ಬೆಂಗಳೂರು : ಕೆಪಿಎಸ್ಸಿ ವಿಳಂಬ ಧೋರಣೆ ಖಂಡಿಸಿ ನಾಳೆ ಕೆಪಿಎಸ್ಸಿ ಕಚೇರಿ ಮುಂದೆ ಬಿಜೆಪಿ ಶಾಸಕರಾದ ಸುರೇಶ್ ಕುಮಾರ್ ಹಾಗೂ ರವಿ ಸುಬ್ರಮಣ್ಯ ಅವರು ಪ್ರತಿಭಟನೆ ನಡೆಸಲಿದ್ದಾರೆ.
2015ರ ಸಾಲಿನ ಕೆಪಿಎಸ್ಸಿ ಪರೀಕ್ಷೆ ನಡೆದು ಫಲಿತಾಂಶ ಹೊರಬಿದ್ದರೂ, ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನ ವೇಳಾಪಟ್ಟಿ ಪ್ರಕಟಿಸದೇ ಕೆಪಿಎಸ್ಸಿ ವಿಳಂಬ ಧೋರಣೆ ಎದುರಿಸುತ್ತಿದೆ. ಹೀಗಾಗಿ ಶೀಘ್ರ ಸಂದರ್ಶನ ವೇಳಾಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಮತ್ತು ಸಂದರ್ಶನ ಪಾರದರ್ಶಕವಾಗಿರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸುರೇಶ್ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊಮ್ಮೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮುಂದೆ ಪ್ರತಿಭಟನೆ ಮಾಡುವ ಅಗತ್ಯತೆ ಉಂಟಾಗಿದೆ. ನಾನು ಕಳೆದ ಏಳು ತಿಂಗಳಲ್ಲಿ ಕನಿಷ್ಟ ಇಪ್ಪತೈದು ಬಾರಿಯಾದರೂ ಲೋಕಸೇವಾ ಆಯೋಗದ ಕಚೇರಿಗೆ ಹೋಗಿ ಸಂತ್ರಸ್ತ ಅಭ್ಯರ್ಥಿಗಳ ಸಮಸ್ಯೆಗಳ ಪರಿಹಾರ ಕುರಿತು ಆಗ್ರಹಿಸಿದ್ದೇನೆ. 27, ಡಿಸೆಂಬರ್ 2018ರಲ್ಲಿ ಒಮ್ಮೆ ಕೆಪಿಎಸ್ಸಿ ಕಟ್ಟಡದ "ಕದ ತಟ್ಟುವ ಕಾರ್ಯಕ್ರಮ"ವನ್ನೂ ಹಮ್ಮಿಕೊಂಡಿದ್ದೆ. ಕೆಲವು ಬೇಡಿಕೆಗಳಿಗೆ ಪರಿಹಾರ ದೊರಕಿರುವುದು ಸಮಾಧಾನ ತಂದಿದೆಯಾದರೂ ಬಹು ಮುಖ್ಯವಾದ ಕರ್ನಾಟಕ ರಾಜ್ಯದ ಆಡಳಿತಕ್ಕೆ ಸಂಬಂಧ ಪಟ್ಟ ಬೇಡಿಕೆ ಈವರೆಗೂ ಇತ್ಯರ್ಥವಾಗಿಲ್ಲ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.