ಬೆಂಗಳೂರು: ಕಾಡು ಕುರುಬ ಹಾಗೂ ಗೊಂಡ ಕುರುಬ ಪಂಗಡವನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಬಂಧಿತ ಇಲಾಖೆಗೆ ಸೂಚನೆ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 4 ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಪಂಗಡವಾದ ಕಾಡು ಕುರಬ ಹಾಗೂ ಗೊಂಡ ಕುರುಬರನ್ನು ಶಿಫಾರಸು ಮಾಡಿದೆ. ಮೈಸೂರು ವಿವಿಯ ಮಾನವ ಶಾಸ್ತ್ರ ಅಧ್ಯಯನ ವಿಭಾಗಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ತಿಳಿಸಲಾಗಿತ್ತು. ಅವರು ನಿನ್ನೆ ಅಧ್ಯಯನ ವರದಿ ನೀಡಿದ್ದರು. ಅದು ಕೂಡ ಸಂಪುಟದಲ್ಲಿ ಚರ್ಚೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"ಇದರಲ್ಲಿ ನಮ್ಮ ಪಾತ್ರ ಇಲ್ಲ. ಯಾವ ರೀತಿ ಎಸ್ಸಿ ಹಾಗೂ ಎಸ್ಟಿ ಮೀಸಲಾತಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಈ ಸಂಬಂಧ ಸಂಬಂಧಿತ ಇಲಾಖೆಗೆ ಶಿಫಾರಸು ಮಾಡಲು ನಿರ್ದೇಶನ ನೀಡಲಾಗಿದೆ. ಕಾನೂನು ಪ್ರಕಾರ, ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿನ ಅರ್ಹತೆಗಳನ್ನು ಪರಿಗಣಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗೆ ಸೂಚನೆ ನೀಡಲಾಗಿದೆ" ಎಂದು ಸಿಎಂ ಸ್ಪಷ್ಟಪಡಿಸಿದರು.
ಜಂಗಮರಿಗೆ ಎಸ್ಟಿ ಸರ್ಟಿಫಿಕೇಟ್ ನೀಡುವ ವಿಚಾರವಾಗಿ ಒಂದು ಸಮಿತಿ ಮಾಡಿದ್ದೇವೆ. ಆ ಸಮಿತಿಯ ವರದಿ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಣ್ಣ ಸಣ್ಣ ಸಮಾಜ ಇದೆ. ಅವು ಯಾವ ಲೀಸ್ಟ್ನಲ್ಲೂ ಇಲ್ಲ. ಅದರ ವರದಿ ಪಡೆಯಲಾಗಿದೆ. ಅದರ ಸಂಪೂರ್ಣ ಅಧ್ಯಯನ ಮಾಡಿ, ಮುಂದಿನ ಕ್ಯಾಬಿನೆಟ್ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಸಂಪುಟದ ಇತರ ಪ್ರಮುಖ ತೀರ್ಮಾನ:1.-2022-23 ಸಾಲಿನಿಂದ ಪ್ರಾರಂಭವಾಗಿರುವ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಬರುವ ಕೆಲವು ಚಿಕಿತ್ಸೆಗಳಿಗೆ ಹಿಂದಿನ ಯಶಸ್ವಿನಿ ಯೋಜನೆಯ ದರಗಳನ್ನೇ ಅಳವಡಿಸಿಕೊಳ್ಳಲು 24.01.2023 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ.
2.ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಡಿ ಒಟ್ಟು 66.99 ಕೋಟಿ ಹಾರ್ಡ್ ವೇರ್ ಸಾಮಾಗ್ರಿಗಳನ್ನು ಖರೀದಿಸಲು ಅನುಮೋದನೆ.
3.ಅಂಗವಿಕಲ ಸರ್ಕಾರಿ ನೌಕರರಿಗೆ ಗುಂಪು ಡಿ, ಗುಂಪು ಸಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಒಪ್ಪಿಗೆ.
4.ನೂತನ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರವನ್ನು ರೂ. 592.86 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
5.ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ ಮಿತಿಯನ್ನು ರೂ. 50.00 ಲಕ್ಷಗಳಿಂದ ರೂ. 1 ಕೋಟಿಗೆ ಹೆಚ್ಚಿಸುವ" ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ 2023"ನ್ನು ಅಧ್ಯಾದೇಶ ರೂಪದಲ್ಲಿ ಹೊರಡಿಸುವ ಬಗ್ಗೆ ಅನುಮೋದನೆ.
6.ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿನ 10 ಮಾದರಿ ಪ.ಜಾತಿ/ಪ.ವರ್ಗದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಮೂಲ ಅಂದಾಜು ರೂ. 237.50 ಕೋಟಿಗಳಿದ್ದು, ಪರಿಷ್ಕೃತ ಅಂದಾಜು ರೂ. 347.35 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ.
7. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 11 ಕ್ರಿಮಿನಲ್ ಮೊಕದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆತಕ್ಕೆ ಸಮ್ಮತಿ.
8.ಕರ್ನಾಟಕ ಗೃಹ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ, ಪುಲಿಮಂಚಿ ಹಾಗೂ ಸಸಿಮಾಕನಹಳ್ಳಿ ಗ್ರಾಮದ ಒಟ್ಟು 71 ಎಕರೆ 29 ಗುಂಟೆ ಜಮೀನುಗಳನ್ನು ಶೇ. 50:50 ರ ಅನುಪಾತದ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ರೂ. 15 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ರೂ. 113.77 ಕೋಟಿಗಳ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ.
9.ಧಾರವಾಡ ಜಿಲ್ಲೆ, ಧಾರವಾಡ ತಾಲೂಕು ಮತ್ತು ಹೋಬಳಿ ಅತ್ತಿಕೊಳ್ಳ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ 26.28 ಎಕರೆ ಜಮೀನು 50:50 ಅನುಪಾತದ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿದೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಪ್ರತಿ ಎಕರೆಗೆ ರೂ. 10 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಹಾಗೂ ರೂ. 43.36 ಕೋಟಿಗಳ ಮೊತ್ತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ.
10.ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ ತಾಲ್ಲೂಕು ಕೊಪ್ಪಳ ಜಿಲ್ಲೆ ಕೊಪ್ಪಳ ತಾಲ್ಲೂಕಿನ ಇರಕಲಗಡ ಗ್ರಾಮ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು ಕ್ಷೇತ್ರ 25.15 ಎಕರೆ ಜಮೀನನ್ನು 60:40 ಅನುಪಾತದ ವಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ನೀಡಲು ಹಾಗೂ ಯೋಜನೆಯ ವೆಚ್ಚ ರೂ. 27.50 ಕೋಟಿಗಳಿದ್ದು, ಪ್ರತಿ ಎಕರೆಗೆ ರೂ. 5 ಲಕ್ಷಗಳ ಮುಂಗಡ ಹಣವನ್ನು ಭೂ ಮಾಲೀಕರಿಗೆ ನೀಡಲು ಅನುಮೋದನೆ.
11.ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಸರಬರಾಜು (PNG) ಮತ್ತು ವಾಹನಗಳಿಗೆ ಕಂಪ್ರೆಸ್ ನೈಸರ್ಗಿಕ ಅನಿಲ (CNG) ಒದಗಿಸುವ ಕುರಿತಾದ ನಗರ ಅನಿಲ ವಿತರಣಾ ಜಾಲದ ಅಭಿವೃದ್ಧಿ ರಾಜ್ಯ ನೀತಿ'ಗೆ ಅನುಮೋದನೆ.
12. ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ಕಾಮಗಾರಿಗಳ ರೂ. 182.46 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.