ಬೆಂಗಳೂರು: ಇಂದಿನಿಂದ ಕಠಿಣ ನಿರ್ಬಂಧಗಳಿರುವ ಲಾಕ್ಡೌನ್ 2.O ರಾಜ್ಯಾದ್ಯಂತ ಜಾರಿಯಾಗಲಿದೆ.
ಲಾಕ್ಡೌನ್ ಎಷ್ಟು ಕಠಿಣವಾಗಿರಲಿದೆ ಎಂಬ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಸೋಮವಾರದಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಕಠಿಣ ಲಾಕ್ಡೌನ್ ಜಾರಿಯಾಗಲಿದೆ. ಸಂಪೂರ್ಣ ಲಾಕ್ಡೌನ್ ಅಲ್ಲವಾದರೂ ಈ ಮೊದಲಿದ್ದ ಕರ್ಫ್ಯೂಗಿಂತ ಕಠಿಣ ನಿಯಮಗಳು ಜಾರಿಯಾಗಲಿವೆ. ಈಗಾಗಲೇ ಪೊಲೀಸರು ಇಂದಿನಿಂದ ಜಾರಿಯಾಗಲಿರುವ ಲಾಕ್ಡೌನ್ ಹೇಗಿರಲಿದೆ ಎಂಬ ಸಂಕೇತವನ್ನು ಲಾಠಿ ಏಟಿನ ಮೂಲಕ ತೋರಿಸಿದ್ದಾರೆ.
ಲಾಕ್ಡೌನ್ ವೇಳೆ ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೂ ಜನರು ವಾಹನಗಳಲ್ಲಿ ಓಡಾಟ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ನಡೆದುಕೊಂಡೇ ಹೋಗಿ ಬರಬೇಕು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ಇಲ್ಲ. ಈ ವೇಳೆ ಸಾರ್ವಜನಿಕರು ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ವಾಹನ ಬಳಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಬೆಳಗ್ಗೆ 10 ಗಂಟೆಯ ಬಳಿಕ ಜನರ ಓಡಾಟಕ್ಕೆ ಸಪೂರ್ಣ ಬ್ರೇಕ್ ಹಾಕಲಾಗುತ್ತದೆ.
ಯಾರೆಲ್ಲಾ ಲಾಕ್ಡೌನ್ ವೇಳೆ ಓಡಾಡಬಹುದು?
ಅಗತ್ಯ ಸೇವೆ ಒದಗಿಸುವ ವೈದ್ಯಕೀಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳ ಸಿಬ್ಬಂದಿ, ಇ-ಕಾಮರ್ಸ್, ಹೋಮ್ ಡೆಲಿವರಿ ಮಾಡುವ ಸಿಬ್ಬಂದಿ, ದೂರ ಸಂಪರ್ಕ, ಇಂಟರ್ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವಾ ಸಿಬ್ಬಂದಿ, ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಈ ಸಿಬ್ಬಂದಿ ಕಂಪನಿ ನೀಡಿರುವ ಐಡಿ ಕಾರ್ಡನ್ನು ತೋರಿಸಬೇಕು. ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶ ಇರಲಿದೆ.
ಓದಿ:ಭಾರತದ ಹೆಸರಲ್ಲೇ ಎರಡು ಕ್ರಿಕೆಟ್ ತಂಡ: ಒಂದು ಇಂಗ್ಲೆಂಡ್ನಲ್ಲಿ, ಮತ್ತೊಂದು ಶ್ರೀಲಂಕಾದಲ್ಲಿ!
ಎಲ್ಲಾ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. ಎಲ್ಲಾ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವವರು, ಆಸ್ಪತ್ರೆಗೆ ಹೋಗುವ ರೋಗಿಗಳು ಮತ್ತು ಅವರ ಸಂಬಂಧಿಗಳು ಆಟೋ, ಟ್ಯಾಕ್ಸಿ ಅಥವಾ ಖಾಸಗಿ ವಾಹನ ಮೂಲಕ ಹೋಗಲು ಅನುಮತಿ ಇದೆ. ಆದರೆ ಅವರು ಸೂಕ್ತ ದಾಖಲೆಗಳನ್ನು ನೀಡಬೇಕು.
ವಾಹನ ಸಂಚಾರಕ್ಕೆ ಯಾರಿಗೆ ಅನುಮತಿ?
ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಯಥಾವತ್ ಆಗಿ ಸಂಚಾರ ನಡೆಸಲಿವೆ. ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವಿಮಾನ, ರೈಲು ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಆಟೋ, ಟ್ಯಾಕ್ಸಿ, ಓಲಾ, ಉಬರ್ ಬಳಸಬಹುದು. ಆದರೆ ಪ್ರಯಾಣ ಟಿಕೆಟ್ ತೋರಿಸಬೇಕು. ಇಲ್ಲವಾದರೆ ವಾಹನ ಜಪ್ತಿ ಮಾಡಲಾಗುತ್ತದೆ.
ಅಂಗಡಿ ಮುಂಗಟ್ಟುಗಳಿಗಿರುವ ನಿರ್ಬಂಧ ಏನು?
ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗಿದೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುತ್ತದೆ. ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಲಿವೆ. ಹಾಲಿನ ಬೂತ್ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ಇರಲಿದೆ.