ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆ ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಯಾತ್ರೆಯ ಮೂರನೇ ಟ್ರಿಪ್ಗೆ ರಾಜ್ಯದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಸುಮಾರು 300ಕ್ಕೂ ಹೆಚ್ಚು ಟಿಕೆಟ್ಗಳು ಭರ್ತಿಯಾಗಿವೆ ಎಂದು ಐಆರ್ಸಿಟಿಸಿ (ಭಾರತೀಯ ರೈಲ್ವೆ ಮತ್ತು ಪ್ರವಾಸೊದ್ಯಮ ನಿಗಮ) ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 2022ರ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಉದ್ಘಾಟನೆಯಾದ ಈ ಯೋಜನೆ, ಯಾತ್ರಿಕರಿಂದ ಎರಡು ಟ್ರಿಪ್ಗಳಿಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರೈಲು ಪ್ರವಾಸವನ್ನು ಫೆಬ್ರವರಿ 21, 2023ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಾರಾಣಾಸಿ, ಅಯೋಧ್ಯೆ ಹಾಗೂ ಪ್ರಯಾಗ್ ರಾಜ್ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿಗೆ 5 ಸಾವಿರ ರೂ.ಗಳ ಸಹಾಯಧನ ನೀಡಲಾಗುತ್ತಿದ್ದು, ರಾಜ್ಯದ ಭಕ್ತಾದಿಗಳೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದಿವ್ಯ ಕಾಶಿ, ಭವ್ಯ ಕಾಶಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಟು ದಿನಗಳ ಕಾಶಿ ದರ್ಶನ ಪ್ಯಾಕೇಜ್ ಟೂರ್ನ ವಿವರ - ಟೂರ್ಗೆ ಶುಲ್ಕ: ಐಆರ್ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ಗೆ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿ ಸಹಾಯಧನವನ್ನು ರಾಜ್ಯ ಸರಕಾರ ನೀಡಲಿದೆ. ಈ ಪ್ಯಾಕೇಜ್ನ ದರ 20 ಸಾವಿರ ರೂಪಾಯಿಯಾಗಿದೆ.
ರೈಲು ಸಂಚರಿಸುವ ಮಾರ್ಗ: ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್ವರೆಗೆ ಸಂಚರಿಸಲಿದೆ.