ಕರ್ನಾಟಕ

karnataka

By

Published : Sep 28, 2022, 6:41 PM IST

ETV Bharat / state

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕ ಶೀಘ್ರ ಸೇರ್ಪಡೆ: ಸಿಎಂ ಬೊಮ್ಮಾಯಿ

ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಹಲವು ಸ್ಥಳಗಳು ಕರ್ನಾಟಕದಲ್ಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬರುವ ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ - 2022ಯ ನಿಮಿತ್ತ ಆಯೋಜಿಸಿದ್ದ ನೊಂದಾಯಿತ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ 2020-26ರ (ಪರಿಷ್ಕತ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯಕ್ಕೆ ಆಗಮಿಸುತ್ತಿರುವ 30 ಲಕ್ಷ ಪ್ರವಾಸಿಗರನ್ನು ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಗೆ ಮುಟ್ಟಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿಗರ ಹೆಜ್ಜೆಗಳನ್ನು ಹೆಚ್ಚಿಸಬೇಕು. ವಿದೇಶಿಯರನ್ನು ಆಕರ್ಷಿಸಿ, ಸ್ಥಳೀಯರಿಗೆ ಕೆಲಸ ಕೊಡಬೇಕು ಎಂದರು.

ರಾಜ್ಯದಲ್ಲಿ ವಿಫುಲ ಅವಕಾಶ:ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಹಲವು ಸ್ಥಳಗಳು ಕರ್ನಾಟಕದಲ್ಲಿವೆ. ಕಲಬುರಗಿ, ಬೀದರ್ ಕೋಟೆಗಳು ಬಹಳ ಅದ್ಭುತವಾಗಿದೆ. ಇವೆಲ್ಲಾ ನಮ್ಮ ಆಸ್ತಿ. ಅವುಗಳನ್ನು ಸುಧಾರಣೆ ಮಾಡಿದರೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ನಮ್ಮ ಹಿರಿಯರಿಂದ ಬಂದಿರುವುದನ್ನು ಜಗತ್ತಿಗೆ ನಾವು ಪರಿಚಯಿಸಬೇಕು.

ಇದನ್ನು ನಮ್ಮ ಸರ್ಕಾರ ಗುರುತಿಸುವ ಕೆಲಸ ಮಾಡುತ್ತದೆ. ಸಮಗ್ರವಾಗಿ ಕೆಲಸ ಮಾಡಬೇಕು. ಪ್ರವಾಸೋದ್ಯಮದೊಂದಿಗೆ ಕಂದಾಯ, ಆಹಾರ, ಲೋಕೋಪಯೋಗಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ ಕರ್ನಾಟಕದ ಒಟ್ಟು ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗುವುದು ಎಂದರು.

ಆಗ ಪ್ರವಾಸೋದ್ಯಮ ಸಂಪೂರ್ಣವಾಗಿ ಬಳಕೆಯಾಗಿ ಕರ್ನಾಟಕವನ್ನು ಜಗತ್ರ್ಪಸಿದ್ಧ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಲಿದೆ ಎಂದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಕನಕದಾಸರು ಹುಟ್ಟಿದ್ದು, ಶಿಶುನಾಳ ಶರೀಫರ ಕರ್ಮಭೂಮಿಯಾಗಿದ್ದರೂ ಅಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ಅಲ್ಲಿನ ಪುರಾತತ್ವ ಇಲಾಖೆ ವತಿಯಿಂದ ಉತ್ಖನನ ಮಾಡಿಸಿದ ನಂತರ ಅದು ಒಂದು ಸಣ್ಣ ಅರಮನೆ ಎಂದು ತಿಳಿಸಿದರು.

ಅಲ್ಲಿ ಕನಕದಾಸರ ಕೋಟೆ ಮತ್ತು ಅರಮನೆ ಎರಡನ್ನೂ ಕಟ್ಟಲಾಗಿದೆ. 4 ಡಿ ಸ್ಟುಡಿಯೋ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡು ಕನಕದಾಸರನ್ನು ಅಲ್ಲಿ ಜೀವಂತವಾಗಿರಿಸಲಾಗಿದೆ. ಈಗ ಸಾವಿರಾರು ಜನ, ವಿಶೇಷವಾಗಿ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರ, ಆಂಧ್ರ ಎಲ್ಲೆಡೆಗಳಿಂದ ಅಲ್ಲಿಗೆ ಪ್ರವಾಸಿಗರು ಬರುತ್ತಾರೆ. ಎರಡು ಸರ್ಕಿಟ್​ಗಳನ್ನು ರೂಪಿಸಲಾಗಿದೆ.

ಸಿ. ಆರ್ ಝೆಡ್ ಸಾಧನೆ ಅದ್ಭುತವಾಗಿದೆ. ಅದರಲ್ಲಿ ಆನಂದ್ ಸಿಂಗ್ ಅವರ ಪಾತ್ರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಇದರ ಉಪಯೋಗ ಪಡೆಯೋಣ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಕೈಗೊಳ್ಳುವ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು ಎಂದರು.

ಸರ್ಕಾರ ನಿಮ್ಮ ಜೊತೆಗಿದೆ:ಪ್ರವಾಸಿ ಮಾರ್ಗದರ್ಶಿಗಳು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸುಳ್ಳು ಹೇಳುವುದು, ಬಂದವರಿಗೆ ದಾರಿ ತಪ್ಪಿಸುವುದು ಮಾಡಬಾರದು. ಕರ್ನಾಟಕದ ಪ್ರವಾಸಿ ಮಾರ್ಗದರ್ಶಿಗಳೆಂದರೆ ನಂಬರ್ ಒನ್ ಆಗಬೇಕು. ವಿಶ್ವಾಸ ಪೂರ್ವಕವಾಗಿರಬೇಕು. ಅವರು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಿಮ್ಮ ನಡೆ ನುಡಿ ಇರಬೇಕು. ಒಟ್ಟಾರೆ ಪ್ರವಾಸೋದ್ಯಮ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಮ್ಮ ಸಾಮರ್ಥ್ಯ ವನ್ನು ಪರಿಪೂರ್ಣವಾಗಿ ಬಳಸುವಂತಾಗಬೇಕು. ಸರ್ಕಾರ ನಿಮ್ಮ ಜೊತೆಗಿದೆ ಎಂದರು.

ಪಾರಂಪರಿಕ ಕಟ್ಟಡ:ರಾಜ್ಯದಲ್ಲಿ ಅದ್ಭುತವಾದ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವದ ಶಿಲ್ಪಗಳು, ಶಾಸನಗಳು, ಕಟ್ಟಡಗಳನ್ನು ಜನರಿಗೆ ಪರಿಚಯಿಸಬೇಕು. ಯೂನೆಸ್ಕೋ ಸಂಸ್ಥೆ ಹಂಪಿಯನ್ನು ಈಗಾಗಲೇ ಪಾರಂಪರಿಕ ಕಟ್ಟಡ ಎಂದು ಗುರುತಿಸಿದೆ.

ಬೇಲೂರು, ಹಳೇಬೀಡು ಕೂಡ ಈ ಪಟ್ಟಿಯಲ್ಲಿ ಸೇರಲಿದೆ. ಬಾದಾಮಿ ಗುಹೆಗಳು ಅಜಂತಾ ಗುಹೆಗಳಿಗಿಂತ ಪುರಾತನ ಹಾಗೂ ಮಹತ್ವದ್ದಾಗಿದೆ. ಆದರೆ ಪ್ರವಾಸಿಗರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇವುಗಳನ್ನು ಎಲ್ಲ ವ್ಯವಸ್ಥೆಗಳೊಂದಿಗೆ ಸೃಜನಾತ್ಮಕವಾಗಿ ಪ್ರಸಿದ್ಧಿಗೊಳಿಸಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಸರ್ಕೀಟ್: ರಾಜ್ಯದಲ್ಲಿ 2 ಪ್ರವಾಸೋದ್ಯಮ ಸರ್ಕೀಟ್​ಗಳನ್ನು ಅಂದರೆ ಬೇಲೂರು, ಹಳೆಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿತಾಣಗಳನ್ನೊಳಗೊಂಡ ಮೈಸೂರು ಸರ್ಕೀಟ್ , ಬಿಜಾಪುರ ದಿಂದ ಬಾದಾಮಿ ಪಟ್ಟದಕಲ್ಲು, ಹಂಪಿ ಇತ್ಯಾದಿಗಳನ್ನು ಒಳಗೊಂಡ ಹಂಪಿ ಸರ್ಕೀಟ್‍ಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಎರಡು ಸರ್ಕೀಟ್‍​ಗಳ ಕಾರ್ಯಾರಂಭ: ಈ ಸರ್ಕೀಟ್‍ಗಳಿಗೆ ಪ್ರವಾಸಿಗರು ವೆಬ್‍ಸೈಟ್ ಮೂಲಕ ತಮ್ಮ ಪ್ರವಾಸದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಮುಂದಿನ 2 ತಿಂಗಳ ಒಳಗಾಗಿ ಎರಡು ಸರ್ಕಿಟ್‍ಗಳನ್ನು ಕಾರ್ಯಾರಂಭ ಮಾಡಲಾಗುವುದು. ಟೆಂಪಲ್ ಟೂರಿಸಂ, ನೈಸರ್ಗಿಕ ಟೂರಿಸಂಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.

ಕರಾವಳಿ ಅಭಿವೃದ್ಧಿ ಯೋಜನೆ:ಜೋಗ ಜಲಪಾತ ಪ್ರವಾಸಿ ತಾಣ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿರಿಸಲಾಗಿದ್ದು, 600 ಕೊಠಡಿಗಳ ಪ್ರವಾಸಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಸಿಆರ್‍ಝೆಡ್ ಆದೇಶ ಕೇಂದ್ರ ಸರ್ಕಾರ ವಿನಾಯ್ತಿ ನೀಡಿದ್ದು, ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಪ್ರಮಾಣದ ಸಹಾಯವಾಗಲಿದೆ. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕರಾವಳಿ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ಓದಿ:ಅಕ್ಟೋಬರ್ 2 ರಂದು ಖಾದಿ ಉತ್ಪನ್ನ ಖರೀದಿಸಿ: ಶಾಸಕರಿಗೆ ಪತ್ರ ಬರೆದ ಸಚಿವ ಎಂಟಿಬಿ ನಾಗರಾಜ

ABOUT THE AUTHOR

...view details