ಬೆಂಗಳೂರು:'ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದು' ಎನ್ನುವ ಮಂತ್ರ. ಅಂತರಂಗದಲ್ಲಿ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮಂಡಲ ವಿರುದ್ಧ ಕಮಂಡಲ ಹಿಡಿದ ಬಿಜೆಪಿ ನಾಯಕರ ಜಾತಿ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು ಕೊನೆಯಿಲ್ಲದ ಧಾರಾವಾಹಿ ಆದೀತು ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
#ಬಿಜೆಪಿಜಾತಿಹಿಪಾಕ್ರಸಿ ಎಂಬ ಹ್ಯಾಷ್ ಟ್ಯಾಗ್:
#ಬಿಜೆಪಿಜಾತಿಹಿಪಾಕ್ರಸಿಎಂಬ ಹ್ಯಾಷ್ ಟ್ಯಾಗ್ ಜತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಜಾತಿವಾದಿಯೇ? ಜಾತ್ಯತೀತವಾದಿಯೇ? ಎಂದು ಪ್ರಶ್ನಿಸಿದ್ದಾರೆ.
ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ:
ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ ಪಾಲ್ಗೊಂಡ ಜೋಶಿ, ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಾಮಾಣಿಕ ರಾಜಕೀಯ ಮಾಡಿ:
ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ? ಜಾತಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ ಎಂದು ಕಿಡಿಕಾರಿದ್ದಾರೆ.
ಶೆಟ್ಟರ್, ಬಿಎಸ್ವೈ ಹಿಂದುಕುಲ ತಿಲಕರೇ?:
ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ನಾನು ಭಾಗವಹಿಸಿದರೆ ಹಿಂದು ವಿರೋಧಿ. ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ ಪ್ರಕಟಿಸಿ ಹಾಡಿ ಹೊಗಳಿದ ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಸ್ಲಿಂ ಗಣವೇಷ ಹಾಕಿ ಖಡ್ಗ ಹಿಡಿದು ಕುಣಿದ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಹಿಂದುಕುಲ ತಿಲಕರೇ? ಎಂದಿದ್ದಾರೆ.
ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ?:
ಜಾತಿ ನಾಶವಾಗುವವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಿಜೆಪಿ ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ?
ಅಂದ ಹಾಗೆ ಬಿಜೆಪಿ ನಾಯಕರೇ, ನಿಮ್ಮ ಮಾತೃ ಸಂಸ್ಥೆಯಾದ ಆರ್ಎಸ್ಎಸ್ಗೆ ಚುನಾವಣೆ ಇಲ್ಲದೇ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ? ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವರು ಇರುವುದು ಯಾಕೆ? ಎಂದು ಬಿಜೆಪಿ ಹಾಗೂ ಕೇಸರಿ ಪಾಳಯದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.