ಬೆಂಗಳೂರು: ಉಪ ಚುನಾವಣೆಯಲ್ಲಿ ಒಂದು ವೋಟ್ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡುತ್ತೇನೆ ಎಂಬ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತ್ಯುತ್ತರವಾಗಿ, ಅಧಿಕಾರ ಕಳೆದುಕೊಂಡಿದ್ದಕ್ಕೆ ಗೌಡರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.
ನಾನು ರಾಜಕೀಯ ಜೀವನದಲ್ಲಿ ಎಲ್ಲೂ ದುಡ್ಡು ಕೊಟ್ಟು ವೋಟ್ ಪಡೆಯುತ್ತೇನೆ ಎನ್ನುವ ರೀತಿ ಮಾತನಾಡಿಲ್ಲ. ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ಹೊರಹಾಕಿದರು. ಸಿಎಂ ಬಿಎಸ್ವೈ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.