ಕರ್ನಾಟಕ

karnataka

ETV Bharat / state

ವಿಧಾನಮಂಡಲದಲ್ಲಿ ಇಂದು..: ಸಿದ್ದೇಶ್ವರ ಶ್ರೀ ಸೇರಿದಂತೆ ಗಣ್ಯರಿಗೆ ಸಂತಾಪ, ಸೋಮವಾರಕ್ಕೆ ಕಲಾಪ - ವಿಧಾನ ಪರಿಷತ್ ನಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು. ಬಳಿಕ ಸದಸ್ಯರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.

ವಿಧಾನ ಪರಿಷತ್
ವಿಧಾನ ಪರಿಷತ್

By

Published : Feb 10, 2023, 3:53 PM IST

Updated : Feb 10, 2023, 5:39 PM IST

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭಾಷಣ ಮಾಡಿದರು.ರಾಜ್ಯಪಾಲರ ಭಾಷಣ ಮುಕ್ತಾಯದ ಬಳಿಕ ಸಮಾವೇಶಗೊಂಡ ವಿಧಾನ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಾ.ಎಚ್.ಡಿ.ಲಮಾಣಿ, ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎಚ್.ಚಂದ್ರಶೇಖರ್, ಖ್ಯಾತ ಲೇಖಕಿ ಹಾಗೂ ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್, ಹಿರಿಯ ಶಿಕ್ಷಣ ತಜ್ಞ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಪಾಂಡುರಂಗ ಶೆಟ್ಟಿ, ನಾಡಿನ ಹಿರಿಯ ಗಮಕಿ ಹಾಗೂ ಸುಗಮ ಸಂಗೀತಗಾರ ಚಂದ್ರಶೇಖರ್ ಕೆದ್ಲಾಯ, ಕನ್ನಡದ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಹಿರಿಯ ವಿಮರ್ಶಕ ಕೆ.ವಿ.ತಿರುಮಲೇಶ್, ಜನಪ್ರಿಯ ಗಾಯಕಿ ವಾಣಿ ಜಯರಾಂ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಿ.ಕೆ.ಎಸ್ ವರ್ಮ ಅವರಿಗೆ ಸಂತಾಪ ಸಲ್ಲಿಸಲಾಯಿತು. ನಂತರ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಂತಾಪ ಸೂಚಿಸಿದರು. ಅಗಲಿದ ಗಣ್ಯರಿಗೆ ಗೌರವ ಸೂಚಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ:ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿ, ಆಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ, ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭವಿಗಳೂ, ಮೃದು ಸ್ವಭಾವದವರೂ ಆಗಿದ್ದ ಪೂಜ್ಯರು, ಕನ್ನಡ, ಸಂಸ್ಕೃತ ಇಂಗ್ಲಿಷ್‌, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಪುಣರಾಗಿದ್ದರು. ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಹೊಂದಿದ್ದ ಶ್ರೀಯುತರು ಸ್ವಯಂ ಪ್ರೇರಿತ ಸ್ವಯಂ ಸೇವಕರಾಗಿದ್ದರು ಎಂದು ಹೇಳಿದರು.

'ದಾಸನಾಗು ವಿಶೇಷನಾಗು ಹಾಗೂ ಏನಾದರೂ ಸರಿಯೇ ಮೊದಲು ಮಾನವನಾಗು ಗೀತೆ'ಯನ್ನು ಸದನದಲ್ಲಿ ಹಾಡುವ ಮೂಲಕ ತಮ್ಮ ನುಡಿ ನಮನದಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಗಮನ ಸೆಳೆದರು. ಸಂತಾಪ ಹಾಗೂ ನುಡಿ ನಮನದ ಬಳಿಕ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ:ದೇಶದಲ್ಲೇ ಕರ್ನಾಟಕ ಪ್ರಗತಿಪರ ರಾಜ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Last Updated : Feb 10, 2023, 5:39 PM IST

ABOUT THE AUTHOR

...view details