ಸಿಎಂ ಭಗವಂತ್ ಸಿಂಗ್ ಮಾನ್ ಭರ್ಜರಿ ರೋಡ್ ಶೋ ನಡೆಸಿದರು. ಬೆಂಗಳೂರು:ಕರ್ನಾಟಕ ರಾಜ್ಯದ ಜನರು ಡಬಲ್ ಇಂಜಿನ್ ಸರಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸುವ ಶಾಸಕರು ಚುನಾವಣೆಯ ನಂತರ ತಮ್ಮನ್ನು ಮಾರಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯಕ್ಕೆ ಶುದ್ದ ಆಡಳಿತ ನೀಡುವ ಹೊಸ ಇಂಜಿನ್ ಸರಕಾರದ ಅವಶ್ಯಕತೆ ಇದ್ದು, ಆಮ್ ಆದ್ಮಿ ಪಕ್ಷವನ್ನು ಜನ ಬೆಂಬಲಿಸಲಿದ್ದಾರೆ ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಹೇಳಿದರು.
ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್ ರಾಥೋಡ್ ಪರ ಭರ್ಜರಿ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದ ಮಾನ್, 20 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಕಿತ್ತೊಗೆದು ಡಬಲ್ ಇಂಜಿನ್ ಬಿಜೆಪಿ ಸರಕಾರ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣವನ್ನು ಡಬಲ್ ಮಾಡಿದೆ.
ಇಂಥ ದುರಾಡಳಿತದ ವಿರುದ್ದ ಜನರು ದೆಹಲಿ ಹಾಗೂ ಪಂಜಾಬ್ನಲ್ಲಿ ಮತ ನೀಡಿದ್ದಾರೆ. ಈ ಮೂಲಕ ಅತ್ಯುತ್ತಮ ಭ್ರಷ್ಟಾಚಾರರಹಿತ ಆಡಳಿತ ಕಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಶುದ್ಧ ಆಡಳಿತ ನೀಡುವ ಆಪ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಕಚೇರಿಯ ಮುಂದೆ ಶಾಸಕರ ಎಕ್ಸ್ಚೇಂಜ್ ಕೇಂದ್ರ ಎನ್ನುವ ಬೋರ್ಡ್ ಹಾಕುವ ಸಂದರ್ಭ ಬಂದಿದೆ. ದೇಶದಾದ್ಯಂತ ಕಾಂಗ್ರೆಸ್ನಿಂದ ಗೆಲುವು ಸಾಧಿಸುವ ಶಾಸಕರು ಚುನಾವಣೆಯ ನಂತರ ತಮ್ಮನ್ನು ತಾವು ಮಾರಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅಭ್ಯರ್ಥಿ ಸುರೇಶ್ ರಾಥೋಡ್ ಮಾತನಾಡಿ, ಪುಲಕೇಶಿನಗರದ ಜನರು ಹಿಂದಿನ ಶಾಸಕರುಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ಅಭಿವೃದ್ದಿ ಪರ ಒಲವು ತೋರಿದ್ದು, ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು. ಟ್ಯಾನರಿ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ವಿಧಾನಸಭಾಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿತು. ರೋಡ್ ಶೋನಲ್ಲಿ ಸಾವಿರಾರು ಜನರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇದನ್ನೂಓದಿ:ನೇಪಥ್ಯಕ್ಕೆ ಸರಿದ ಬಿಜೆಪಿ ಹಿರಿಯರು: ನಾಲ್ಕು ದಶಕದಲ್ಲಿ ಮೊದಲ ಬಾರಿ ಕಣದಿಂದ ಹೊರಗುಳಿದ ಬಿಎಸ್ವೈ