ಕರ್ನಾಟಕ

karnataka

ಬೆಳಗಾವಿಯಲ್ಲಿ ಸಂಪುಟ ಸಸ್ಪೆನ್ಸ್​ಗೆ ತೆರೆ ಸಾಧ್ಯತೆ; ಭಾನುವಾರವೇ ಸಂಪುಟ ವಿಸ್ತರಣೆಗೆ ಮುಹೂರ್ತ?

By

Published : Dec 3, 2020, 9:51 PM IST

ನಾಳೆಯಿಂದ ಎರಡು ದಿನಗಳ ಕಾಲ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆ ಕುಂದಾನಗರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ದೆಹಲಿ ಬಿಜೆಪಿ ವರಿಷ್ಠರು ಪಾಲ್ಗೊಳ್ಳಲಿದ್ದು, ರಾಜ್ಯದಲ್ಲಿ ಪಕ್ಷ ಸಂಘಟನೆಯ ವಿಚಾರ ಚರ್ಚೆಯಾಗಲಿದೆ. ಅದರ ಜೊತೆಗೆ ಸಂಪುಟ ವಿಸ್ತರಣೆಯ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯೂ ಇದೆ.

Karnataka Cabinet Will Be Expansion In Belagavi
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆಯಿಂದ ನಡೆಯಲಿರುವ ಎರಡು‌ ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ‌ ಸಭೆ ಸಂಪುಟ ವಿಸ್ತರಣೆಯ ಸಸ್ಪೆನ್ಸ್​ಗೆ ಫೈನಲ್ ಟಚ್ ನೀಡುವ ಸಾಧ್ಯತೆ ಹೆಚ್ಚಿದೆ.

ಈ ಭಾನುವಾರವೇ ಸಂಪುಟ ವಿಸ್ತರಣೆ ಮಾಡಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎಂಬ ಮಾತು ಬಲವಾಗಿ ಕೇಳಿ‌ ಬರುತ್ತಿದೆ. ಕುಂದಾನಗರಿ ನಾಳೆಯಿಂದ ಎರಡು ದಿನಗಳ‌ ಕಾಲ ಕೇಸರಿ ಮಯವಾಗಲಿದೆ. ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ದೆಹಲಿ ವರಿಷ್ಠರು ಪಾಲ್ಗೊಳ್ಳಲಿದ್ದಾರೆ. ಹೈಕಮಾಂಡ್​​ ನೀಡಿರುವ ಸಂಪುಟ ವಿಸ್ತರಣೆ ಸಂದೇಶವನ್ನು ಅರುಣ್ ಸಿಂಗ್ ಸಭೆಯಲ್ಲಿ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಸಂಬಂಧ ಇರುವ ಗೊಂದಲಕ್ಕೆ ನಾಳೆ ನಡೆಯುವ ಸಭೆಯಲ್ಲಿ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಭಾನುವಾರವೇ ಸಂಪುಟ ವಿಸ್ತರಣೆಗೆ ಮುಹೂರ್ತ?

ಕುಂದಾನಗರಿಯಲ್ಲಿ ನಡೆಯಲಿರುವ ಕೇಸರಿ ಸಭೆಯಲ್ಲೇ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ವರಿಷ್ಠರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ.‌

ಇದನ್ನೂ ಓದಿ : ಮತ್ತೊಮ್ಮೆ 3+2 ಮಾದರಿ ಸಂಪುಟ ವಿಸ್ತರಣೆ ಪ್ರಸ್ತಾಪಕ್ಕೆ ಸಿಎಂ ಚಿಂತನೆ; ಕತ್ತಿ, ಸಿಪಿವೈಗೂ ಸಿಗುತ್ತಾ ಅವಕಾಶ?

ಸಂಪುಟ ವಿಸ್ತರಣೆಯೋ, ಸಂಪುಟ ಪುನಾರಚನೆ ಮಾಡುವ ಬಗ್ಗೆನೂ‌ ನಾಳೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಸಂಪುಟ ವಿಸ್ತರಣೆಗೆ ಅಸ್ತು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಂತೆ ಭಾನುವಾರ ಅಂದರೆ ಚಳಿಗಾಲದ ಅಧಿವೇಶನದ ಮುನ್ನಾ ದಿನ ಸಂಪುಟ ವಿಸ್ತರಣೆಯ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನ ಪ್ರಾರಂಭವಾಗುವ ಮುನ್ನ ತೆರವಾಗಿರುವ ಸಚಿವ ಸ್ಥಾನ ಭರ್ತಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಹಾಗಾಗಿ ಭಾನುವಾರವೇ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ತಾರಕ್ಕಕ್ಕೇರಿದ ತಿಕ್ಕಾಟ:

ಮೂಲ ಮತ್ತು ವಲಸಿಗರ ನಡುವಿನ ತಿಕ್ಕಾಟ ತಾರಕ್ಕಕ್ಕೇರಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆಯೂ ಶಾಸಕರಿಂದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲಾಗಿದ್ದು, ಈ ವಿಚಾರಗಳ ಬಗ್ಗೆಯೂ ಸೂಕ್ತ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಉಪ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಜೋರಾಗಿ ಸಂಪುಟ ವಿಸ್ತರಣೆಯ ಕೂಗು ಕೆಳಿ ಬರ್ತಿದೆ. ವಲಸಿಗ ಶಾಸಕರು ಸಂಪುಟ ವಿಸ್ತರಣೆಯ ವಿಚಾರದ ಬಗ್ಗೆ ಲಾಭಿ ನಡೆಸ್ತಿದ್ರೆ, ಮೂಲ ಕೇಸರಿ ಶಾಸಕರು ಸಂಪುಟ ಪುನಾರಚನೆ ಆಗಲಿ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಎಲ್ಲ ವಿಚಾರಗಳೂ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಸುಧೀರ್ಘ ಚರ್ಚೆ ಆಗಿ, ಅಂತಿಮ ರೂಪ ಪಡೆಯಲಿವೆ ಎಂದು ಹೇಳಲಾಗುತ್ತಿದೆ.

ಯಾರಿಗೆ ಮಂತ್ರಿಗಿರಿ ಪಟ್ಟ ಖಚಿತ?

ನಾಳೆ ನಡೆಯಲಿರುವ ಸಭೆಯಲ್ಲಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದ್ದು, ಸರ್ಕಾರ ರಚನೆಗೆ ಕಾರಣರಾಗಿರುವ ಆರ್.ಶಂಕರ್ ಹಾಗೂ ಎಂ.ಟಿ.ಬಿ.ನಾಗರಾಜ್​ಗೆ ಮಂತ್ರಿ ಸ್ಥಾನ ಖಚಿತವಾಗಲಿದೆ. ಉಳಿದಂತೆ ವೈಟಿಂಗ್ ಲಿಸ್ಟ್​ನಲ್ಲಿರುವ ಉಮೇಶ್ ಕತ್ತಿ ಹಾಗೂ ಆರ್‌.ಆರ್.ನಗರ ಶಾಸಕ ಮುನಿರತ್ನಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಭಾಗ್ಯ ಲಭಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಇದನ್ನೂ ಓದಿ : ಸಂಪುಟ ವಿಸ್ತರಣೆಗೆ ಕಾಯಲೇಬೇಕು: ಸಿಎಂ ಯಡಿಯೂರಪ್ಪ ಪುನರುಚ್ಛಾರ

ತೆರವಾಗಿರುವ ಏಳು ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರಿಗೆ ಅದೃಷ್ಟ ಕುಲಾಯಿಸಲಿದೆ‌ ಎಂಬ ಕುತೂಹಲ ಇನ್ನೂ ಮುಂದುವರಿದಿದೆ. ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದು, ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದನ್ನು ನಾಳೆ ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ನಾಳೆ ನಡೆಯುವ ಬಿಜೆಪಿ ಸಭೆಯಲ್ಲಿ ಸಂಪುಟ ವಿಸ್ತರಣೆಯ ಗೊಂದಲಕ್ಕೆ ತೆರೆ ಬೀಳುವ ಎಲ್ಲ ಸಾಧ್ಯತೆಗಳಿವೆ. ಅದರ ಜೊತೆಗೆ ಸಚಿವ ಆಕಾಂಕ್ಷಿಗಳ ಹೃದಯ ಬಡಿತ ಹೆಚ್ಚಿಸಿದೆ.

ABOUT THE AUTHOR

...view details