ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು.. ಅಭಿಮಾನಿಗಳ ಬೆನ್ನಲ್ಲೇ ಜಿಲ್ಲೆಯ ನಾಯಕರ ಒತ್ತಾಯ - ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು

ಜಿಲ್ಲೆಯ ಮಾಜಿ ಶಾಸಕರು ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವುದರ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ನೂರಕ್ಕೆ ನೂರರಷ್ಟು ಅವರು ಬಾದಾಮಿಯಿಂದ ಸ್ಪರ್ಧಿಸಲಿ ಎಂದ ಕ್ಷೇತ್ರದ ಮಾಜಿ ಶಾಸಕ ಹೆಚ್ ವೈ ಮೇಟಿ ಒತ್ತಾಯಿಸಿದ್ದಾರೆ.

Opposition Leader Siddaramayya
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Dec 3, 2022, 1:39 PM IST

Updated : Dec 3, 2022, 2:34 PM IST

ಬಾಗಲಕೋಟೆ:ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್. ಸಿದ್ದರಾಮಯ್ಯ ಹೋದ ಕಡೆಯೆಲ್ಲಾ ಜನಸಾಗರ. ಸಿದ್ದರಾಮಯ್ಯ ಬರ್ತಿದ್ದಾರೆ ಎಂದರೆ ಅಲ್ಲಿ ಅಭಿಮಾನಿಗಳ ಆಗರ. ಇಂತಹ ಸಿದ್ದರಾಮಯ್ಯ ಇದೀಗ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಜನತೆ ಸಿದ್ದು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಯಾವಾಗ ಸಿದ್ದು ಬಾದಾಮಿ ತುಂಬಾ ದೂರ ಆಗುತ್ತೆ ಎಂದು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ರೋ ಆವಾಗ್ಲೆ ಕ್ಷೇತ್ರದ ಜನತೆ, ಅಭಿಮಾನಿಗಳು ಮಾಧ್ಯಮಗೋಷ್ಟಿ ನಡೆಸಿ ಸಿದ್ದರಾಮಯ್ಯ ಬೇರೆ ಎಲ್ಲೂ ಹೋಗಬಾರದು, ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿಕೊಡುತ್ತೇವೆ. ಒಂದು ವೇಳೆ ಬೇರೆಡೆ ಹೋದರೆ ಅವರ ಮನೆ ಮುಂದೆ ಧರಣಿ ಕೂರುತ್ತೇವೆ, ವಿಷ ಕುಡಿದು ಪ್ರಾಣ ಸಹ ಕಳೆದುಕೊಳ್ಳುತ್ತೇವೆ ಎನ್ನುವ ಮಾತುಗಳನ್ನು ಸಹ ಆಡಿದ್ರು. ಮೇಲಿಂದ ಮೇಲೆ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಬಾದಾಮಿ ಜನತೆ ಒತ್ತಾಯಿಸಿದ್ರು.

ಅಭಿಮಾನಿಗಳ ಬೆನ್ನಲ್ಲೇ ಜಿಲ್ಲೆಯ ನಾಯಕರ ಒತ್ತಾಯ

ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಿದರೆ ಈ ಭಾಗದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತೆ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಆದರೆ ಲೆಕ್ಕಾಚಾರ ಉಲ್ಟಾ ಆಗಿ ಗೆಲ್ಲುವ ಅಭ್ಯರ್ಥಿಗಳು ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧಿಸಲಿ ಎಂದು ಅಭಿಮಾನಿಗಳು ಎಷ್ಟೇ ಒತ್ತಾಯ ಮಾಡಿದರೂ ಸಹ ಈವರೆಗೂ ಜಿಲ್ಲೆಯ ಯಾವೊಬ್ಬ ನಾಯಕನೂ ಸಹ ಸಿದ್ದರಾಮಯ್ಯ ಮತ್ತೆ ಬಾಗಲಕೋಟೆ ಜಿಲ್ಲೆಯಿಂದ, ಅದರಲ್ಲೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಮುಂದೆ ಬಂದು ಹೇಳಿಕೆ ಕೊಟ್ಟಿರಲಿಲ್ಲ. ಇದರಿಂದ ಜಿಲ್ಲೆಯ ಮಾಜಿ ಶಾಸಕರಿಗೆ ಸಿದ್ದರಾಮಯ್ಯ ಮತ್ತೆ ಬಾದಾಮಿಗೆ ಸ್ಪರ್ಧಿಸುವುದರ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಎಂಬ ಭಾವನೆ ವ್ಯಕ್ತವಾಗಿತ್ತು.

ಆದರೆ ಇದೀಗ ಜಿಲ್ಲೆಯ ಮಾಜಿ ಶಾಸಕರು ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವುದರ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅವರು ಸಿದ್ದು ಬಾದಾಮಿಯಿಂದಲೇ ಸ್ಪರ್ಧಿಸಲಿ ಎಂದು ಅವರ ಆಪ್ತರೂ ಆಗಿರುವ ಬಾಗಲಕೋಟೆ ಕ್ಷೇತ್ರದ ಮಾಜಿ ಶಾಸಕ ಹೆಚ್.ವೈ ಮೇಟಿ ಅಭಿಪ್ರಾಯ ಒತ್ತಾಯಿಸಿದ್ದಾರೆ.

ಬೀಳಗಿಯ ಮಾಜಿ ಶಾಸಕ ಜೆ ಟಿ ಪಾಟೀಲ್ ಸಹ ಮೌನ ಮುರಿದಿದ್ದು, ಜಿಲ್ಲೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂಬುದು ಎಲ್ಲರ ಆಶಯ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಏಳು ಕ್ಷೇತ್ರದ ಮುಖಂಡರು ಅವರನ್ನು ಆಹ್ವಾನಿಸಿದ್ದೇವೆ. ಅವರನ್ನು ಆಹ್ವಾನಿಸಿಲ್ಲ ಎಂಬುದು ಸುಳ್ಳು, ಅನೇಕ ಬಾರಿ ಅವರನ್ನು ಭೇಟಿ ಆಗಿದ್ದೇವೆ. ಕಳೆದ ಬಾರಿ ವೀರಶೈವ ಲಿಂಗಾಯತ, ಸದಾಶಿವ ವರದಿ ಜಾರಿ ವಿಚಾರಕ್ಕೆ ಹಿನ್ನೆಡೆಯಾಗಿದೆ.

ಅಲ್ಲದೇ ಶ್ರೀರಾಮುಲು ಸ್ಪರ್ಧೆಯಿಂದ ಮತಗಳು ಬರಲಿಲ್ಲ. ಆದರೆ ಈ ಬಾರಿ ಎಸ್ಸಿ, ಎಸ್ಟಿ ಸಮುದಾಯದ 70 ಶೇಕಡಾ ಮತಗಳು ನಮಗೆ ಬರುತ್ತವೆ. ಕಾರಣ ಅವರೆಲ್ಲರಿಗೂ ಬಿಜೆಪಿ ಆಡಳಿತದ ಬಗ್ಗೆ ಬೇಸರ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ಮೇಲ್ವರ್ಗದ ಬಡವರಿಂದ ಹಿಡಿದು ದಲಿತ ಸಮುದಾಯದ ಉದ್ಧಾರಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಭಾರಿ ಕುತೂಹಲ ಮೂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಆದರೆ ಬಾದಾಮಿಯಿಂದ ಮತ್ತೆ ಸಿದ್ದು ಸ್ಪರ್ಧೆ ಮಾಡಲಿ ಎಂಬ ಕ್ಷೇತ್ರದ ಜನತೆಯ ಒತ್ತಾಯಕ್ಕೆ ಇದೀಗ ಜಿಲ್ಲೆಯ ಮಾಜಿ ಶಾಸಕರು ದನಿಗೂಡಿಸಿದ್ದಾರೆ. ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ನಿಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:'ಮುಂದಿನ ಮುಖ್ಯಮಂತ್ರಿ' ಎಂದು ಬರೆದಿದ್ದ 75 ಕೆಜಿ ಕೇಕ್​​ ಕತ್ತರಿಸಿದ ಸಿದ್ದರಾಮಯ್ಯ

Last Updated : Dec 3, 2022, 2:34 PM IST

ABOUT THE AUTHOR

...view details