ಕರ್ನಾಟಕ

karnataka

ETV Bharat / state

ಗ್ರಾಮೀಣ ಜನರ ಅಭಿವೃದ್ಧಿ: ಆಂಧ್ರ-ಕೇರಳಕ್ಕೆ ಎಂಎಲ್​ಸಿಗಳ ಅಧ್ಯಯನ ಪ್ರವಾಸ

ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹೆಚ್ಚಾಗಿ ಗ್ರಾಮಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಹಾಗಾಗಿ, ನಮ್ಮ ರಾಜ್ಯದಲ್ಲಿ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಜನಪ್ರತಿನಿಗಳ ಜೊತೆಗೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಆ ರಾಜ್ಯಕ್ಕೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ ಎಸ್​ ಈಶ್ವರಪ್ಪ ತಿಳಿಸಿದ್ದಾರೆ.

By

Published : Oct 9, 2020, 5:06 PM IST

KS Eshwarappa Meeting With MLC's In Bangaluru
ಪರಿಷತ್ ಸದಸ್ಯರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಗ್ರಾಮೀಣ ಜನರ ಬದುಕು ಹಸನಾಗಿಸುವಲ್ಲಿ, ಗ್ರಾಮ ಮಟ್ಟದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ತೋರುತ್ತಿರುವ ಆಂಧ್ರಪ್ರದೇಶ ಮತ್ತು ಕೇರಳಕ್ಕೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳ ನಿಯೋಗವನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಪರಿಷತ್ ಸದಸ್ಯರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

ವಿಧಾನಪರಿಷತ್​​ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಎಸ್​ ಆರ್​ ಪಾಟೀಲ್, ಮಹಾಂತೇಶ ಕವಟಗಿಮಠ, ಎನ್ ನಾರಾಯಣಸ್ವಾಮಿ, ಹಾಗೂ ಇತರ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮುಖಾಂತರ ರಾಜ್ಯದಲ್ಲಿ ಇರುವಂತಹ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ 25 ಜನ ವಿಧಾನಪರಿಷತ್ ಸದಸ್ಯರ ಜೊತೆಗೆ ವಿಶೇಷವಾದ ಸಭೆ ನಡೆಸಲಾಯಿತು. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ವಿಧಾನಪರಿಷತ್ ಸದಸ್ಯರು ಸಾಕಷ್ಟು ಅನುಭವಿಗಳಿದ್ದಾರೆ. ಅವರು ಗ್ರಾಮೀಣ ಪ್ರದೇಶದ ಜನರ ನಡುವೆಯೇ ಬದುಕುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದ ಜನರಿಂದಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಪರಿಷತ್ ಸದಸ್ಯರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

ಹಾಗಾಗಿ, ಅನೇಕ ಸಲಹೆಗಳನ್ನು ಇಂದು ಕೊಟ್ಟಿದ್ದಾರೆ. ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಏನು ಮಾಡಬೇಕು? ಗ್ರಾಮ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೇನು ಮಾಡಬೇಕು? ಬೇರೆ ಬೇರೆ ರಾಜ್ಯದಲ್ಲಿ ಯಾವ ರೂಪದಲ್ಲಿದೆ? ಎನ್ನುವ ಎಲ್ಲಾ ವಿಷಯಗಳನ್ನು ಕೂಡ ಇಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಬಹಳ ಸಂತೋಷದಿಂದ ಅವರ ಸಲಹೆಗಳನ್ನು ಸ್ವೀಕಾರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹೆಚ್ಚಾಗಿ ಗ್ರಾಮಗಳ ಅಭಿವೃದ್ಧಿ ಪಡಿಸಲು ಶ್ರಮ ಹಾಕುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಹಾಗಾಗಿ, ನಮ್ಮ ರಾಜ್ಯದಲ್ಲಿ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಜನಪ್ರತಿನಿಗಳ ಜೊತೆಗೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಆಂಧ್ರ ಹಾಗೂ ಕೇರಳಕ್ಕೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದಿನ ತಿಂಗಳು ಪ್ರವಾಸವನ್ನೂ ಆಯೋಜಿಸಲಾಗುತ್ತದೆ ಎಂದರು.

ಪರಿಷತ್ ಸದಸ್ಯರ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

ಸ್ಟಾರ್ ಹೋಟೆಲ್ ಸಭೆ ಬೇಕಿತ್ತಾ?

ಕೊರೊನಾ ಆರ್ಥಿಕ ಸಂಕಷ್ಟದ ಸಮಯದಲ್ಲಿ ಪರಿಷತ್ ಸದಸ್ಯರ ಸಭೆ ನಡೆಸಲು ಸ್ಟಾರ್ ಹೋಟೆಲ್ ಅಗತ್ಯವಿತ್ತೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಚಿಕ್ಕ ಜಾಗದಲ್ಲಿ ಸಣ್ಣದಾಗಿ ಸಭೆ ನಡೆಸಿದರೆ ನಿಮ್ಮ ಸರ್ಕಾರಕ್ಕೆ ಏನು ಬಂದಿದೆ ದಾಡಿ ಎನ್ನುತ್ತೀರಿ. ದೊಡ್ಡದಾಗಿ ಹೋಟೆಲ್​ನಲ್ಲಿ ಸಭೆ ಮಾಡಿದರೆ ದುಂದು ವೆಚ್ಚ ಅನ್ನುತ್ತೀರಿ. ಏನು ಮಾಡಿದರೂ ನಾವು ಅನ್ನಿಸಿಕೊಳ್ಳುವುದು ತಪ್ಪಲ್ಲ ಎಂದರು.

ಗ್ರಾ.ಪಂ ಮಟ್ಟದಲ್ಲಿ ಕೊರೊನಾ ತಡೆಗೆ ಕಾರ್ಯಪಡೆ:

ಪ್ರತಿ ಗ್ರಾಮ ಮಟ್ಟದಲ್ಲಿಯೂ ಕೊರೊನಾ ತಡೆಗೆ ಕಾರ್ಯಪಡೆ ತಂಡಗಳನ್ನು ರಚಿಸಿದ್ದೇವೆ. ಇದರಿಂದಾಗಿಯೇ ನಾವು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಗ್ರಾಮ ಪಂಚಾಯತ್​ ನೌಕರರು ಸಾಕಷ್ಟು ಶ್ರಮ ಹಾಕಿ ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ವಿದ್ಯಾಗಮದಿಂದ ಕೊರೊನಾ ಬಂದಿಲ್ಲ:

ವಿದ್ಯಾಗಮ ಯೋಜನೆಯಡಿ ಬಯಲು ಶಿಕ್ಷಣ ವ್ಯವಸ್ಥೆಯಲ್ಲಿ ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ವಿದ್ಯಾಗಮ ಯೋಜನೆ ಇಲ್ಲದ ಕಡೆಯಲ್ಲಿಯೂ ಕೂಡ ಕೊರೊನಾ ಬಂದಿದೆ. ಇಡೀ ದೇಶದಲ್ಲಿ, ಜಗತ್ತಿನಲ್ಲಿ ಸಾಕಷ್ಟು ಜನ ಕೊರೊನಾಗೆ ಸಿಲುಕಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಆದರೆ, ಶಾಲೆಗಳ ಆರಂಭದ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ವೈಯಕ್ತಿಕವಾಗಿ ಚುನಾಯಿತ ಪ್ರತಿನಿಧಿಗಳು ಕೂಡ ಈಗ ಶಾಲೆಗಳು ಆರಂಭವಾಗುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಸರ್ಕಾರ ಚುನಾಯಿತ ಪ್ರತಿನಿಧಿಗಳು ಹಾಗೂ ಪೋಷಕರು, ಅಧ್ಯಾಪಕರು ಎಲ್ಲರ ಅಭಿಪ್ರಾಯ ಅಂಶವನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಪರಿಷತ್​ ಸದಸ್ಯರ ಅಂತಾರಾಜ್ಯ ಪ್ರವಾಸ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ

ಶಾಲೆ ಆರಂಭ ಬೇಡ:ಯಾವ ಕಾರಣಕ್ಕೂ ಶಾಲೆಗಳು ಈಗ ಆರಂಭವಾಗಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಇತರ ಸಚಿವರು ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕೇಂದ್ರದ ಸಚಿವರು, ಸಂಸದರು ಮೃತಪಟ್ಟಿದ್ದಾರೆ. ಹಾಗಂತ ಸಂಸತ್ತನ್ನು ಮುಚ್ಚಲು ಸಾಧ್ಯವೇ? ಯಾವ ವಲಯದಲ್ಲಿ ಜನರು ಸತ್ತಿಲ್ಲ ಹೇಳಿ? ರೈತರು ಸತ್ತಿಲ್ಲವೇ? ಹಾಗಂತ ಉಳುಮೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ? ಪ್ರಪಂಚಕ್ಕೆ ಬಂದಿರುವ ರೋಗವನ್ನು ಸಂಘಟಿತರಾಗಿ ಎದುರಿಸಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇನ್ನಷ್ಟು ಗಮನ ಕೊಡುತ್ತೇವೆ ಎಂದು ಸಚಿವರು ಹೇಳಿದರು.

ABOUT THE AUTHOR

...view details