ಬೆಂಗಳೂರು:ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಮುಂತಾದ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರಗಳ ನಡುವೆ ಕೋಮು ಸಾಮರಸ್ಯ ಮೂಡಿಸುವ ಶ್ಲಾಘನೀಯ ಕಾರ್ಯಗಳೂ ಅಲ್ಲಲ್ಲಿ ನಡೆಯುತ್ತಿವೆ. ಈಗ ರಾಜ್ಯದಲ್ಲೂ ಕೋಮು ಸಾಮರಸ್ಯದ ಘಟನೆಯೊಂದಕ್ಕೆ ನಡೆದಿದೆ. ಬೆಂಗಳೂರಿನಲ್ಲಿ ಮಂಗಳವಾರ ಮುಸ್ಲಿಮೇತರ ಮಹಿಳೆಯರು ರಂಜಾನ್ ಉಪವಾಸ ಆಚರಿಸಿ, ಮುಸ್ಲಿಂ ಮಹಿಳೆಯರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಇಫ್ತಾರ್ ಕೂಟದಲ್ಲಿ ಭಾಗಿಯಾಗುವ ವೇಳೆ ಹಿಜಾಬ್ ಕೂಡಾ ಧರಿಸಿದ್ದು, ಕೋಮು ಸಾಮರಸ್ಯವನ್ನು ಎತ್ತಿ ಹಿಡಿಯುವಂತಿದೆ.
ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮಾತನಾಡಿ, ನಾವು ಒಟ್ಟಿಗೆ ಉತ್ತಮ ಸಮಯ ಕಳೆದಿದ್ದೇವೆ. ನಾವು ಸ್ನೇಹ ಮತ್ತು ಪ್ರೀತಿಗಾಗಿ ಇಲ್ಲಿ ಸೇರಿದ್ದು, ಈ ವೇಳೆ ಹಾಡಿದ್ದೇವೆ ಮತ್ತು ಮಾತನಾಡಿದ್ದೇವೆ. ಮುಸ್ಲಿಮ್ ಮಹಿಳೆಯರು ನಮಗೆ ಉಪವಾಸ ಮಹತ್ವವನ್ನು ವಿವರಿಸಿದ್ದಾರೆ. ಉಪವಾಸ ಮಾಡುವುದರಿಂದ ಹೇಗೆ ಸಹನೆ ಹೆಚ್ಚುತ್ತದೆ? ಹೇಗೆ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ ಎಂದು ವಿವರಣೆ ನೀಡಿದ್ದಾರೆ. ಹಿಜಾಬ್ ಧರಿಸುವುದರಿಂದ ಕಷ್ಟ ಎಂದು ನಾನು ಅರಿತಿದ್ದೆ. ಅದರೆ ಅದು ಕಷ್ಟವಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇಫ್ತಾರ್ನಲ್ಲಿ ಭಾಗವಹಿಸಿದ ಅತಿಥಿಗಳಿಗೆ ಮುಸ್ಲಿಮ್ ಮಹಿಳೆಯಾದ ಸೈಯದ್ ನಸ್ರೀನ್ ತೊಡಿಸಿದರು. ಹಿಜಾಬ್ ಧರಿಸಿ ಮತ್ತು ಸಾಂಕೇತಿಕವಾಗಿ ನಮಾಜ್ನಲ್ಲಿ ಪಾಲ್ಗೊಳ್ಳಲಾಗಿತ್ತು. ನನಗೆ ತುಂಬಾ ಸಂತೋಷವಾಯಿತು. ನಸ್ರೀನ್ ನಮಗೆ ಹಿಜಾಜ್ ಉಡುಪುಗಳನ್ನು ತೊಡಿಸಿದರು. ಅದು ತುಂಬಾ ಹೃದಯಸ್ಪರ್ಶಿಯಾಗಿತ್ತು ಎಂದು ವಿದ್ಯಾ ದಿನಕರ್ ಹೇಳಿದ್ದಾರೆ.