ಕರ್ನಾಟಕ

karnataka

ETV Bharat / state

ಐದು ರಾಜ್ಯಗಳ ಚುನಾವಣಾ ಫಲಿತಾಂಶ : ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದ ಬಿಜೆಪಿ

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ, ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಮುನ್ನಡೆಯಲಿದೆ ಎಂದು ಪಂಚರಾಜ್ಯಗಳ ಚುನಾವಣೆ ಬಗ್ಗೆ ಮಾತನಾಡುತ್ತಾ ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.

By

Published : Mar 10, 2022, 3:44 PM IST

Updated : Mar 10, 2022, 5:22 PM IST

ಉತ್ತರ ಪ್ರದೇಶದಲ್ಲಿ ಯೋಗಿ ಅದಿತ್ಯನಾಥ್​ ಜಯ
ಉತ್ತರ ಪ್ರದೇಶದಲ್ಲಿ ಯೋಗಿ ಅದಿತ್ಯನಾಥ್​ ಜಯ

ಬೆಂಗಳೂರು: ಕರ್ನಾಟಕದ ಮೇಲೆ ಐದು ರಾಜ್ಯ ಗಳ ಚುನಾವಣಾ ಫಲಿತಾಂಶ ಸಕಾರಾತ್ಮಕವಾದ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಲಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ, ಪಕ್ಷ ಇನ್ನಷ್ಟು ಶಕ್ತಿ ಶಾಲಿಯಾಗಿ ಮುನ್ನಡೆಯಲಿದೆ. ನಮ್ಮ ಸರ್ಕಾರ ಈಗಾಗಲೇ ಬಜೆಟ್​​ನಲ್ಲಿ ಘೋಷಣೆ ಮಾಡಿರುವಂತೆ ಉತ್ತಮ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮುಖಾಂತರ ಸುಭಿಕ್ಷ, ಸುಭದ್ರವಾದ ನವ ಕರ್ನಾಟಕವನ್ನು ಒಂದು ವರ್ಷದಲ್ಲಿ ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿ ಜನರ ವಿಶ್ವಾಸವನ್ನು ಗಳಿಸುತ್ತದೆ. ಪರಿಣಾಮ 2023 ರಲ್ಲಿ ಇಂದು ಫಲಿತಾಂಶ ಬಂದಂತೆಯೇ ಕರ್ನಾಟಕದ ಜನತೆ ಭಾ. ಜ.ಪ ವನ್ನು ಪುನರಾಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಂಜಾಬ್​ನಲ್ಲೊಬ್ಬ ಸಿಧು, ರಾಜ್ಯದಲ್ಲೊಬ್ಬ ಸಿದ್ದು - ಇಲ್ಲೂ ಕಾಂಗ್ರೆಸ್ ಅವನತಿಯಾಗುತ್ತೆ: ಜಗದೀಶ್ ಶೆಟ್ಟರ್ ಲೇವಡಿ

ಜನತೆಗೆ, ಪಕ್ಷಕ್ಕೆ, ಶಾಸಕರಿಗೆ ಇಂದಿನ ಚುನಾವಣಾ ಫಲಿತಾಂಶ ಸಕಾರಾತ್ಮಕ ಉತ್ತೇಜನ ನೀಡಿದೆ. ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಲು ಜನರ ಆಶೀರ್ವಾದ ಪಡೆದುಕೊಂಡಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಮತ್ತೊಮ್ಮೆ ಮೋದಿಯವರ ನೇತೃತ್ವದಲ್ಲಿ ಮೋದಿ ಮತ್ತು ಯೋಗಿಯ ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶವನ್ನು ಮುನ್ನಡೆಸುವ ಕೆಲಸ ಮಾಡುತ್ತಿದೆ. ಐದು ರಾಜ್ಯಗಳ ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಮ್ಮ ನಾಯಕರಾದ ನರೇಂದ್ರ ಮೋದಿಯವರು, ಭಾ.ಜ.ಪ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಹಾಗೂ ಸಂಬಂಧಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದ ಬಿಜೆಪಿ

ಪ್ರತಿಪಕ್ಷ ಧೂಳಿಪಟ:ನರೇಂದ್ರ ಮೋದಿಯವರ ನಾಯಕತ್ವದಲ್ಲಿರುವ ಕಾರ್ಯಕ್ರಮಗಳು, ಬಡವರ, ರೈತರ, ಹೆಣ್ಣುಮಕ್ಕಳ ಪರವಾಗಿದೆ. ಕೋವಿಡ್ ನಿರ್ವಹಣೆ, ಆರ್ಥಿಕ ಸಬಲೀಕರಣ ಮುಂತಾದ ಕೆಲಸಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡುವ ಪಣವನ್ನು ನಮ್ಮ ನಾಯಕರು ತೊಟ್ಟಿದ್ದಾರೆ. ನರೇಂದ್ರ ಮೋದಿಯವರ ನವಭಾರತ ನಿರ್ಮಾಣದ ಕನಸು-ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಇದು ಅಕ್ಷರಶಃ ದೇಶದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಭಾರತದ ಉದ್ದಗಲಕ್ಕೂ ಎಲ್ಲರೂ ಒಪ್ಪಿಕೊಳ್ಳುವ ಏಕಮೇವ ನಾಯಕ ನರೇಂದ್ರ ಮೋದಿಯವರು ಎನ್ನುವುದು ಪುನರ್ ಸ್ಥಾಪನೆಯಾಗಿದೆ ಎಂದು ಹೊಗಳಿದರು.

ಮೋದಿ ನಾಯಕತ್ವದಲ್ಲಿ ಕರ್ನಾಟಕವೂ ಸೇರಿದಂತೆ ಸದೃಢ ರಾಜ್ಯ ಮತ್ತು ದೇಶ ಕಟ್ಟಲು ಸಂಕಲ್ಪವನ್ನು ಇಂದು ತೊಟ್ಟಿದ್ದೇವೆ. ಇನ್ನಷ್ಟು ಶಕ್ತಿ, ಶ್ರಮದಿಂದ ಕರ್ನಾಟಕ ಕಟ್ಟುವ ಉತ್ಸಾಹ, ಪ್ರೋತ್ಸಾಹ, ಪ್ರೇರಣೆಯನ್ನು ಈ ಫಲಿತಾಂಶ ನಮಗೆ ಕೊಟ್ಟಿದೆ ಎಂದು ಹೆಮ್ಮೆಪಟ್ಟರು.

ಏಪ್ರಿಲ್ ನಲ್ಲಿ ಪ್ರಧಾನಿ ಕರ್ನಾಟಕಕ್ಕೆ..ಏಪ್ರಿಲ್ ನಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರಲಿದ್ದಾರೆ. ಬರುವ ಸಂದರ್ಭದಲ್ಲಿ ಒಂದು ವರ್ಷದ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಂಚರಾಜ್ಯ ಚುನಾವಣೆ ಒಂದು ಇತಿಹಾಸ ಆಗಿದೆ:ಕಂದಾಯ ಸಚಿವ ಆರ್. ಅಶೋಕ್​ ಸಹ ಈ ಸಂಬಂಧ ಮಾತನಾಡಿದ್ದು, 37 ವರ್ಷಗಳ ಬಳಿಕ ಒಂದು ಪಕ್ಷ ರಿಪೀಟ್ ಆಗಿದ್ರೆ ಅದು ಬಿಜೆಪಿ ಸರ್ಕಾರ. ಕಾಂಗ್ರೆಸ್‌ನವರು ಡಬಲ್ ಇಂಜಿನ್ ಎಂದು ಆರೋಪ ಮಾಡ್ತಿದ್ರು, 4 ರಾಜ್ಯದಲ್ಲೂ ಡಬಲ್ ಇಂಜಿನ್ ಗೆದ್ದಿದೆ. ಕಾಂಗ್ರೆಸ್‌ನವರು ಪ್ರತಿಪಕ್ಷ ಸ್ಥಾನದಲ್ಲೂ ಕೂರಲು ಆಗಿಲ್ಲ. ನಿನ್ನೆ 5 ರಾಜ್ಯಗಳಿಗೂ ಕಾಂಗ್ರೆಸ್‌ ನಾಯಕರು ದೌಡಾಯಿಸಿದ್ದು, ಎಲ್ಲಾ ರೆಸಾರ್ಟ್ ಗಳು ತುಂಬಿ ತುಳುಕಿದ್ವು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಧಿಕ್ಕಾಪಾಲಾಗಿದೆ, ಹೀನಾಯ ಸೋಲಾಗಿದೆ. ನಮ್ಮ ಕರ್ನಾಟಕದ ರಾಜ್ಯದ ಕಾಂಗ್ರೆಸ್‌ ನಾಯಕರು ಬೇರೆ ರಾಜ್ಯಗಳಿಗೆ ಏನೋ ಸಾಧನೆ ಮಾಡ್ತೀವಿ ಅಂತ ಹೋದ್ರು. ಆದ್ರೆ ಬಂದಪುಟ್ಟ ಹೋದ ಪುಟ್ಟ ಅನ್ನೋ ರೀತಿ ಆಗಿದೆ. ಈ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ. ಕರ್ನಾಟಕದ ಕಾರ್ಯಕರ್ತರಿಗೆ ಹುರುಪು ಬರುತ್ತೆ ಎಂದು ಎಂದರು.

ಮೋದಿಯವರ ಅಲೆ, ಯುಪಿ ಸಿಎಂ ನಡೆ ನಮ್ಮ ಗೆಲುವಿನ ಬುನಾದಿ ಭದ್ರಪಡಿಸಿದೆ. ಇಂದಿರಾ ಗಾಂಧಿಯವರ ರೀತಿ, ಅದಕ್ಕಿಂತ ಹೆಚ್ಚಿನ ವರ್ಚಸ್ಸು ಮೋದಿಯವರದ್ದು. ಅದಕ್ಕಾಗಿ ಈ ಗೆಲುವು. ಮುಂದೆಯೂ ಅದೇ ರೀತಿ ಇರುತ್ತೆ. ಯೋಗಿಯವರು ಗೂಂಡಾರಾಜ್ಯವನ್ನ ನಿರ್ಮೂಲನೆ ಮಾಡಿದ್ರು, ಖಡಕ್ ಆಡಳಿತ ನೀಡಿದ್ರು. ಇದು ಗೆಲುವಿಗೆ ಕಾರಣ ಎಂದು ಸಚಿವ ಅಶೋಕ್​ ಹೇಳಿದ್ರು.

Last Updated : Mar 10, 2022, 5:22 PM IST

ABOUT THE AUTHOR

...view details