ಕರ್ನಾಟಕ

karnataka

ETV Bharat / state

ಕೇಯ್ನ್ಸ್ ಟೆಕ್ನಾಲಜೀಸ್​ಗೆ ಸರ್ಕಾರದಿಂದ ಸಣ್ಣ ಲೋಪವೂ ಆಗಿಲ್ಲ: ಸಚಿವ ಎಂ.ಬಿ.ಪಾಟೀಲ್ - ​ ETV Bharat Karnataka

ತೆಲಂಗಾಣ ರಾಜ್ಯದ ಪಾಲಾದ ಕೇಯ್ನ್ಸ್ ಟೆಕ್ನಾಲಜೀಸ್ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಎಂ.ಬಿ ಪಾಟೀಲ್
ಸಚಿವ ಎಂ.ಬಿ ಪಾಟೀಲ್

By ETV Bharat Karnataka Team

Published : Oct 27, 2023, 9:45 PM IST

ಬೆಂಗಳೂರು: ಸೆಮಿಕಂಡಕ್ಟರ್ ವಲಯದ ಕೇಯ್ನ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸುವ ಸಂಬಂಧ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸ್ಪಂದಿಸುವುದರಲ್ಲಿ ಸರ್ಕಾರದ ಕಡೆಯಿಂದ ಒಂದು ಸಣ್ಣ ಲೋಪವೂ ಆಗಿಲ್ಲ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಉದ್ಯಮಿ ಮೋಹನ್ ದಾಸ್ ಪೈ ಅವರು ಕೇಯ್ನ್ಸ್ ಟೆಕ್ನಾಲಜೀಸ್ ಕಂಪನಿಯು ಮೈಸೂರಿಗೆ ಬದಲಾಗಿ ತೆಲಂಗಾಣದಲ್ಲಿ ತನ್ನ ಒಎಸ್​ಎಟಿ (ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆ್ಯಂಡ್ ಟೆಸ್ಟ್) ಘಟಕದ ನಿರ್ಮಾಣ ಕಾರ್ಯ ಆರಂಭಿಸಿದೆ. ಕರ್ನಾಟಕದ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಎಕ್ಸ್‌ನಲ್ಲಿ ಪೋಸ್ಟ್​ ಹಾಕಿರುವ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, 500 ಕೋಟಿ ರೂಪಾಯಿಕ್ಕಿಂತ ಹೆಚ್ಚಿನ ಮೊತ್ತದ ಉದ್ದಿಮೆ ಸ್ಥಾಪನೆ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ಅಗತ್ಯ. ಹೀಗಿದ್ದರೂ, ನಾವು ಕೇಯ್ನ್ಸ್ ಕಂಪನಿಗೆ ಸಮಿತಿ ಸಭೆ ನಡೆಯುವುದಕ್ಕೆ ಮುಂಚಿತವಾಗಿಯೇ ಅನುಮೋದನೆ ಕೊಟ್ಟು ಸರ್ಕಾರಿ ಆದೇಶ (ಜಿಒ) ನೀಡಿದ್ದೆವು. ಇಷ್ಟೆಲ್ಲಾ ಮಾಡಿರುವಾಗ ಸರ್ಕಾರದಿಂದ ವಿಳಂಬ ಧೋರಣೆ ಎಂದು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ನಾಲ್ಕು ತಿಂಗಳಲ್ಲಿ 4,248 ಕೋಟಿ ರೂ ಬಾಕಿ ವಸೂಲಿ ಮಾಡಿ: ಅಧಿಕಾರಿಗಳಿಗೆ ಸಚಿವ ಎಂ ಬಿ ಪಾಟೀಲ್ ಗಡುವು

ಕೇಯ್ನ್ಸ್ ಕಂಪನಿಯು ತೆಲಂಗಾಣಕ್ಕೆ ಹೋಗಿರುವುದಕ್ಕೆ ತನ್ನದೇ ಕಾರಣಗಳಿರಬಹುದು. ಅವರು ನಮ್ಮಿಂದ ಇನ್ನೂ ಹೆಚ್ಚಿನ ವಿನಾಯಿತಿಗಳನ್ನು ಬಯಸಿದ್ದರೋ ಏನೋ ಗೊತ್ತಿಲ್ಲ. ನಾವು ಸರ್ಕಾರದ ನಿಯಮಗಳ ಪ್ರಕಾರ ನಿಗದಿತ ವಿನಾಯಿತಿಗಳನ್ನು ಕೊಡಲು ಸಿದ್ಧರಿದ್ದೇವೆ‌. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜೊತೆಗೂ ಚರ್ಚಿಸಿದ್ದರು. ಆದರೆ ಕಂಪನಿಯ ನಿರೀಕ್ಷೆ ಅದಕ್ಕಿಂತ ಹೆಚ್ಚಿಗೆ ಇದ್ದಾಗ ನಾವು ನಿಯಮ ಮೀರಲು ಸಾಧ್ಯವಾಗುವುದಿಲ್ಲ.

ನಾವು ಅಮೆರಿಕಕ್ಕೆ ನಿಯೋಗ ಹೋಗಿದ್ದ ಸಂದರ್ಭದಲ್ಲಿಯೂ ಕೇಯ್ನ್ಸ್ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದು ಸ್ಪಂದಿಸಿದ್ದೆವು. ಮೋಹನ್ ದಾಸ್ ಪೈ ಅವರಿಗೆ ಬಹುಶಃ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೇ ಇರಬಹುದು. ನಮ್ಮ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು ಅವರೊಂದಿಗೆ ಮಾತನಾಡಿ ವಿವರಿಸಲಿದ್ದಾರೆ. ರಾಜ್ಯವು ಹೂಡಿಕೆಯನ್ನು ಸೆಳೆಯುವುದರಲ್ಲಿ ಮುಂಚೂಣಿಯಲ್ಲೇ ಇದೆ. ಸದ್ಯದಲ್ಲೇ 25 ಸಾವಿರ ಕೋಟಿ ರೂಪಾಯಿಗಳಷ್ಟು ಹೂಡಿಕೆಗಳು ಇಲ್ಲಿ ಆಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಒತ್ತು: 9 ವಿಷನ್ ಗ್ರೂಪ್ ರಚನೆ, ಪ್ರತಿ ತಂಡಕ್ಕೂ ಗಣ್ಯ ಉದ್ಯಮಿಗಳ ನೇಮಕ

ABOUT THE AUTHOR

...view details