನಮ್ಮ ನೆರೆ ರಾಜ್ಯಗಳು ಭಾಷೆ ಆಧಾರದ ಮೇಲೆ ಭಾರತ ವಿಭಜನೆಗೆ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು. ಕರ್ನಾಟಕದ ನೆಲ, ಜಲ ಭಾಷೆ ವಿಷಯದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details