ಬೆಂಗಳೂರು: ಮೈಸೂರಿಗೆ ಕೊರೊನಾ ಸೋಂಕು ಪಸರಿಸಲು ಕಾರಣರಾದ ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಮೊದಲ ಸೋಂಕಿತ ವ್ಯಕ್ತಿ ಚೀನಾಗೆ ಹೋಗಿ ಬಂದಿರುವ ಸುಳಿವು ರಾಜ್ಯ ಸರ್ಕಾರಕ್ಕೆ ಲಭ್ಯವಾಗಿದ್ದು, ಈ ಇದರ ಆಧಾರದಲ್ಲೇ ಮಾಹಿತಿ ಕಲೆಹಾಕುತ್ತಿದೆ.
ಜುಬಿಲಂಟ್ ಕಾರ್ಖಾನೆ ವಿಷಯ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆ ವ್ಯಕ್ತಿ ಚೀನಾಗೆ ಹೋಗಿ ಬಂದಿದ್ದರಿಂದ ಸಂಪರ್ಕ ಆಗಿರುವುದು ಪ್ರೈಮರಿ ಕಾಂಟ್ಯಾಕ್ಟ್ನಿಂದ ಗೊತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯಿಂದ ಸೋಂಕು ಬಂದಿರುವುದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆ ಟ್ರ್ಯಾಕ್ನಲ್ಲೇ ನಾವು ಕೆಲಸ ಮಾಡುತ್ತಿದ್ದೇವೆ ಸರ್ಕಾರದ ಬಳಿ ಕೆಲವು ಮಾಹಿತಿಗಳಿವೆ, ಎಲ್ಲವನ್ನೂ ಬಹಿರಂಗ ಮಾಡಲು ಆಗುವುದಿಲ್ಲ ತಿಳಿಸಿದ್ದಾರೆ.
ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಮೊದಲ ಸೋಂಕಿತನ ಟ್ರಾವೆಲ್ ಹಿಸ್ಟರಿ ಚೀನಾದಿಂದ ಪ್ರಾರಂಭವಾಗಿ ಕಾರ್ಖಾನೆಯ ಕ್ವಾಲಿಟಿ ಅಶ್ಯೂರೆನ್ಸ್ ಡಿಪಾರ್ಟ್ಮೆಂಟ್ನ ಸುಮಾರು 17-18 ಜನರಿಗೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಆಗಿರುವುದನ್ನು ಪತ್ತೆ ಹಚ್ಚಿದ್ದೇವೆ, ಎರಡು ಮೂರು ಜಿಲ್ಲೆಗಳಲ್ಲಿ ಇದ್ದ ನೌಕರರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿದ್ದೇವೆ. ಪ್ರೈಮರಿ ಕಾಂಟ್ಯಾಕ್ಟ್ನಲ್ಲೇ ಸಂಖ್ಯೆ ಹೆಚ್ಚಾಗಿದೆ. ನೌಕರರ ಕುಟುಂಬ ವರ್ಗದವರಲ್ಲೇ ಹರಡುತ್ತಿರುವುದನ್ನು ಗಮನಿಸಿದ್ದೇವೆ. ಅತೀ ಹೆಚ್ಚಿನ ಕಾಳಜಿಯನ್ನು ಮೈಸೂರು ಜಿಲ್ಲೆ ಮತ್ತು ನಂಜನಗೂಡು ತಾಲೂಕಿಗೆ ಮಾಡಬೇಕಾಗಿದೆ ಎಂದರು.
ಜುಬಿಲಂಟ್ ಕಂಪನಿಗೆ ಚೀನಾದಿಂದ ಕಂಟೈನರ್ ಬಂದಿದೆ, ಅದರಿಂದಲೇ ಕೊರೊನಾ ವೈರಸ್ ಹರಡಿತಾ ಎನ್ನುವ ಬಗ್ಗೆ ಕಂಟೈನರ್ನ ಸ್ಯಾಂಪಲ್ಗಳನ್ನು ಜಪಾನ್ಗೆ ಕಳಿಸಿದ್ದೇವೆ. ಅದರ ವರದಿ ಇನ್ನೂ ಬಂದಿಲ್ಲ ಎಂದರು.