ಬೆಂಗಳೂರು:ಸಾಹಿತಿ ಝಲೇಖ ಮಮ್ತಾಜ್ ಸೇರಿ ಬ್ಯಾರಿ ಗಾಯಕ, ಕಲಾವಿದ ಖಾಲಿದ್ ತಣ್ಣೀರುಬಾವಿ ಹಾಗೂ ಬ್ಯಾರಿ ಜಾನಪದ ಕಲಾವಿದ ನೂರ್ ಮಹಮ್ಮದ್ 2018ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
2018ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಸಾಹಿತಿ ಝಲೇಖ ಮಮ್ತಾಜ್, ಬ್ಯಾರಿ ಗಾಯಕ, ಕಲಾವಿದ ಖಾಲಿದ್ ತಣ್ಣೀರುಬಾವಿ ಮತ್ತು ಬ್ಯಾರಿ ಜಾನಪದ ಕಲಾವಿದ ನೂರ್ ಮಹಮ್ಮದ್ ಅವರು ಭಾಜನರಾಗಿದ್ದಾರೆ.
ಮೂಲತಃ ಮಂಗಳೂರಿನವರಾದ ಝಲೇಖ ಅವರು ಬರಹ, ಲೇಖನ, ಕವನಗಳ ಮೂಲಕ ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಉಮ್ಮರೋ ನೆನಪು, ಉಮ್ಮ ಬಾಸೆ, ಭ್ರೂಣ ಹತ್ಯೆ, ಅಲ್ಲಾಹುರೋ ಸೃಷ್ಟಿ ಇವರ ಪ್ರಮುಖ ಕವನಗಳಾಗಿವೆ. ತಲಾಖ್ ಒರು ಸಮಸ್ಯೆ, ಮಕ್ಕಗ್ ಬೇನಾಯೊ ಮೌಲ್ಯಾಧಾರಿತ ಶಿಕ್ಷಣ, ಮಕ್ಕಲೊ ಭವಿಷ್ಯ, ಸ್ವಾತಂತ್ರೈ ಪಡೆ ಒರು ನೆನಪು ಇವರ ಪ್ರಮುಖ ಲೇಖನಗಳು. ಸದ್ಯ ಅಕಾಡೆಮಿಯ ಬ್ಯಾರಿ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2008ರಿಂದ ಪ್ರತಿ ವರ್ಷ ಮೂವರಿಗೆ ಪ್ರಶಸ್ತಿ ನೀಡುತ್ತಿದ್ದು, ಇದುವರೆಗೆ 30 ಮಂದಿ ಪಾತ್ರರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.