ಕರ್ನಾಟಕ

karnataka

By

Published : Mar 17, 2023, 3:10 PM IST

Updated : Mar 18, 2023, 10:40 AM IST

ETV Bharat / state

ಕೇಸರಿ ಭದ್ರಕೋಟೆಯಲ್ಲಿ ಮೂರು ಪಕ್ಷಗಳ ಕಾದಾಟ.. ಯಾರಾಗ್ತಾರೆ ಚಿಕ್ಕಪೇಟೆ ಸುಲ್ತಾನ್..!

ಕೇಸರಿ ಭದ್ರಕೋಟೆಯಲ್ಲಿ ಮೂರು ಪಕ್ಷಗಳ ಕಾದಾಟ ನಡೆಯಲಿದ್ದು, ಮತದಾರರ ಪ್ರಭು ಯಾರ ಕೈ ಹಿಡಿಯಲಿದ್ದಾರೆ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದಕ್ಕೂ ಮುನ್ನ ಚಿಕ್ಕಪೇಟೆ ಕೇತ್ರದ ಲೆಕ್ಕಾಚಾರ ನೋಡಿ.

election of Chickpete constituency  Karnataka assembly election 2023  Which party favorite in Chickpete constituency  ಕೇಸರಿ ಭದ್ರಕೋಟೆಯಲ್ಲಿ ಮೂರು ಪಕ್ಷಗಳ ಕಾದಾಟ  ಯಾರಾಗ್ತಾರೆ ಚಿಕ್ಕಪೇಟೆ ಸುಲ್ತಾನ್  ಮತದಾರರ ಪ್ರಭು ಯಾರ ಕೈ ಹಿಡಿಯಲಿದ್ದಾರೆ  ಸಿಲಿಕಾನ್ ಸಿಟಿಯ ಅತ್ಯಂತ ದೊಡ್ಡ ಮಾರುಕಟ್ಟೆ  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ  ಮೆಜೆಸ್ಟಿಕ್​ನ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆ  ಬೆಂಗಳೂರಿನ ಲ್ಯಾಂಡ್ ಮಾರ್ಕ್
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

ಬೆಂಗಳೂರು:ಸಿಲಿಕಾನ್ ಸಿಟಿಯ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಜನನಿಬಿಡ ಪ್ರದೇಶ ಹೊಂದಿರುವ ಕ್ಷೇತ್ರ ಎಂದರೆ ಅದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ. ಬೆಂಗಳೂರಿನ ಮೆಜೆಸ್ಟಿಕ್​ನ ಕೂಗಳತೆ ದೂರದಲ್ಲಿರುವ ಚಿಕ್ಕಪೇಟೆ ವ್ಯಾಪಾರ ದೃಷ್ಟಿಯಲ್ಲಿ ಬೆಂಗಳೂರಿನ ಲ್ಯಾಂಡ್ ಮಾರ್ಕ್ ಆಗಿದೆ. ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಮತ್ತು ದಳದ ಅಸ್ತಿತ್ವವೂ ಇರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕುರಿತ ಪಕ್ಷಿನೋಟ ಇಲ್ಲಿದೆ.

ಹಬ್ಬ ಹರಿದಿನ, ಮದುವೆ ಮುಂಜಿ, ಕಾರ್ಯಕ್ರಮಗಳು ಹೀಗಿ ವರ್ಷವಿಡೀ ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತದೆ. ಎಲ್ಲ ಬಗೆಯ ಉಡುಪುಗಳು, ರೇಷ್ಮೆ ವಸ್ತ್ರಗಳು, ಮದುವೆ ಇತ್ಯಾದಿ ಸಮಾರಂಭದ ಜವಳಿ ಅಂಗಡಿ, ಎಂಪೋರಿಯಮ್, ಪುಸ್ತಕದ ಮಳಿಗೆಗೆ ಖ್ಯಾತಿಯಾಗಿರುವ ಕ್ಷೇತ್ರವಾಗಿದೆ. ನಗರದ ಪ್ರಮುಖ ಹಾಗೂ ಬೃಹತ್ ಮಾರುಕಟ್ಟೆಯಾಗಿರುವ ಕೆಆರ್ ಮಾರುಕಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಹೆಸರಾಗಿರುವ ಎಸ್​ಪಿ ರಸ್ತೆ, ಸಸ್ಯ ಕಾಶಿ ಲಾಲ್ ಬಾಗ್, ಕರಗಕ್ಕೆ ಪ್ರಸಿದ್ದವಾಗಿರುವ ಧರ್ಮರಾಯಸ್ವಾಮಿ ದೇವಾಲಯ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಹಾಗೂ ವ್ಯಾಪಾರೀ ತಾಣ, ಪರಿಸರ ತಾಣ ಮತ್ತು ಧಾರ್ಮಿಕ ತಾಣಕ್ಕೆ ಈ ಕ್ಷೇತ್ರ ಹೆಸರುವಾಸಿಯಾಗಿದೆ.

ವಾರ್ಡ್​​ಗಳು:ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಏಳು ವಾರ್ಡ್​ಗಳು ಬರಲಿವೆ. ಸುಧಾಮನಗರ, ಧರ್ಮರಾಯ ಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೊಂಬೇಗೌಡನಗರ ಹಾಗೂ ಜಯನಗರ ವಾರ್ಡ್​​ಗಳನ್ನು ಚಿಕ್ಕಪೇಟೆ ಕ್ಷೇತ್ರ ಒಳಗೊಂಡಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ವಿವರ..

ಜಾತಿ ಲೆಕ್ಕಾಚಾರ: 2,28,200 ಮತದಾರರು ಕ್ಷೇತ್ರದಲ್ಲಿದ್ದಾರೆ, 1,18,050 ಪುರುಷ ಮತದಾರರು,1,10,150 ಮಹಿಳಾ ಮತದಾರರಿದ್ದಾರೆ. 60 ಸಾವಿರ ಮುಸ್ಲಿಂ, 40 ಸಾವಿರ ಎಸ್ಸಿ/ಎಸ್ಟಿ, 32 ಸಾವಿರ ಬ್ರಾಹ್ಮಣ, 45 ಸಾವಿರ ಒಕ್ಕಲಿಗ, 25 ಸಾವಿರ ದೇವಾಂಗ, 15 ಸಾವಿರ ತಿಗಳ, 20 ಸಾವಿರ ಇತರ ಮತದಾರರಿದ್ದಾರೆ. ಜೈನರು, ಗುಜರಾತಿಗಳು, ರಾಜಸ್ತಾನ್ ವರ್ತಕರೂ ಇಲ್ಲಿ ಇದ್ದಾರೆ.

ಚುನಾವಣೆ ಹಿನ್ನೋಟ: 2008 ರಲ್ಲಿ ಬಿಜೆಪಿ ಅಭ್ಯರ್ಥಿ ಹೇಮಚಂದ್ರಸಾಗರ್ 40252 ಮತಗಳನ್ನು ಪಡೆದು ಗೆದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆರ್​ವಿ ದೇವರಾಜ್ 32971 ಮತ ಪಡೆದಿದ್ದರು. 2013 ರಲ್ಲಿ ಕಾಂಗ್ರೆಸ್​ನ ಆರ್​ವಿ ದೇವರಾಜ್ 44714 ಮತ ಪಡೆದು ಗೆದ್ದರೆ, ಬಿಜೆಪಿಯ ಉದಯ್ ಗರುಡಾಚಾರ್ 31655 ಮತ ಪಡೆದಿದ್ದರು. 2018 ರಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ 57312 ಮತ ಪಡೆದು ಗೆದ್ದರೆ, ಕಾಂಗ್ರೆಸ್​ನ ಆರ್​ವಿ ದೇವರಾಜ್ 49378 ಮತ ಪಡೆದಿದ್ದರು. 1994, 1999, 2004, 2008, 2018 ರಲ್ಲಿ ಬಿಜೆಪಿ ಗೆದ್ದಿದ್ದು, 2013 ರಲ್ಲಿ ಮಾತ್ರ ಸೋತಿದೆ. ಹಾಗಾಗಿ ಇದು ಬಿಜೆಪಿಯ ಭದ್ರಕೋಟೆ ಎನ್ನಬಹುದು.

ಈವರೆಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 15 ಬಾರಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಮೂರು ಬಾರಿ, ಬಿಜೆಪಿ ಐದು ಬಾರಿ, ಜನತಾ ಪಕ್ಷ ಮೂರು ಬಾರಿ, ಜನತಾದಳ ಒಂದು ಬಾರಿ ಗೆದ್ದಿದ್ದು, ಎರಡು ಬಾರಿ ಪಕ್ಷೇತರ, ಒಂದು ಬಾರಿ ಜೆಪಿಪಿ ಪಕ್ಷ ಗೆದ್ದಿದೆ.

ಆಕಾಂಕ್ಷಿಗಳು: ಬಿಜೆಪಿಯಿಂದ ಹಾಲಿ ಶಾಸಕ ಉದಯ್ ಗರುಡಾಚಾರ್ ಆಕಾಂಕ್ಷಿಯಾಗಿದ್ದು, ಮರು ಆಯ್ಕೆಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್​ಆರ್ ರಮೇಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಜಯನಗರ ಕ್ಷೇತ್ರಕ್ಕೆ ಯತ್ನಿಸಿದ್ದ ಎನ್​ಆರ್ ರಮೇಶ್ ವರಿಷ್ಠರ ಸಲಹೆಯಂತೆ ಬಂಡಾಯದಿಂದ ದೂರ ಉಳಿದರು. ಆದರೆ, ಈ ಬಾರಿ ಜಯನಗರದ ಜೊತೆಗೆ ಚಿಕ್ಕಪೇಟೆ ಮೇಲೆಯೂ ಕಣ್ಣಿಟ್ಟಿದ್ದಾರೆ. ಜಯನಗರದಲ್ಲಿ ಈ ಬಾರಿ ತೇಜಸ್ವಿನಿ ಅನಂತ್ ಕುಮಾರ್​ಗೆ ಟಿಕೆಟ್ ನೀಡಲು ನಿರ್ಧರಿಸಿದರೆ.. ಇದಕ್ಕೆ ರಮೇಶ್ ವಿರೋಧಿಸಲು ಸಾಧ್ಯವಿಲ್ಲ. ಅನಂತ್ ಕುಮಾರ್ ಒಡನಾಡಿಯಾಗಿ ಅವರ ಕುಟುಂಬಕ್ಕೆ ಆತ್ಮೀಯವಾಗಿಯೇ ಇದ್ದಾರೆ. ಹಾಗಾಗಿ ಜಯನಗರ ಕೈತಪ್ಪಿದರೆ ಚಿಕ್ಕಪೇಟೆ ಸಿಗಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್​ನಿಂದ ಮಾಜಿ ಶಾಸಕ ಆರ್​ವಿ ದೇವರಾಜ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ಬಾರಿ ಗೆದ್ದು ಒಂದು ಬಾರಿ ಸೋತಿರುವ ಆರ್​ವಿ ದೇವರಾಜ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಪುತ್ರ ಯುವರಾಜ್​ಗಾದರೂ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇವರ ಜೊತೆ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಎಂಎಲ್ಸಿ ಪಿಆರ್ ರಮೇಶ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಉದ್ಯಮಿ ಕೆಜಿಎಫ್ ಬಾಬು ಕೂಡ ಈ ಬಾರಿ ಚಿಕ್ಕಪೇಟೆಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಕ್ಷೇತ್ರದ ಪ್ರತಿ ಕುಟುಂಬಕ್ಕೆ 5 ಸಾವಿರ ಸಹಾಯಧನ ಮತ್ತು ಉಡುಗೊರೆ ನೀಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಆದರೆ, ಪಕ್ಷದ ಸೂಚನೆ ಪಾಲಿಸದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹಾಗಾಗಿ ಅವರು ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೊತೆ ಮಾತುಕತೆಯೂ ಆಗಿದೆ. ಆದರೆ ಅಲ್ಲಿ ಟಿಕೆಟ್ ಇನ್ನು ಖಚಿತವಾಗಿಲ್ಲ. ಒಂದು ವೇಳೆ ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಹೇಮಚಂದ್ರ ಸಾಗರ್ ಈ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ, ತೀರಾ ಕನಿಷ್ಠ ಮತ ಪಡೆದಿದ್ದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಡೌಟ್ ಎನ್ನಲಾಗಿದೆ.

ಇನ್ನು ಈ ಕ್ಷೇತ್ರದಲ್ಲಿ ಈಗ ಎಸ್ಡಿಪಿಐ ಅಸ್ತಿತ್ವ ಕಂಡುಕೊಳ್ಳುತ್ತಿದೆ. ಕಳೆದ ಬಾರಿ ಎಸ್ಡಿಪಿಐ ಅಭ್ಯರ್ಥಿ ಮೂರನೇ ಸ್ಥಾನ ಪಡೆದಿದ್ದು, ಜೆಡಿಎಸ್ ಅನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿತ್ತು. ಹಾಗಾಗಿ ಈ ಬಾರಿಯೂ ಎಸ್ಡಿಪಿಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಈ ಪಕ್ಷದ ಅಭ್ಯರ್ಥಿ ಪೈಪೋಟಿ ಒಡ್ಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಸಮಸ್ಯೆ:ಚಿಕ್ಕಪೇಟೆ ಕ್ಷೇತ್ರ ಪ್ರಮುಖ ವರ್ತಕರ ತಾಣ ಮತ್ತು ಮಾರುಕಟ್ಟೆ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಜನದಟ್ಟಣೆ ಸಾಕಷ್ಟಿದ್ದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸಂಚಾರ ದಟ್ಟಣೆಯೂ ಪ್ರಮುಖ ಸಮಸ್ಯೆಯಾಗಿದ್ದು, ಕಿರಿದಾದ ರಸ್ತೆಗಳು, ಹಳೆಯ ಕಟ್ಟಡಗಳಿಂದಾಗಿ ಕ್ಷೇತ್ರದ ಅಭಿವೃದ್ಧಿ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

ಕುಡಿಯುವ ನೀರು ಪೂರೈಕೆ ಸಮಸ್ಯೆ ಇದ್ದು, ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ. ಇನ್ನು ಕ್ಷೇತ್ರದಲ್ಲಿ 38 ಕೊಳಗೇರಿಗಳಿದ್ದು, ಅವುಗಳ ಅಭಿವೃದ್ಧಿಯಾಗಬೇಕಿದೆ. ಕಲಾಸಿಪಾಳ್ಯದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಇದೆ. ಫುಟ್​ಪಾತ್ ಸಮಸ್ಯೆಯೂ ಇದೆ. ಆದರೂ ಇತ್ತೀಚೆಗೆ ಕೆಲವೊಂದು ಅಭಿವೃದ್ದಿ ಕಾರ್ಯಗಳಾಗಿದ್ದು, ಅದನ್ನೇ ಮುಂದಿಟ್ಟು ಬಿಜೆಪಿ ಜನತೆಯ ಮುಂದೆ ಹೋಗುತ್ತಿದೆ.

ಜೀವರಾಜ್ ಆಳ್ವ, ಪಿಸಿ ಮೋಹನ್, ಹೇಮಚಂದ್ರ ಸಾಗರ್, ಉದಯ್ ಗರುಡಾಚಾರ್ ಹೀಗೆ ಬಿಜೆಪಿ ತಕ್ಕೆಯಲ್ಲೇ ಬರುತ್ತಿರುವ ಕ್ಷೇತ್ರದಲ್ಲಿ ಕಳೆದ ಬಾರಿ ಮಾತ್ರ ಒಮ್ಮೆ ಕಾಂಗ್ರೆಸ್ ವಶವಾಗಿತ್ತು. ಅದನ್ನು ಬಿಟ್ಟರೆ ಇಲ್ಲಿ ಬಿಜೆಪಿಗೆ ಭದ್ರ ಬುನಾದಿ ಇದೆ. ಹಾಗಾಗಿ ಈ ಬಾರಿಯೂ ಬಿಜೆಪಿ ಗೆಲುವಿನ ಲೆಕ್ಕಾಚಾರದಲ್ಲಿದೆ.

ಒಟ್ಟಾರೆಯಾಗಿ ಮಹಾನಗರದ ಪ್ರಮುಖ ವರ್ತಕರ ಕ್ಷೇತ್ರವಾಗಿರುವ ಚಿಕ್ಕಪೇಟೆಯಲ್ಲಿ ಕಮಲ ಕೋಟೆ ಭದ್ರವಾಗುತ್ತಾ, ಮರಳಿ ಕೈವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗುತ್ತಾ ಅಥವಾ ಜೆಡಿಎಸ್ ಮ್ಯಾಜಿಕ್ ಮಾಡಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಓದಿ:ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು: ಗೆಲ್ಲಲು ಕಾಂಗ್ರೆಸ್​ ಪ್ರತಿತಂತ್ರ

Last Updated : Mar 18, 2023, 10:40 AM IST

ABOUT THE AUTHOR

...view details