ಬೆಂಗಳೂರು : ನಾಳೆಯಿಂದ ಏಳು ದಿನಗಳ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ವಿವಾದಿತ ಲವ್ ಜಿಹಾದ್ ತಡೆ ಮಸೂದೆ ಹಾಗೂ ಗೋ ಹತ್ಯೆ ನಿಷೇಧ ಮಸೂದೆ ಮಂಡಿಸುತ್ತಾ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಏಳು ದಿನಗಳ ಕಾಲ ನಡೆಯಲಿರುವ ಅಧಿವೇಶನ ಡಿ.15ಕ್ಕೆ ಮುಕ್ತಾಯವಾಗಲಿದೆ. ಈ ಬಾರಿಯ ಅಧಿವೇಶನದ ಕೊನೆಯ ಎರಡು ದಿನ, ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲೆ ಚರ್ಚೆ ನಡೆಯಲಿದೆ. ಮೊದಲ ವಾರದ ಕಲಾಪದಲ್ಲಿ ಸರ್ಕಾರ ಒಟ್ಟು 10 ಮಸೂದೆಗಳನ್ನು ಮಂಡಿಸಲಿದೆ. ಅದರಲ್ಲಿ ಪ್ರಮುಖವಾಗಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಎಪಿಎಂಸಿ ತಿದ್ದುಪಡಿ ವಿಧೇಯಕ, ಬಿಬಿಎಂಪಿ ವಿಧೇಯಕ ಸೇರಿವೆ.
ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಎಪಿಎಂಸಿ ತಿದ್ದುಪಡಿ ವಿಧೇಯಕಗಳನ್ನು ಅಂಗೀಕರಿಸಲಾಗಿತ್ತು. ಆದರೆ ವಿಧಾನಪರಿಷತ್ನಲ್ಲಿ ಈ ಮಸೂದೆಗಳು ಇನ್ನೂ ಅಂಗೀಕಾರಗೊಂಡಿಲ್ಲ. ಕಾರ್ಮಿಕ ತಿದ್ದುಪಡಿ ಕಾಯ್ದೆ ಪರಿಷತ್ನಲ್ಲಿ ಸೋಲನುಭವಿಸಿತ್ತು. ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಈ ವಿವಾದಿತ ವಿಧೇಯಕ ಜಾರಿಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಅಧಿವೇಶನದಲ್ಲಿ ಈ ವಿಧೇಯಕಗಳಿಗೆ ಸರ್ಕಾರ ಅಂಗೀಕಾರ ಪಡೆಯುವ ಕಾತರದಲ್ಲಿದೆ.
ವಿವಾದಿತ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಬಿಲ್ ಮಂಡನೆ..? :
ಈ ಅಧಿವೇಶನದಲ್ಲಿ ಎಲ್ಲರ ಕುತೂಹಲ ಕೆರಳಿಸಿರುವುದು ವಿವಾದಿತ ಗೋ ಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಧೇಯಕಗಳ ಮಂಡನೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಎರಡೂ ವಿವಾದಿತ ಮಸೂದೆಗಳನ್ನು ಮಂಡಿಸುತ್ತೋ, ಇಲ್ಲವೋ ಎಂಬ ಕುತೂಹಲ ಮೂಡಿದೆ.
ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಜೊತೆಗೆ ಗೋ ಹತ್ಯೆ ನಿಷೇಧ ವಿಧೇಯಕವನ್ನೂ ಮಂಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ, ಸರ್ಕಾರ ಈ ಅಧಿವೇಶನದಲ್ಲೇ ಎರಡು ವಿವಾದಿತ ವಿಧೇಯಕಗಳನ್ನು ಮಂಡಿಸಬಹುದು ಎನ್ನಲಾಗ್ತಿದೆ. ಆದರೆ, ಈವರೆಗೆ ಸಂಸದೀಯ ವ್ಯವಹಾರಗಳ ಇಲಾಖೆಗಾಗಲಿ, ವಿಧಾನಸಭೆ ಕಾರ್ಯದರ್ಶಿ ಕಚೇರಿಗಾಗಲಿ ಈ ಎರಡೂ ವಿಧೇಯಕ ಮಂಡನೆ ಸಂಬಂಧ ಯಾವುದೇ ಪ್ರಸ್ತಾಪ ಸಲ್ಲಿಕೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.