ಆನೇಕಲ್: ತಮಿಳುನಾಡು-ಆನೇಕಲ್ ವ್ಯಾಪ್ತಿಯ ಕಾಡಿಂದ ಚಿರತೆಯೊಂದು ನಗರದ ಹುಳಿಮಾವು-ಬೇಗೂರು-ಬಿಳೇಕಳ್ಳಿ ಭಾಗದ ಅಪಾರ್ಟ್ಮೆಂಟ್ಗಳ ಬಳಿ ಸುಳಿದಾಡಿರುವುದು ಖಚಿತವಾಗಿರುವುದರಿಂದ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಬೇಗೂರಿನ ಎಲೇನಹಳ್ಳಿ ಬಳಿ ಒಂದು ವಾರದಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಓಡಾಡುವಿಕೆಯನ್ನು ಅಪಾರ್ಟ್ಮೆಂಟ್ನ ಸಿಸಿಟಿವಿ ಕ್ಯಾಮರಾದ ದೃಶ್ಯಗಳು ದೃಢಪಡಿಸಿವೆ. ಇದೀಗ ಸುತ್ತಮುತ್ತಲಿನ ನಿವಾಸಿಗಳ ಕಣ್ಣಿಗೆ ಸಹ ಚಿರತೆ ಕಾಣಿಸಿಕೊಂಡಿದೆ.
ಚಿರತೆ ಪ್ರತ್ಯಕ್ಷವಾದ ಜಾಗದಲ್ಲಿ ಹೆಜ್ಜೆ ಗುರುತುಗಳು ಹಾಗೂ ಕೂದಲು ಕಾಣಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಮನವಿ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಚಿರತೆ ಹಿಡಿಯಲು ಬೋನ್ ಇಟ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಇದೀಗ ಮತ್ತೊಂದು ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಏಳು ಜನರ ತಂಡ ಹಗಲು - ರಾತ್ರಿ ಶಿಫ್ಟ್ ವೈಸ್ ಕಾರ್ಯಾಚರಣೆಗಿಳಿದಿವೆ. ಬೆಳಗಿನ ಜಾವ ಬೇಗೂರಿನ ಪ್ರೆಸ್ಟೀಜ್ ಗ್ರೂಪ್ ಬಳಿ ಕಾಣಿಸಿಕೊಂಡ ಚಿರತೆಗಾಗಿ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯಾ ಮುಂದುವರೆಸಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಜನರು ಸದ್ಯ ಹೊರ ಬರದಂತೆ ಪೊಲೀಸರು ಸೂಚಿಸಿದ್ದಾರೆ.