ಬೆಂಗಳೂರು:ಪ್ರವಾಹದಿಂದ ಹಾನಿಗೊಳಗಾದ ಕೈ ಮಗ್ಗ ಹಾಗು ವಿದ್ಯುತ್ ಮಗ್ಗಗಳಿಗೆ ಪರಿಹಾರ ನೀಡಲು ಸರ್ಕಾರ ಮಂಜೂರಾತಿ ನೀಡಿದೆ.
ಸಂಪುಟ ಉಪಸಮಿತಿಯಲ್ಲಿ ಪ್ರವಾಹಕ್ಕೆ ಹಾನಿಗೀಡಾದ ನೇಕಾರರ ಮಗ್ಗಗಳಿಗೂ ಪರಿಹಾರ ನೀಡಲು ಶಿಫಾರಸು ಮಾಡಲಾಗಿತ್ತು. ಅದರಂತೆ ಸಿಎಂ ಅಧಿವೇಶನದಲ್ಲಿ ಘೋಷಣೆಯನ್ನೂ ಮಾಡಿದ್ದರು. ಇದೀಗ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.
ಕೈ ಮಗ್ಗ ಹಾನಿಗೆ ಪರಿಹಾರ:
ಹಾನಿಗೊಳಗಾದ ಉಪಕರಣ ಹಾಗು ಸಲಕರಣೆಗಳಿಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಮಾರ್ಗಸೂಚಿಯನ್ವಯ 4100 ರೂ. ನೀಡಲಾಗುತ್ತದೆ. ಇನ್ನು ಕಚ್ಚಾ ಮಾಲು, ಸಿದ್ಧಪಡಿಸಿದ ಹಾಗೂ ಸಿದ್ಧಪಡಿಸಲಾಗುತ್ತಿರುವ ವಸ್ತುಗಳಿಗೆ 4,100 ರು. ಪರಿಹಾರ ನೀಡಲಾಗುತ್ತದೆ. ಇದರ ಜತೆಗೆ ರಾಜ್ಯ ಸರ್ಕಾರ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಯಡಿಯ 4,100ರು. ಮೊತ್ತ ಒಳಗೊಂಡಂತೆ ಒಟ್ಟು 25,000 ರೂ. ಪರಿಹಾರ ನೀಡಲು ನಿರ್ಧರಿಸಿದೆ.
ಇನ್ನು ವಿದ್ಯುತ್ ಮಗ್ಗ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರವೇ ಒಟ್ಟು 25,000 ರು. ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಳೆ ಹಾನಿ ಪರಿಹಾರ ಹೆಚ್ಚಿಸಿ ಆದೇಶ:
ಇನ್ನು ಪ್ರವಾಹದಿಂದ ಹಾನಿಯಾದ ಬೆಳೆಹಾನಿಗೆ ನಿಗದಿ ಪಡಿಸಿರುವ ಪರಿಹಾರ ದರವನ್ನು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಯಡಿ ಕೊಡುವ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಗೆ 10,000 ರು. ಪರಿಹಾರ ನೀಡಲು ಆದೇಶ ಹೊರಡಿಸಿದೆ.
ಅದರಂತೆ ಕೃಷಿ, ತೋಟಗಾರಿಕೆ ಹಾಗೂ ವಾರ್ಷಿಕ ಬೆಳೆಯುವ ಬೆಳೆ ಹಾನಿಗೆ ಖುಷ್ಕಿ ಪ್ರತಿ ಹಕ್ಟೇರಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯಡಿ 6800 ರೂ ಜೊತೆಗೆ 10 ಸಾವಿರ ರೂ. ಹೆಚ್ಚುವರಿ ಮೊತ್ತ ಸೇರಿಸಿ 16800 ರೂ. ಹಾಗೂ ನೀರಾವರಿ ಪ್ರದೇಶಕ್ಕೆ ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 13500ರೂ ಜೊತಗೆ ಹೆಚ್ಚುವರಿ 10 ಸಾವಿರ ರೂ.ನಂತೆ 23,500 ರೂ ಪರಿಹಾರ ಮತ್ತು ಶಾಶ್ವತ ನೀರಾವರಿಯ ಯೋಜನೆಯಡಿ ಬೆಳೆದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 18 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ ಸೇರಿಸಿ ಒಟ್ಟು 28,000 ರೂ. ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ.