ಕರ್ನಾಟಕ

karnataka

By

Published : Nov 19, 2022, 5:40 PM IST

ETV Bharat / state

ರಸ್ತೆಗುಂಡಿ, ಸಾವು ನೋವುಗಳನ್ನ ಖಂಡಿಸಿ ಎಎಪಿ ಬೃಹತ್‌ ಪ್ರತಿಭಟನೆ: ವಿಧಾನಸೌಧ ಮುತ್ತಿಗೆ ಯತ್ನಕ್ಕೆ ಪೊಲೀಸರ ಅಡ್ಡಿ

ರಸ್ತೆ ಗುಂಡಿಗಳಿಂದ ಹೆಚ್ಚು ಸಾವು ನೋವು ಸಂಭವಿಸುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಆಮ್‌ ಆದ್ಮಿ ಪಕ್ಷವು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

karnataka-aap-protest-against-government
ರಸ್ತೆಗುಂಡಿ, ಸಾವುನೋವುಗಳು ಖಂಡಿಸಿ ಎಎಪಿ ಬೃಹತ್‌ ಪ್ರತಿಭಟನೆ

ಬೆಂಗಳೂರು: ರಸ್ತೆಗುಂಡಿಗಳಿಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಮ್‌ ಆದ್ಮಿ ಪಕ್ಷವು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಎಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ರಸ್ತೆಗಳು ಸಿಗಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯು ವರ್ಷಕ್ಕೂ ಅಧಿಕ ಸಮಯದಿಂದ ವಿವಿಧ ರೀತಿಯ ಚಳವಳಿ ಮಾಡುತ್ತಿದೆ. ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ನಾವು ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಗುಂಡಿಗಳ ಸುತ್ತ ರಂಗೋಲಿ ಹಾಕಿ ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೇವೆ.

ಗುಂಡಿಗಳಿಗೆ ಕಾರಣವಾದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ 71 ದೂರುಗಳನ್ನು ನೀಡಿದ್ದೇವೆ. ಆದರೆ, ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಬೃಹತ್‌ ಪ್ರತಿಭಟನೆ ಆಯೋಜಿಸಿದ್ದೇವೆ ಎಂದು ಹೇಳಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್‌ ರಾವ್‌ ಮಾತನಾಡಿ ರಸ್ತೆ ಗುಂಡಿ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಏಕೈಕ ಪಕ್ಷವೆಂದರೆ ಆಮ್‌ ಆದ್ಮಿ ಪಾರ್ಟಿ. ಇಂದು ಪೊಲೀಸರು ನಮ್ಮನ್ನು ಬಂಧಿಸಿದರೂ, ನಮ್ಮ ಹೋರಾಟ ಇನ್ನೊಂದು ದಿನ ಮುಂದುವರಿಯುತ್ತದೆ. ಹಲವು ರೀತಿಯ ತೆರಿಗೆಗಳನ್ನು ಕಟ್ಟುವ ಜನರಿಗೆ ಉತ್ತಮ ರಸ್ತೆಗಳು ಸಿಗುವಂತೆ ಮಾಡಲು ಆಮ್‌ ಆದ್ಮಿ ಪಾರ್ಟಿ ಸದಾ ಬದ್ಧವಾಗಿರುತ್ತದೆ.

ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ಬದಲಾಗಿ ನಿಯತ್ತಿನ ಕೊರತೆಯಿದೆ. ಬಿಬಿಎಂಪಿ ಚುನಾವಣೆ ನಡೆದು ತಮ್ಮಂದಿರು ಬಂದರೆ, ಅಣ್ಣಂದಿರಾದ ತಮಗೆ ಲೂಟಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಶಾಸಕರು ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗೆ ಎಎಪಿಯ ಮೂರು ಪ್ರಮುಖ ಬೇಡಿಕೆಗಳು:

1. ಕಳಪೆ ಕಾಮಗಾರಿ ನಡೆಸಿ ರಸ್ತೆಗುಂಡಿಗಳಿಗೆ ಕಾರಣರಾದ ಹಾಗೂ ಅವುಗಳನ್ನು ಮುಚ್ಚಲು ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್‌ ಬೇಜವಾಬ್ದಾರಿ ಹಾಗೂ ಕೊಲೆ ಸಂಚಿನ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಬೇಕು.

2. ರಸ್ತೆಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಈ ಕೂಡಲೇ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಬೇಕು ಹಾಗೂ ಅವರ ಕುಟುಂಬದ ಒಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು.

3. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಮುನ್ನ ಮುಖ್ಯಮಂತ್ರಿ ಅವರು ಕೆಲವು ರಸ್ತೆಗಳ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಿಸಿದ್ದು, ರಸ್ತೆಗುಂಡಿಗಳನ್ನು ಮುಚ್ಚಿಸುವ ಸಾಮರ್ಥ್ಯ ತಮಗಿದೆ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಅದೇ ರೀತಿ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಎಲ್ಲ ರಸ್ತೆಗಳನ್ನು ಒಂದು ವಾರದೊಳಗೆ ಮುಚ್ಚಿಸಬೇಕು. ಈ ಕುರಿತು ಬೆಂಗಳೂರಿನ ಜನತೆಗೆ ಈ ಕೂಡಲೇ ಬಹಿರಂಗ ವಾಗ್ದಾನ ನೀಡಬೇಕು.

ಆಮ್‌ ಆದ್ಮಿ ಪಾರ್ಟಿ ಮುಖಂಡ ಕೆ.ಮಥಾಯಿ, ಬ್ರಿಜೇಶ್‌ ಕಾಳಪ್ಪ, ಬಿ.ಟಿ.ನಾಗಣ್ಣ, ಜಗದೀಶ್‌ ವಿ ಸದಂ, ಕುಶಲಸ್ವಾಮಿ, ಉಷಾ ಮೋಹನ್‌, ಸಂಚಿತ್‌ ಸವ್ಹಾನಿ, ದರ್ಶನ್‌ ಜೈನ್‌, ಸುರೇಶ್‌ ರಾಥೋಡ್‌, ಜಗದೀಶ್‌ ಚಂದ್ರ, ರಾಜಶೇಖರ್‌ ದೊಡ್ಡಣ್ಣ, ಚನ್ನಪ್ಪಗೌಡ ನೆಲ್ಲೂರು, ಪ್ರಕಾಶ್‌ ನೆಡುಂಗಡಿ, ರವಿಚಂದ್ರ ನೆರಬೆಂಚಿ, ಅಶೋಕ್‌ ಮೃತ್ಯುಂಜಯ, ಫಾರಿದಾ, ವಿಜಯ್‌ ಶಾಸ್ತ್ರಿಮಠ್‌, ಅಮೃತಾ ಮತ್ತಿತರ ನಾಯಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಜನಸಾಮಾನ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್​ಗೆ ಮಸಾಜ್- ಸಿಸಿಟಿವಿ ವಿಡಿಯೋ

ABOUT THE AUTHOR

...view details