ಕರ್ನಾಟಕ

karnataka

By

Published : Apr 14, 2023, 12:13 PM IST

ETV Bharat / state

ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ನಡೆದ ಚುನಾವಣೆ, ಉಪಚುನಾವಣೆ; ಗೆದ್ದವರ‍್ಯಾರು, ಸೋತವರ‍್ಯಾರು?

ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿ 24 ಮೇ 2023 ರಂದು ಕೊನೆಗೊಳ್ಳಲಿದೆ. ಹಿಂದಿನ ವಿಧಾನಸಭಾ ಚುನಾವಣೆ ಮೇ 2018ರಲ್ಲಿ ನಡೆದಿತ್ತು. ಆದರೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಜೆಡಿಎಸ್​ - ಕಾಂಗ್ರೆಸ್ ಮೈತ್ರಿ ರಚನೆಯಾಗಿತ್ತು.

Karnataka election ground report
ಕರ್ನಾಟಕ ವಿಧಾನಸಭೆ ಚುನಾವಣೆ

ಬೆಂಗಳೂರು:ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಳೆದ 5 ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಉಂಟಾದ ಬದಲಾವಣೆಗಳು, ತಿರುವುಗಳು ಹಲವು. ರಾಜ್ಯದಲ್ಲಿ ನಡೆದ ಚುನಾವಣೆಗಳು ಹಾಗೂ ಉಪಚುನಾವಣೆಗಳು ರಾಜಕೀಯದ ಓಟದ ದಿಕ್ಕನ್ನು ವಿವರಿಸುತ್ತವೆ. ಸದ್ಯ ರಾಜ್ಯ ರಾಜಕಾರಣ ಇನ್ನೊಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸರ್ಕಾರ ರಚನೆಯಾದ ಸಂದರ್ಭದಿಂದ 2022ರವರೆಗೂ ನಡೆದ ಚುನಾವಣೆ, ಉಪಚುನಾವಣೆಗಳು ರಾಜ್ಯ ರಾಜಕಾರಣ ಎತ್ತ ಸಾಗಿದೆ ಎಂಬ ಸ್ಪಷ್ಟ ಚಿತ್ರಣ ನೀಡುತ್ತಿವೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಳಿಕ 2019ರಲ್ಲಿ ಮತ್ತೊಂದು ಮಹಾ ಚುನಾವಣೆ ನಡೆದಿದೆ. ಅದು ಲೋಕಸಭೆ ಚುನಾವಣೆ. ಇದಕ್ಕೆ ಮುನ್ನ ಹಾಗೂ ನಂತರ ಹಲವು ಉಪಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದ್ದು, ಹಲವರ ಗೆಲುವು, ಸೋಲಿಗೆ ಇವು ಸಾಕ್ಷಿಯಾಗಿವೆ. ಪಕ್ಷಗಳ ಬಲಾಬಲವೇ ಬದಲಾಗಿದೆ. ಸರ್ಕಾರವೇ ಬದಲಾದ ಉದಾಹರಣೆ ಸಹ ಇದೆ. ಅವುಗಳ ಕಿರು ಪರಿಚಯ ಇಲ್ಲಿದೆ.

222 ಕ್ಷೇತ್ರಗಳಿಗೆ ಚುನಾವಣೆ:2018ರ ವಿಧಾನಸಭೆ ಚುನಾವಣೆ ಗಮನಿಸಿದಾಗ ಒಟ್ಟು 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2018ರ ಮೇ 2 ರಂದು ನಿಧನರಾದ ಕಾರಣ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು. ಮೇ 12 ರಂದು ಚುನಾವಣೆ ಜರುಗಿದ್ದು, ಮತ ಎಣಿಕೆ ಹಾಗೂ ಫಲಿತಾಂಶ ಮೇ 15ಕ್ಕೆ ಪ್ರಕಟಗೊಂಡಿತ್ತು. ಇದರಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್​ 38 (ಬಿಎಸ್​ಪಿ ಬೆಂಬಲಿತ ಒಬ್ಬ ಶಾಸಕ)ನ ಬಲ ಹೊಂದಿತ್ತು.

ಮೇ 28 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದು ಮೇ 31ಕ್ಕೆ ಫಲಿತಾಂಶ ಹೊರಬಿತ್ತು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದರು. ಜೂ.11 ರಂದು ಜಯನಗರ ನಗರ ಕ್ಷೇತ್ರದ ಚುನಾವಣೆ ನಡೆದು ಜೂ.13ರಂದು ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದರು.

ಉಪಚುನಾವಣೆ ಘೋಷಣೆ: ಈ ಮಧ್ಯೆ ಮೇ 28ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು. ಮತ್ತೊಂದೆಡೆ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಂದ ಕಣಕ್ಕಿಳಿದು ಎರಡೂ ಕಡೆ ಗೆದ್ದಿದ್ದ ಜೆಡಿಎಸ್​ನ ಹೆಚ್​.ಡಿ. ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದರು. ಮಂಡ್ಯ ಸಂಸದ ಸಿ.ಎಸ್​. ಪುಟ್ಟರಾಜು ನಿಧನ ಹಿನ್ನೆಲೆ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಯಿತು. ಬಿ.ಎಸ್ ಯಡಿಯೂರಪ್ಪ ಶಿಕಾರಿಪುರದಿಂದ ಗೆದ್ದ ಹಿನ್ನೆಲೆ ಶಿವಮೊಗ್ಗ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಿ. ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭೆಯಿಂದ ಗೆದ್ದ ಹಿನ್ನೆಲೆ ಬಳ್ಳಾರಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಎಲ್ಲ ಕ್ಷೇತ್ರಗಳಿಗೆ 2018ರ ನವೆಂಬರ್​ನಲ್ಲಿ ಉಪಚುನಾವಣೆ ನಡೆಯಿತು.

ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್​ನ ವಿ.ಎಸ್ ಉಗ್ರಪ್ಪ, ಮಂಡ್ಯದಿಂದ ಎಲ್​.ಆರ್ ಶಿವರಾಮೇಗೌಡ, ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಸಂಸದರಾಗಿ ಆಯ್ಕೆಯಾದರು. ವಿಧಾನಸಭೆ ಉಪಚುನಾವಣೆಯಲ್ಲಿ ರಾಮನಗರಿಂದ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆದ್ದರು. ಆಗ ರಾಜ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು.

2019ರ ಉಪಚುನಾವಣೆ:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಮೇಶ್ ಜಾಧವ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾದ ಚಿಂಚೋಳಿ ವಿಧಾನಸಭಾ ಕ್ಷೇತ್ರ ಮತ್ತು ಕಾಂಗ್ರೆಸ್ ಶಾಸಕ ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ 2019ರ ಮೇ ತಿಂಗಳಿನಲ್ಲಿ ಉಪ ಚುನಾವಣೆ ನಡೆಯಿತು. ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಬಿಜೆಪಿಯಿಂದ ಕಣಕ್ಕಿಳಿದು ಚಿಂಚೊಳ್ಳಿಯಲ್ಲಿ ಗೆದ್ದರು. ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್​​ನ ಕುಸುಮಾ ಶಿವಳ್ಳಿ ಕುಂದಗೋಳದಲ್ಲಿ ಗೆಲುವು ಸಾಧಿಸಿದರು.

ಸರ್ಕಾರ ಪಥನ:2019ರ ಉಪಚುನಾವಣೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪಥನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಬೆಂಬಲಿತ ಒಬ್ಬ ಶಾಸಕ ಸೇರಿದಂತೆ 13 ಮತ್ತು ಜನತಾದಳ (ಎಸ್)ದ 3 ಶಾಸಕರು ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಅನಿವಾರ್ಯವಾಯಿತು.

ಇವರಲ್ಲಿ ರೋಷನ್ ಬೇಗ್ ಹೊರತುಪಡಿಸಿ ಉಳಿದ 16 ಮಂದಿ ಬಿಜೆಪಿ ಸೇರಿದರು. 17 ಸ್ಥಾನಗಳ ಪೈಕಿ ತಕರಾರಿನ ಹಿನ್ನೆಲೆ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಚುನಾವಣೆ ತಡೆಯಲಾಯಿತು. ಉಳಿದ 15 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಉಳಿದಂತೆ ಕಾಂಗ್ರೆಸ್ ಎರಡು ಹಾಗೂ ಪಕ್ಷೇತರ ಒಬ್ಬರು ಗೆಲುವು ಸಾಧಿಸಿದರು. ನಂತರ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಬೆಂಬಲಿಸಿದರು.

2020ರ ನವೆಂಬರ್​ನಲ್ಲಿ ಚುನಾವಣೆ: ಚುನಾವಣಾ ತಕರಾರು ಕಾರಣದಿಂದ ತಡೆ ಹಿಡಿಯಲಾಗಿದ್ದ ರಾಜರಾಜೇಶ್ವರಿನಗರ ಮತ್ತು ಕೋವಿಡ್​ನಿಂದ ಮೃತಪಟ್ಟ ಶಿರಾ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಎರಡೂ ಸ್ಥಾನ ಬಿಜೆಪಿ ಅಭ್ಯರ್ಥಿಗಳ ಪಾಲಾಯಿತು.

2021ರ ಉಪಚುನಾವಣೆ: ಚುನಾವಣಾ ತಕರಾರು ಕಾರಣದಿಂದ ತಡೆ ಹಿಡಿಯಲಾಗಿದ್ದ ಮಸ್ಕಿ, ಕೋವಿಡ್​ನಿಂದ ಮೃತಪಟ್ಟ ಶಾಸಕ ಬಿ. ನಾರಾಯಣ ರಾವ್ ಅವರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಮತ್ತು ಕೋವಿಡ್​ನಿಂದ ಮೃತಪಟ್ಟಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಕ್ಷೇತ್ರಕ್ಕೆ ಚುನಾವಣೆ ಮೇ ತಿಂಗಳಲ್ಲಿ ನಡೆಯಿತು. ಇದರಲ್ಲಿ ಬೆಳಗಾವಿ ಹಾಗೂ ಬಸವಕಲ್ಯಾಣವನ್ನು ಬಿಜೆಪಿ ಗೆದ್ದರೆ, ಮಸ್ಕಿ ಕಾಂಗ್ರೆಸ್ ಪಾಲಾಯಿತು.

ಇದನ್ನೂ ಓದಿ:ರಾಜ್ಯದ 16 ನೇ ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟ :ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ABOUT THE AUTHOR

...view details