ಕರ್ನಾಟಕ

karnataka

By ETV Bharat Karnataka Team

Published : Nov 25, 2023, 9:12 AM IST

ETV Bharat / state

ಕಿರಿಯ ವಕೀಲೆಗೆ ಕಿರುಕುಳ ಆರೋಪ ಪ್ರಕರಣ: ವಕೀಲ ಹೆಚ್​ ಮಂಜುನಾಥ್ ಸನ್ನದ್ದು ಅಮಾನತು

Advocate H Manjunath charter suspended:ಕಿರಿಯ ವಕೀಲೆಗೆ ಲೈಂಗಿಕ ದೌರ್ಜನ್ಯ ಜತೆಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ವಕೀಲ ಎಚ್.ಮಂಜುನಾಥ್ ಅವರ ಸನ್ನದ್ದನ್ನು ಕರ್ನಾಟಕ ವಕೀಲರ ಪರಿಷತ್​ ತಾತ್ಕಾಲಿಕವಾಗಿ ಅಮಾನತುಪಡಿಸಿದೆ.

Karnataka Bar Council
ಕರ್ನಾಟಕ ವಕೀಲರ ಪರಿಷತ್​

ಬೆಂಗಳೂರು:ಕಚೇರಿಯ ಸಹೋದ್ಯೋಗಿಯಾಗಿರುವ ಕಿರಿಯ ವಕೀಲೆಗೆ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ವಕೀಲ ಹೆಚ್.ಮಂಜುನಾಥ್ (46) ಎಂಬುವರ ಸನ್ನದ್ದು ತಾತ್ಕಾಲಿಕವಾಗಿ ಅಮಾನತುಪಡಿಸಿ ಕರ್ನಾಟಕ ವಕೀಲರ ಪರಿಷತ್​ ಆದೇಶಿಸಿದೆ.

ಪ್ರಕರಣವನ್ನು ಪರಿಷತ್ತಿನ ಶಿಸ್ತು ಸಮಿತಿಗೆ ವಹಿಸಲಾಗಿದೆ. ಅದರ ವಿಚಾರಣೆ ಪೂರ್ಣಗೊಳ್ಳುವವರೆಗೆ ವಕೀಲ ಹೆಚ್​​.ಮಂಜುನಾಥ್​​​ ಅವರ ಸನ್ನದ್ದು ಅಮಾನತುಪಡಿಸಲಾಗಿದೆ ಎಂದು ಪರಿಷತ್ ಅಧ್ಯಕ್ಷ ಹೆಚ್.ಎಲ್. ವಿಶಾಲ್ ರಘು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ. ಅಲ್ಲದೆ, ಕಿರುಕುಳಕ್ಕೆ ತುತ್ತಾದ ಮಹಿಳಾ ವಕೀಲೆ ಸಲ್ಲಿಸಿದ್ದ ದೂರು ಆಧರಿಸಿ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದ ನಂತರ ಈ ಆದೇಶ ನೀಡಿರುವುದಾಗಿ ತಿಳಿಸಿದೆ.

ದೂರುದಾರೆ ವಕೀಲೆಯ ದೂರಿಗೆ ವಿವರಣೆ ಕೇಳಿ ವಕೀಲ ಹೆಚ್​.ಮಂಜುನಾಥ್‌ಗೆ ನೊಟೀಸ್ ಜಾರಿಗೊಳಿಸಲಾಗಿತ್ತು. 2023ರ ಅ.2 ರಂದು ಪರಿಷತ್‌ಗೆ ಪತ್ರ ಸಲ್ಲಿಸಿದ ಅವರು, ತಮ್ಮ ವಿವರಣೆ ಸಲ್ಲಿಸಲು 10 ರಿಂದ 14 ದಿನಗಳ ಅವಕಾಶ ನೀಡಲು ಕೋರಿದ್ದರು. ಅದಾದ 30 ದಿನ ಕಳೆದರೂ ತಮ್ಮ ವಿವರಣೆ, ಆಕ್ಷೇಪಣೆ ಸಲ್ಲಿಸಲು ಅವರು ವಿಫಲವಾಗಿದ್ದಾರೆ. ಹೀಗಾಗಿ, ಪರಿಷತ್ತಿನ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು.

ದೂರುದಾರೆ ಮತ್ತು ವಕೀಲ ಹೆಚ್. ಮಂಜುನಾಥ್ ನಡುವಿನ ಸಂದೇಶಗಳನ್ನು ಪರಿಶೀಲಿಸಿದಾಗ, ಮಂಜನಾಥ್ ತನ್ನ ಕಚೇರಿಯ ಕಿರಿಯ ವಕೀಲೆಯಾಗಿದ್ದ ದೂರುದಾರೆಗೆ ಕಿರುಕುಳ ನೀಡಿರುವುದು, ಜೀವ ಬೆದರಿಕೆ ಹಾಕಿರುವುದು ಮತ್ತು ವೃತ್ತಿ ಪರವಾಗಿ ತಪ್ಪಾಗಿ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಅವರ ಸನ್ನದ್ದು ಅಮಾನತುಪಡಿಸಲಾಗುತ್ತಿದೆ ಎಂದು ಪರಿಷತ್ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ:ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ABOUT THE AUTHOR

...view details