ಕರ್ನಾಟಕ

karnataka

ETV Bharat / state

ರಾಜ್ಯ ವಿಶ್ವವಿದ್ಯಾನಿಲಯಗಳ 2ನೇ ತಿದ್ದುಪಡಿ ವಿಧೇಯಕಕ್ಕೆ ತಡೆ

ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗೈರಿನಿಂದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಸದನದ ಸದಸ್ಯರನ್ನು ಕೋರಿದರು. ಆಡಳಿತ ಪಕ್ಷ ಬಿಜೆಪಿಯ ಸದಸ್ಯರು, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮೂರು ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರೆ ಆರ್ಥಿಕ‌ ಹೊರೆ ಬೀಳಲಿದೆ ಎಂದು ವಿರೋಧ ವ್ಯಕ್ತಪಡಿಸಿದರು.

By

Published : Sep 26, 2020, 5:04 AM IST

State Universities
ರಾಜ್ಯ ವಿಶ್ವವಿದ್ಯಾನಿಲಯ

ಬೆಂಗಳೂರು: ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಯಾಗಿದ್ದ ಕರ್ನಾಟಕ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ.

ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗೈರಿನಿಂದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಸದನದ ಸದಸ್ಯರನ್ನು ಕೋರಿದರು. ಆಡಳಿತ ಪಕ್ಷ ಬಿಜೆಪಿಯ ಸದಸ್ಯರು, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮೂರು ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರೆ ಆರ್ಥಿಕ‌ ಹೊರೆ ಬೀಳಲಿದೆ. ಇದರಿಂದ ಶಿಕ್ಷಣದ ಗುಣಮಟ್ಟ ವೃದ್ಧಿಸುವುದಿಲ್ಲ. ಈ ವಿಧೇಯಕವನ್ನು‌ ಮರುಪರಿಶೀಲನೆ ನಡೆಸಿ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವ ಬಗ್ಗೆ ಚಿಂತನೆ ನಡೆಸುವುದು ಸೂಕ್ತ. ಹೀಗಾಗಿ ವಿಧೇಯಕ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಈ ವಿಧೇಯಕವು ಕಳೆದ ಸರ್ಕಾರದ ಅವಧಿಯಲ್ಲಿ ಸಿದ್ದಪಡಿಸಿದ್ದು, ನಮ್ಮ ಸರ್ಕಾರವು ಅನುಷ್ಠಾನಗೊಳಿಸುತ್ತಿದೆ ಅಷ್ಟೆ. ಈ ಹಿನ್ನೆಲೆಯಲ್ಲಿ ಸಹಕಾರ ನೀಡಿ ವಿಧೇಯಕ ಅಂಗೀಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ, ಸದಸ್ಯರು ಒಪ್ಪದೆ ಇದ್ದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದ್ಯಕ್ಕೆ ವಿಧೇಯಕವನ್ನು ತಡೆ ಹಿಡಿಯಿರಿ. ಅಲ್ಲದೇ, ಉಪಮುಖ್ಯಮಂತ್ರಿಗಳು ಸಹ ಇಲ್ಲ ಎಂದು ಹೇಳಿದರು. ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧೇಯಕವನ್ನು ತಡೆಹಿಡಿಯುವಂತೆ ಸಂಜ್ಞೆ ಮೂಲಕ ತಿಳಿಸಿದರು. ಆಗ ಮಾಧುಸ್ವಾಮಿ ಅವರು ವಿಧೇಯಕವನ್ನು ತಡೆಹಿಡಿದರು.

ಏನಿದು ವಿಧೇಯಕ?

ಬೆಂಗಳೂರಿನಲ್ಲಿರುವ ವಿಜ್ಞಾನ ಕಾಲೇಜಿಗೆ ಸ್ವಾಯತತ್ತೆ ನೀಡಿ ನೃಪತುಂಗ ವಿಶ್ವವಿದ್ಯಾಲಯ, ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯ ಮತ್ತು ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು, ಮೈಸೂರಿನಲ್ಲಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾತ್ರ ರಾಜ್ಯದಲ್ಲಿ ಕಾರ್ಯನಿರ್ವಹಿಸಬೇಕು. ಇತರೆ ವಿಶ್ವವಿದ್ಯಾಲಯಗಳು ನಡೆಸುತ್ತಿರುವ ದೂರಶಿಕ್ಷಣಕ್ಕೆ ಮಾನ್ಯತೆ ಇಲ್ಲ ಎಂಬ ಅಂಶವು ವಿಧೇಯಕದಲ್ಲಿದೆ.

ಈ ವಿಧೇಯಕವು ಸುಗ್ರೀವಾಜ್ಞೆ ಮೂಲಕ ಜಾರಿಯಾಗಿರುವುದಿರಿಂದ ಆರು ತಿಂಗಳು ಮಾತ್ರ ಮಾನ್ಯತೆ ಇರಲಿದ್ದು, ಮತ್ತೊಮ್ಮೆ ಸುಗ್ರೀವಾಜ್ಞೆ ಮೂಲಕ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಮತ್ತೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ಮುಂದಿನ ಅಧಿವೇಶನದಲ್ಲಿ ಮಂಡಿಸಬಹುದು.

ವಿಧೇಯಕ ವಿರೋಧಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ, ಯುಜಿಸಿಯವರು ಒಮ್ಮೆ 50 ಕೋಟಿ ರೂ. ಅನುದಾನ ನೀಡಬೇಕಾದರೆ ಕೆಲವು ಕಾಲೇಜನ್ನು ವಿಶ್ವವಿದ್ಯಾನಿಲಯ ದರ್ಜೆಗೇರಿಸಬೇಕು ಎಂಬ ನಿಬಂಧನೆ ಹಾಕಿದ್ದಾರೆ. 50 ಕೋಟಿ ರೂ. ಅನುದಾನಕ್ಕಾಗಿ ವಿಶ್ವವಿದ್ಯಾನಿಲಯ ಮಾನ್ಯತೆ ನೀಡಿದರೆ ವರ್ಷಪೂರ್ತಿ ಸರ್ಕಾರ ಕೋಟ್ಯಂತರ ರು. ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ರಾಜ್ಯ ಸರ್ಕಾರದ ಆರ್ಥಿಕತೆಗೆ ಹೊರೆಯಾಗಲಿದೆ ಎಂದು ಮನದಟ್ಟು ಮಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸದಸ್ಯರಾದ ಅರವಿಂದ ಲಿಂಬಾವಳಿ, ವೀರಣ್ಣ ಚರಂತಿಮಠ ಸೇರಿದಂತೆ ಇತರರು ಸಹ ವಿಧೇಯಕ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು. ಹೀಗಾಗಿ ವಿಧೇಯಕವನ್ನು ತಡೆ ಹಿಡಿಯಲಾಯಿತು.

ABOUT THE AUTHOR

...view details