ಕರ್ನಾಟಕ

karnataka

ಪರಿಷತ್​​ನಲ್ಲಿ ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ

By

Published : Sep 25, 2020, 4:53 PM IST

ವಿಧಾನ ಪರಿಷತ್​​ನಲ್ಲಿ ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ 2020ಕ್ಕೆ ಅಂಗೀಕರಿಸಲ್ಪಟ್ಟಿತು. ಗದ್ದಲದ ನಡುವೆ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ತಿದ್ದುಪಡಿಯಿಂದ ವಾರ್ಡ್​ ಸಮಿತಿಯಲ್ಲಿ ತಜ್ಞರ ಸೇರಿಸಲು ಅವಕಾಶ ನೀಡಲಾಗಿದೆ.

Vidhana parisdhad session
ವಿಧಾನ ಪರಿಷತ್ ಕಲಾಪ

ಬೆಂಗಳೂರು: ಪುರಸಭೆ ಮತ್ತು ನಗರಸಭೆಗಳಲ್ಲಿ ಸದಸ್ಯರ ಜೊತೆ ಸ್ಥಳೀಯರು ಮತ್ತು ತಜ್ಞರನ್ನು ಸೇರಿಸಿ ವಾರ್ಡ್ ಸಮಿತಿ ರಚಿಸುವ ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ 2020 ಅನ್ನು ವಿಧಾನ ಪರಿಷತ್ ಅಂಗೀಕರಿಸಿತು.

ಪೌರಾಡಳಿತ ಸಚಿವ ಡಾ.ನಾರಾಯಣಸ್ವಾಮಿ, ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ 2020 ಅನ್ನು ಪರಿಷತ್​​ನಲ್ಲಿ ಮಂಡಿಸಿದರು. ಸ್ಥಳಿಯ ಸಂಸ್ಥೆಗಳ ಅಭಿವೃದ್ಧಿ, ಆಸ್ತಿ-ಪಾಸ್ತಿ ರಕ್ಷಣೆಗೆ ಪೂರಕವಾದ ವಿಧೇಯಕವನ್ನು ಅಂಗೀಕರಿಸುವಂತೆ ಸದನಕ್ಕೆ ಮನವಿ ಮಾಡಿದರು.

ಸದನದಲ್ಲಿ ಈ ವೇಳೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಆಸ್ತಿ ರಕ್ಷಣೆ, ಉದ್ಯಾನವನ ಅಭಿವೃದ್ಧಿ, ಸ್ಥಳೀಯರಿಂದ ಕ್ರಿಯಾ ಯೋಜನೆ ತರಿಸಿಕೊಂಡು ಯೋಜನೆ ರೂಪಿಸುವುದು ಅವಶ್ಯಕ. ಚುನಾಯಿತರು, ನೆರೆಹೊರೆ ಸಮಿತಿ, ಪ್ರದೇಶ ಸಭಾ ಹೀಗೆ ಮೂರು ಸಮಿತಿ ರಚಿಸಿ, ಆಗಬೇಕಾದ ಕಾಮಗಾರಿ, ಉತ್ತರದಾಯಿತ್ವ ವಹಿಸಿಕೊಳ್ಳುವ ಜವಾಬ್ದಾರಿ ಸಾಧ್ಯವಾಗಲಿದೆ, ಇದರಿಂದ ಅಭಿವೃದ್ಧಿ ಸಾಧ್ಯ ಎಂದರು.

ಬೆಂಗಳೂರಿನಲ್ಲಿ ಸಮಿತಿ ರಚಿಸಿದಾಗ ಬೇಕಾದವರನ್ನು ಸಮಿತಿಗೆ ಸೇರಿಸಿ ಬೇಕಾದಂತೆ ಬೇಕಾದವರಿಗೆ ಕಾಮಗಾರಿ ಕೊಡಿಸಿ ಅವ್ಯವಹಾರ ನಡೆಸಲಾಗಿದೆ, ಸ್ಥಳಿಯ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಶಾಮೀಲಾಗಿ ಅವ್ಯವಹಾರ ಎಸಗುತ್ತಿದ್ದಾರೆ ಹಾಗಾಗಿ ವಾರ್ಡ್ ಸಮಿತಿ, ನೆರೆ ಹೊರೆ ಸಮಿತಿ, ಪ್ರದೇಶ ಸಭಾ ನೇತೃತ್ವದಲ್ಲಿ ಕ್ರಿಯಾ ಯೋಜನೆ ಅನುಷ್ಠಾನ ಆಗಬೇಕು. ಇದನ್ನು ಮೇಲುಸ್ತುವಾರಿ ಮಾಡಲು ಸಮಿತಿ ರಚಿಸಿ ಎಂದು ಸಲಹೆ ನೀಡಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಗಣ್ಯವ್ಯಕ್ತಿಗಳಿಂದ ಸಲಹೆ ಸೂಚನೆ ನೀಡಲು ವಾರ್ಡ್ ಸಮಿತಿ ರಚನೆ ಮಾಡುತ್ತಿದೆ. ಆದರೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡಿಲ್ಲ, ಸಭಾಪತಿ, ಸಭಾ ನಾಯಕ, ಪ್ರತಿಪಕ್ಷ ನಾಯಕರು ಸ್ಥಳೀಯ ಸಂಸ್ಥೆಗಳಿಂದಲೇ ಆಯ್ಕೆಯಾಗಿದ್ದಾರೆ, ಆದರೆ 268 ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳಿದ್ದಾರೆ, ಎರಡು ವರ್ಷದಿಂದ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಿಲ್ಲ, ಮೀಸಲಾತಿ ಬಗ್ಗೆ ಮಾರ್ಗಸೂಚಿ ಮಾಡಲಾಗಿದೆ. ನಮ್ಮ ನಮ್ಮ‌ ಸ್ವಾರ್ಥಕ್ಕೆ‌ ಮೀಸಲಾತಿ ಬದಲಾಯಿಸಿದರೆ ಕೋರ್ಟ್​​​ಗೆ ಹೋಗುತ್ತಾರೆ. ಅದರಲ್ಲಿ ತಪ್ಪೇನಿದೆ, ನಮ್ಮ ಸರ್ಕಾರದ ಎಜಿ ಸರಿಯಾಗಿ ಕೋರ್ಟ್​​​ಗೆ ಮನವರಿಕೆ ಮಾಡಿ ತೀರ್ಪು ಬರುವಂತೆ ಮಾಡಬೇಕಿತ್ತು. ಇದಕ್ಕೆ ಎರಡು ವರ್ಷ ಬೇಕಿತ್ತಾ? ಕೋರ್ಟ್​​ನಲ್ಲಿದೆ ಎನ್ನುತ್ತೀರಿ, ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ ಎನ್ನುತ್ತೀರಿ, ಹಿಂದಿನ‌ತಪ್ಪು ನೀವು ಸರಿಪಡಿಸಬಾರದಾ?, ಕೋರ್ಟ್​​​ಗೆ ಮನವರಿಕೆ ಮಾಡಿಕೊಟ್ಟು ಮಾರ್ಗಸೂಚಿಯಂತೆ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಿ ಎಂದು ಆಗ್ರಹಿಸಿದರು.

ಇನ್ನು ಈ ಕುರಿತ ಚರ್ಚೆ ವಿಕೋಪಕ್ಕೆ ತೆರಳಿದಾಗ ಮರಿತಿಬ್ಬೇಗೌಡ ಪಕ್ಷಿಗಳ ಕಥೆ ಉಲ್ಲೇಖಿಸಿದರು. ನೇರವಾಗಿ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಅವರನ್ನು ಪಕ್ಷಿಯೊಂದರ ಹೆಸರಿನಿಂದ ಕರೆದರು. ಇದಕ್ಕೆ ಬಿಜೆಪಿ‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮರಿತಿಬ್ಬೇಗೌಡರ ಪದ ಬಳಕೆ ಸರಿಯಲ್ಲ, ಕಡತದಿಂದ‌ ತೆಗೆಯಿರಿ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಮನವಿ ಮಾಡಿದರು.

ಬಳಿಕ ಕಡತದಿಂದ ಪದಗಳನ್ನು ತೆಗೆಯುವಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು. ಈ ವೇಳೆಯೂ ಸದನದಲ್ಲಿ ಗದ್ದಲ, ಮಾತಿನ ಚಕಮಕಿ ಮುಂದುವರೆದ ಹಿನ್ನೆಲೆ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ABOUT THE AUTHOR

...view details