ಕರ್ನಾಟಕ

karnataka

ಕರ್ತವ್ಯಕ್ಕೆ ಹಾಜರಾಗುವ ನೌಕರರ ಮೇಲೆ ಹಲ್ಲೆ ನಡೆಸಿದರೆ ಕಾನೂನು ಕ್ರಮ: ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ

By

Published : Apr 12, 2021, 7:20 PM IST

ಸಾರಿಗೆ ನೌಕರರ ಮೇಲೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿ ಹಿಂಡುತ್ತಾ ಸಮಸ್ಯೆ ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ. ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.

DCM Laxman Savadi
ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು: ಹಲವಾರು ಅಡೆತಡೆಗಳನ್ನು ಎದುರಿಸಿಯೂ ನಮ್ಮ ನಿರೀಕ್ಷೆಯಂತೆ ಇಂದು ಮಧ್ಯಾಹ್ನದ ವೇಳೆಗೆ ಸಾರಿಗೆ ನಿಗಮಗಳ 3,200 ಕ್ಕೂ ಹೆಚ್ಚು ಬಸ್​​​​ಗಳನ್ನು ಸಂಚರಿಸಿ ಸಾರ್ವಜನಿಕರಿಗೆ ಅನುಕೂಲವಾಯಿತು. ನಮ್ಮ ಮನವಿಗೆ ಓಗುಟ್ಟು ಕರ್ತವ್ಯಕ್ಕೆ ಹಾಜರಾಗಿರುವ ಸಾರಿಗೆ ಸಿಬ್ಬಂದಿಗೆ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ನಮ್ಮ ನೌಕರರನ್ನು ತಡೆಗಟ್ಟುವ ಪ್ರಯತ್ನಕ್ಕೆ ಮತ್ತು ಅವರ ಮೇಲೆ ಹಲ್ಲೆ ನಡೆಸುವುದಕ್ಕೆ ಕೆಲವರು ಮುಂದಾಗಿದ್ದು, ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಮುಂದೆಯೂ ಇದೇ ರೀತಿ ಪ್ರಕರಣಗಳು ವರದಿಯಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮತ್ತು ನಮ್ಮ ನಿಗಮಗಳ ಅಧಿಕಾರಿಗಳ ಗಮನಕ್ಕೆ ತರಲು ಕೋರುತ್ತೇನೆ ಹಾಗೂ ಕರ್ತವ್ಯಕ್ಕೆ ಹಾಜರಾದ ನಮ್ಮ ಸಿಬ್ಬಂದಿಗೆ ಜೀವಬೆದರಿಕೆ ಎದುರಾದಾಗಲೂ ಎದೆಗುಂದದೇ ಸಾರ್ವಜನಿಕರಿಗೆ ಸಾರಿಗೆ ಸೇವೆ ಕಲ್ಪಿಸುವಲ್ಲಿ ಬದ್ಧತೆ ತೋರಿದ ನೌಕರರ ಮತ್ತು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ಸರ್ಕಾರ ಮುಕ್ತಕಂಠದಿಂದ ಪ್ರಶಂಸಿಸುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕ ವಾಹನಗಳ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ :

ಸಾರಿಗೆ ನೌಕರರ ಮುಷ್ಕರ ನಿರತರಾಗಿರುವುದರಿಂದ ಖಾಸಗಿ ವಾಹನ ಮಾಲೀಕರು ಸರ್ಕಾರದ ಕೋರಿಕೆಗೆ ಸ್ಪಂದಿಸಿ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಂದಮ್ಮನ ಉಳಿಸಲು ಸಾಲ ಮಾಡಿ ಸಾಯೋ ಪರಿಸ್ಥಿತಿ ಬಂದಿದೆ: ಸಾರಿಗೆ ನೌಕರನ ಕಣ್ಣೀರು

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯಿದೆ 1957ರ ಕಲಂ4(1) ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ಏಪ್ರಿಲ್ 15 ರೊಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ದಂಡರಹಿತವಾಗಿ ಪಾವತಿಸಲು ಏಪ್ರಿಲ್ 30 ರವರೆಗೆ ಅವಧಿಯನ್ನು ವಿಸ್ತರಿಸಿ ಇಂದು ಆದೇಶಿಸಲಾಗಿದೆ. ಇದರ ಸೂಕ್ತ ಪ್ರಯೋಜನವನ್ನು ಪಡೆದುಕೊಂಡು ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಪಂದಿಸಬೇಕು ಎಂದು ವಾಹನ ಮಾಲೀಕರಲ್ಲಿ ಡಿಸಿಎಂ ವಿನಂತಿಸಿದ್ದಾರೆ.

ಪ್ರಸ್ತುತ ಕೋವಿಡ್ 2ನೇ ಅಲೆಯ ಅಪಾಯದ ಸಂದರ್ಭ ಎದುರಾಗಿದೆ. ಅಷ್ಟೇ ಅಲ್ಲ ಯುಗಾದಿ ಪ್ರಯುಕ್ತ ನೌಕರ ವರ್ಗದವರು ಮತ್ತು ವಿದ್ಯಾರ್ಥಿಗಳು, ಮತ್ತಿತರರು ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಪ್ರಯುಕ್ತ ಅವರಿಗೆ ಅನುಕೂಲವಾಗಲು ನೌಕರರು ಕೂಡಲೇ ಕರ್ತವ್ಯಕ್ಕೆ ಮರಳಬೇಕು. ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯಗೊಂಡ ನಂತರ ನಮ್ಮ ನೌಕರ ಬಾಂಧವರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಹಲವಾರು ಬಾರಿ ಮುಷ್ಕರ ನಿರತ ನೌಕರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ.

ಇದನ್ನೂ ಓದಿ: 'ಕೈ'ವಾಡದಿಂದ ದಾರಿ ತಪ್ಪಿದ ಸಾರಿಗೆ ಸಿಬ್ಬಂದಿ; ಡಿಸಿಎಂ ಲಕ್ಷ್ಮಣ ಸವದಿ ಟೀಕೆ

ಆದರೆ, ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿ ಹಿಂಡುತ್ತಾ ಸಮಸ್ಯೆ ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿ ಕಳೆದುಕೊಳ್ಳುತ್ತಿದೆ. ಇದರಿಂದ ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ ಎಂಬ ಕಟುಸತ್ಯ ಮುಷ್ಕರನಿರತ ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆದಷ್ಟೂ ಸಹನೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಅತ್ಯಂತ ವಿವೇಚನೆಯಿಂದ ಸರ್ಕಾರವು ಹೆಜ್ಜೆ ಇಡುತ್ತಿದೆ. ಆದರೆ, ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು ಮತ್ತು ನಮ್ಮ ತಾಳ್ಮೆ ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂತಹವರ ವಿರುದ್ಧ ಮುಂದಿನ ಕ್ರಮಗಳು ಮತ್ತಷ್ಟು ಗಂಭೀರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದು ಬೇವು ಬೆಲ್ಲದ ಹಬ್ಬವಾದ ಯುಗಾದಿಯ ಪುಣ್ಯ ಸಂದರ್ಭ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ನೌಕರರ ಬದುಕಿನಲ್ಲಿ ಬೇವಿಗಿಂತ ಬೆಲ್ಲದ ಸಿಹಿಯೇ ಹೆಚ್ಚು ಸಿಗುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಆದ್ದರಿಂದ ಅವರ ಬದುಕಿನಲ್ಲಿ ಬೆಲ್ಲದ ಸವಿ ಹೆಚ್ಚಾಗಲು ಸಾರಿಗೆ ನೌಕರರು ಕೂಡಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕೆಂದು ಅವರು ಪುನರುಚ್ಛರಿಸಿದ್ದಾರೆ.

ABOUT THE AUTHOR

...view details