ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯೇನೋ ಆಗ್ತಿದೆ. ಆದರೆ, ಸಕ್ರಿಯ ಕೇಸ್ಗಳು ಲಕ್ಷದಷ್ಟು ಬಾಕಿ ಇದೆ. ಈ ನಡುವೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ, ಶುಲ್ಕ ಪಡೆಯುವ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿದೆ. ಜುಲೈ 1 ರಿಂದ ಶೈಕ್ಷಣಿಕ ವರ್ಷಾರಂಭ ಮಾಡಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಆದರೆ ರಾಜ್ಯದ ಎಲ್ಲ ಬೋಧನಾ ಹಾಗೂ ಬೋಧನೇತರ ಸಿಬ್ಬಂದಿಗೆ ಕೋವಿಡ್ ಲಸಿಕಾ ಕಾರ್ಯ ಪೂರ್ಣವಾಗದೇ ಶಾಲೆ ಆರಂಭ ಹೇಗೆ ಸಾಧ್ಯ? ಎಂಬ ಮಾತುಗಳು ಕೇಳಿ ಬರುತ್ತಿವೆ. 2ನೇ ಅಲೆಯ ಬೆನ್ನಲ್ಲೇ 3ನೇ ಅಲೆಯ ಭೀತಿಯೂ ಇರುವುದರಿಂದ ಭೌತಿಕ ತರಗತಿಗಾಗಿ ಅಥವಾ ಶಾಲಾ ಕೆಲಸಗಳಿಗೆ ಶಿಕ್ಷಕರು ಬಂದು ಹೋಗುವುದು ಮಾಡುವುದರಿಂದ ಕೊರೊನಾ ಸೋಂಕು ಇನ್ನಷ್ಟು ಹರಡಲು ದಾರಿ ಮಾಡಿಕೊಟ್ಟಂತೆ ಆಗಲಿದೆ.
ಮಕ್ಕಳಿಗೆ ಸೂಕ್ತ ಮಾರ್ಗದರ್ಶನ: ಕೊರೊನಾ ಕಾರಣಕ್ಕೆ ಶಾಲೆಗಳಲ್ಲಿ ಭೌತಿಕವಾಗಿ ತರಗತಿಯನ್ನ ಪ್ರಾರಂಭಿಸಲು ಸಾಧ್ಯವಾಗದೇ ಇದ್ದರೆ ಪರ್ಯಾಯ ಮಾರ್ಗದಲ್ಲಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲೆಗಳು ಆರಂಭವಾದ ನಂತರ ಪ್ರತಿದಿನವೂ ನಾಲ್ಕೈದು ಮಕ್ಕಳನ್ನ ಶಾಲೆಗಳಿಗೆ ಕರೆಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಅಂತಲೂ ಸಚಿವರು ಸಲಹೆ ನೀಡಿದ್ದಾರೆ.
ಶಿಕ್ಷಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸುವ ಅನಿರ್ವಾಯ: ಆದರೆ, ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡು ಸೇರಿ ಸುಮಾರು 4 ಲಕ್ಷದಷ್ಟು ಶಾಲಾ ಶಿಕ್ಷಕರು ಇದ್ದಾರೆ. ಇವರಲ್ಲಿ ಕೋವಿಡ್ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರಿಗೆ, ಎಸ್ಎಸ್ಎಲ್ಸಿ ಪರೀಕ್ಷೆಗೆ ನಿಯೋಜನೆ ಆಗ್ತಿರೋರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗ್ತಿದೆ. ಆದರೆ, ಉಳಿದ ಶಿಕ್ಷಕರಿಗೆ ಲಸಿಕೆ ಯಾವಾಗಾ? ಎಂಬ ಗೊಂದಲ ಹಾಗೇ ಉಳಿದಿದೆ.
ಇಲಾಖೆ ಶಾಲಾರಂಭಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಶಿಕ್ಷಕರಿಗೂ ಶಿಕ್ಷಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸುವ ಅನಿರ್ವಾಯ ಇದೆ. ಕಾರಣ, ಮಕ್ಕಳ ಜೊತೆಗೆ ಹೆಚ್ಚು ಸಮಯ ಒಡನಾಟದಲ್ಲಿ ಇರುವುದರಿಂದ, ಭೌತಿಕವಾಗಿ ಭೇಟಿಯಾಗುವ ಪ್ರಸಂಗ ಎದುರಾದಾಗ ಶಿಕ್ಷಕರಿಂದಲೇ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರಲಿದೆ.