ಬೆಂಗಳೂರು : ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಶೇ.40ರವರೆಗೂ ಶುಲ್ಕ ಏರಿಕೆ ಮಾಡುತ್ತಿವೆ. ಇದು ಅತ್ಯಂತ ಖಂಡನೀಯ. ಸಾರಾಸಗಟಾಗಿ ಈ ನಡೆಯನ್ನು ತಿರಸ್ಕರಿಸುತ್ತೇವೆ ಎಂದು ರಾಜ್ಯ ಖಾಸಗಿ ಶಾಲಾ ವ್ಯವಸ್ಥಾಪನಾ, ಕಲಿಕಾ ಮತ್ತು ಬೋಧಕೇತರ ಸಿಬ್ಬಂದಿ, ಸಮನ್ವಯಕಾರರ ಸಮಿತಿ (ಕೆಪಿಎಂಟಿಸಿಸಿ) ಸಂಚಾಲಕ ಡಿ. ಶಶಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸೆಂಚುರಿ ಕ್ಲಬ್ನಲ್ಲಿಂದು ವಿವಿಧ ಸಮನ್ವಯ ಸಂಘಟನೆಗಳ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಶೇ.10 ರಿಂದ ಶೇ.15ರಷ್ಟು ಮಾತ್ರ ಹೆಚ್ಚಿಸಲು ಅವಕಾಶವಿದೆ. ರಾಜ್ಯ ಸಂಘಟನೆಗಳು ಹಲವು ವರ್ಷ ಹೋರಾಟ ಮಾಡಿದ ಪ್ರತಿಫಲವಾಗಿ ಖಾಸಗಿ ಶಿಕ್ಷಣ ಸಂಸ್ಥೆ ಶುಲ್ಕ ನಿಗದಿಪಡಿಸುವುದು ಆಯಾ ಶಾಲೆಯ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದನ್ನೇ ಉಪಯೋಗಿಸಿಕೊಂಡು ಸರ್ಕಾರಗಳು ತಮ್ಮ ಕೆಲ ಅವೈಜ್ಞಾನಿಕ ಆದೇಶಗಳ ಮೂಲಕ ಪರೋಕ್ಷವಾಗಿ ಇಷ್ಟೇ ಶುಲ್ಕ ನಿಗದಿಪಡಿಸಬೇಕೆಂದು ಸೂಚಿಸುತ್ತಿವೆ. ಇದನ್ನು ನಾವು ನ್ಯಾಯಾಲಯದ ಮೊರೆ ಹೋಗಿ ಸರ್ಕಅರದ ಆದೇಶಗಳನ್ನು ರದ್ದುಪಡಿಸುವಂತೆ ಮಾಡಿಕೊಂಡಿದ್ದೇವೆ. ಇದಾದ ಬಳಿಕ ಬಂದಿರುವ ತೀರ್ಪು ಆಧರಿಸಿ ವ್ಯಾಪಾರೀಕರಣದ ರೀತಿ ಶುಲ್ಕ ವಿಧಿಸದೇ, ಖರ್ಚು ವೆಚ್ಚ ನಿಗದಿಪಡಿಸಿ ಶುಲ್ಕ ನಿಗದಿಪಡಿಸುವಂತೆ ತಿಳಿಸಿದೆ ಎಂಬ ಮಾಹಿತಿ ನೀಡಿದರು.
ಸರ್ಕಾರ ಪಠ್ಯಪುಸ್ತಕಕ್ಕೆ ಸರ್ಕಾರದ ಶಿಕ್ಷಣ ಇಲಾಖೆ ಎರಡು ಬಾರಿ ಶುಲ್ಕ ಹೆಚ್ಚಳ ಮಾಡಿದೆ. ಶಿಕ್ಷಣ ಇಲಾಖೆ ತಮ್ಮ ಶುಲ್ಕವನ್ನು ಹೆಚ್ಚಿಸುತ್ತಲೇ ಇದ್ದು, ಅನಿಯಮಿತವಾಗಿ ಪಠ್ಯಪುಸ್ತಕಕ್ಕೆ ಶೇ.25ಕ್ಕಿಂತ ಹೆಚ್ಚು ಪ್ರಮಾಣದ ಹೆಚ್ಚಳ ಮಾಡಿದೆ. ಹಾಗಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಹೆಚ್ಚಿಸಬೇಕೆಂದು ಇಲ್ಲ. ಶೇ.10 ರಿಂದ 15 ರಷ್ಟು ಮಾತ್ರ ಹೆಚ್ಚಳಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ನಾವು ಎಲ್ಲಾ ಸಂಘಟನೆಗಳೂ ಬದ್ಧವಾಗಿ ನಮ್ಮ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ವಿವರಿಸಿದ್ದೇವೆ. ಒಂದು ಮಗು ಶಾಲೆಗೆ ಮೊದಲ ಬಾರಿಗೆ ಸೇರಿಸುವ ಸಂದರ್ಭ ಶುಲ್ಕ ನಿಗದಿಪಡಿಸಿಕೊಳ್ಳಲಿ. ತದನಂತರ ಶೇ.10 ರಿಂಧ 15ರಷ್ಟಕ್ಕಿಂತ ಹೆಚ್ಚಳ ಮಾಡಬಾರದು ಎನ್ನುವುದು ನಮ್ಮ ಆಗ್ರಹ ಎಂದು ಡಿ.ಶಶಿಕುಮಾರ್ ಹೇಳಿದರು.