ಬೆಂಗಳೂರು : ಒಕ್ಕಲಿಗ ಸಂಘದಿಂದ ಕಾಡುಗೋಡಿಯ ಚನ್ನಸಂದ್ರದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಆದಿಚುಂಚನಗಿರಿ ಮಠದ ಡಾ. ನಿರ್ಮಾಲಾನಂದ ಸ್ವಾಮೀಜಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಸುತ್ತ ಹಲವಾರು ಸಮಾಜಗಳು ಧ್ವನಿ ಪಡೆದುಕೊಂಡಿವೆ. ಒಕ್ಕಲಿಗರು ನೇಗಿಲು ಹಿಡಿದು ಉತ್ತಿ ಬಿತ್ತನೆ ಮಾಡುವ ಜೊತೆಗೆ ಖಡ್ಗ ಹಿಡಿದು ನಾಡನ್ನು ಕಟ್ಟಿದ್ದಾರೆ. ಸುಮಾರು 3ನೇ ಶತಮಾನದಿಂದಲೂ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಒಕ್ಕಲಿಗ ಸಮುದಾಯ ತೊಡಗಿದೆ. ಒಂದು ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಒಕ್ಕಲಿಗ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಚನ್ನಸಂದ್ರದಲ್ಲಿ ನಾಡಪ್ರಭು ಕೆಂಪೇಗೌಡ ಪುತ್ಥಳಿಯನ್ನು ಸ್ಥಾಪಿಸಿ ನಮ್ಮ ಮುಂದಿನ ಪೀಳಿಗೆಗೆ ಕೆಂಪೇಗೌಡರ ಸಾಧನೆಯನ್ನು ತೋರಿಸುವುದಕ್ಕೆ ಪ್ರಯತ್ನ ಮಾಡಿರುವುದು ಸಂತಸದ ಸಂಗತಿ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯರ ಮೂಲ. ಹಾಗೆ ಜೊತೆಗೂಡುವುದು ಆರಂಭ, ಜೊತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದರು.
ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿದ್ದು, ಯಾರು ಜಮೀನನ್ನು ಹೊಂದಿದ್ದೀರಾ ಮಾರಾಟ ಮಾಡಬೇಡಿ. ಹೆಣ್ಣು ಮಕ್ಕಳು ಗಂಡಂದಿರಿಗೆ ಮತ್ತು ಮಕ್ಕಳಿಗೆ ಜಮೀನು ಮಾರಾಟ ಮಾಡಲು ಬಿಡಬೇಡಿ ಮತ್ತು ಸಹಿ ಹಾಕಬೇಡಿ. ಯಾಕೆಂದರೆ ಮುಂದಿನ ಕೆಲ ವರ್ಷಗಳ ನಂತರ ಕೋಟಿ ಕೋಟಿ ಬೆಲೆ ಬಾಳುವ ಜಾಗಗಳು ಇವು. ಮಕ್ಕಳಿಗೆ ಮದುವೆ ಅಥವಾ ಮನೆ ಕಟ್ಟುವ ಗುರಿ ಇದ್ದರೆ, ಸಣ್ಣಪುಟ್ಟ ಜಮೀನು ಮಾರಿಕೊಂಡು ಉಳಿದ ಜಮೀನನ್ನು ಹಾಗೆ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.