ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಜೆಡಿಎಸ್ ಕನಸು ನನಸಾಗುವುದೇ!? - Bangalore

ಸ್ವಂತ ಬಲದಿಂದ 2023ರಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಜೆಡಿಎಸ್ ಇದೀಗ 5 ವಿಷಯಗಳನ್ನು ಗುರುತಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬರನ್ನು ತೃಪ್ತಿಪಡಿಸಲು ಕಾರ್ಯಕ್ರಮವನ್ನು ಜಾರಿಗೆ ತರಲು ದಳಪತಿಗಳು ಮುಂದಾಗಿದ್ದಾರೆ..

Bangalore
ಬೆಂಗಳೂರು

By

Published : Jul 16, 2021, 9:05 PM IST

ಬೆಂಗಳೂರು :ರಾಜ್ಯದಲ್ಲಿ ಶತಾಯ-ಗತಾಯ ಪಕ್ಷವನ್ನು ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ತರಲೇಬೇಕೆಂಬುದು ಜೆಡಿಎಸ್ ಕನಸು. ಅದಕ್ಕಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೊಡಗಿದ್ದಾರೆ.

ಮತ್ತೊಂದೆಡೆ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿ ಪಕ್ಷದಿಂದ ಹೊರ ಬೀಳುತ್ತಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಿಂದ ಹಲವು ಮುಖಂಡರು ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಜೆಡಿಎಸ್​​​ನ ವಿಷನ್-2023ರ ಕನಸಿಗೆ ಪೆಟ್ಟು ಬೀಳುವ ಮುನ್ಸೂಚನೆ ಕಾಣಿಸುತ್ತಿದೆ.

ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಗೌಡ ಮಾಲಿ ಪಾಟೀಲ್ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲ ತುಂಬಿದ್ದ ಎಂ ಸಿ ಮನಗೂಳಿ ನಿಧನರಾಗಿದ್ದು, ತಂದೆ ನಿಧನ ನಂತರ ಅಶೋಕ್ ಮನಗೂಳಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನು, ಮಧು ಬಂಗಾರಪ್ಪ ಸಹ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ನಾಯಕರ ಬಗ್ಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಸಹ ತಟಸ್ಥರಾಗಿದ್ದು, ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂಬ ಸುದ್ದಿ ಪಕ್ಷದ ವಲಯದಲ್ಲೇ ಹರಿದಾಡುತ್ತಿದೆ.

ಅದೇ ರೀತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ್ದ ಜಿ ಟಿ ದೇವೇಗೌಡ ಅವರು ಜೆಡಿಎಸ್ ನಾಯಕರ ವಿರುದ್ಧ ಮುನಿಸಿಕೊಂಡು ತಟಸ್ಥರಾಗಿದ್ದಾರೆ. ಜೆಡಿಎಸ್‌ನಲ್ಲೇ ಉಳಿಯಬೇಕೋ, ಬಿಜೆಪಿ ಅಥವಾ ಕಾಂಗ್ರೆಸ್​​ಗೆ ಹೋಗಬೇಕೋ ಎಂಬ ಜಿಜ್ಞಾಸೆಯಲ್ಲಿ ಅವರಿದ್ದಾರೆ.

ಕುಮಾರಸ್ವಾಮಿ ಸರ್ಕಾರ ಪತನ ಸಂದರ್ಭ ಬಿ.ಎಸ್.ಯಡಿಯೂರಪ್ಪ ಅಪರೇಷನ್ ಆಡಿಯೋ ಬಾಂಬ್ ಸಿಡಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಕಂದಕೂರು ಕೂಡ ತಟಸ್ಥರಾಗಿದ್ದಾರೆ. ಜೆಡಿಎಸ್ ಯುವ ಘಟಕಕ್ಕೆ ಅಧ್ಯಕ್ಷರನ್ನಾಗಿ ಶರಣಗೌಡರನ್ನು ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಇದರಿಂದ ಬೇಸರಗೊಂಡು ಶರಣಗೌಡ ಅಂತರ ಕಾಯ್ದುಕೊಂಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ.

ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತ ಕುಮಾರಸ್ವಾಮಿ ಅವರು ಇದೀಗ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಪಕ್ಷದ ಸಂಘಟನೆಗಿಂತ ಇತ್ತೀಚೆಗೆ ವಿವಾದಿತ ಹೇಳಿಕೆಗಳು ಹಾಗೂ ಟ್ವೀಟ್ ವಾರ್​​ನಿಂದಲೇ ಜೆಡಿಎಸ್ ಸದ್ದು ಮಾಡುತ್ತಿದೆ. ಇದರ ಮಧ್ಯೆ ಜೆಡಿಎಸ್ ನಾಯಕರು ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧ ತಾರಕಕ್ಕೇರಿ, ದ್ವೇಷ ರಾಜಕಾರಣಕ್ಕೆ ತಿರುಗಿದೆ. ಸುಮಲತಾ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಡಿದ ಮಾತು ಜೆಡಿಎಸ್​​ಗೆ ಮುಳುವಾಗಿ ಪರಿಣಮಿಸುತ್ತಿದೆ.

ಬೆರಳೆಣಿಕೆಯಷ್ಟು ನಾಯಕರು ಕ್ರಿಯಾಶೀಲ :ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಶಾಸಕರು, ಬೀದರ್‌ನಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮತ್ತು ಧಾರವಾಡದಲ್ಲಿ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಕ್ರಿಯಾಶೀಲರಾಗಿದ್ದಾರೆ. ಬಸವರಾಜ ಹೊರಟ್ಟಿ ವಿಧಾನಪರಿಷತ್​ ಸಭಾಪತಿಗಳಾಗಿ ಆಯ್ಕೆಯಾಗಿದ್ದು, ಪಕ್ಷದ ಪ್ರಾಥಮಿಕ ಸದಸ್ಯ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಮುನ್ನಡೆಸುವ, ಸಂಘಟಿಸುವ ನಾಯಕರ ಕೊರತೆ ಕಾಡುತ್ತಿದೆ.

ಚುನಾವಣೆ ಹತ್ತಿರ ಬಂದಾಗ ಮಾತ್ರ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಾರೆಂಬ ದೂರು ಹೊಸದೇನಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದರೂ ಮತಗಳಿಕೆಯಲ್ಲಿ ಫಲ ನೀಡಲಿಲ್ಲ ಎಂಬುದು ಗೊತ್ತಿರುವ ಸಂಗತಿ.

ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕೆಂಬ ಛಲದಲ್ಲಿ ಜೆಡಿಎಸ್ ಇದೆ. ತಳಮಟ್ಟದಲ್ಲಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸಿ ಯುವಜನತೆಯನ್ನು ಗುರುತಿಸಿ ಅವರನ್ನು ಬೆಳೆಸುವುದು, ಜನರೊಂದಿಗೆ ಹೆಚ್ಚೆಚ್ಚು ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನತೆಗೆ ಹತ್ತಿರವಾಗುವುದು ಪಕ್ಷದ ನಾಯಕರು ಹಾಕಿಕೊಂಡಿರುವ ಯೋಜನೆಯಾಗಿದೆ.

ಪಂಚಾಕ್ಷರಿ ಜಪ ಫಲಿಸುವುದೇ? :ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡಲಿಲ್ಲ ಎಂಬ ಕುಮಾರಸ್ವಾಮಿ ಮೇಲಿನ ಆರೋಪ ಇನ್ನೂ ಜನಮನದಲ್ಲಿ ಜೀವಂತವಾಗಿದೆ. ಹಾಗಾಗಿ, ಎಷ್ಟೇ ಪ್ರಯತ್ನ ಪಟ್ಟರೂ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ವೀರಶೈವ-ಲಿಂಗಾಯತ ಮತದಾರರ ವಿಶ್ವಾಸ ಗಳಿಸುವಲ್ಲಿ ಜೆಡಿಎಸ್ ಸಫಲವಾಗಲಿಲ್ಲ. ಇದೀಗ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಪಂಚರತ್ನ ಕಾರ್ಯಕ್ರಮದ ಹೆಸರನ್ನು "ಪಂಚಾಕ್ಷರಿ" ಎಂದು ಕುಮಾರಸ್ವಾಮಿ ಬದಲಿಸಿದ್ದಾರೆ.

ಈ ಬಾರಿ ಹೆಚ್ಚು ಮಂದಿ ಲಿಂಗಾಯತರಿಗೆ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯದ ಮತಗಳು ವಶ ಮಾಡಿಕೊಳ್ಳಲು ಪ್ರಯತ್ನ ನಡೆದಿವೆ. ಅದರ ಭಾಗವಾಗಿ ಕಾಂಗ್ರೆಸ್​​ನಲ್ಲಿರುವ ಸಿ ಎಂ ಇಬ್ರಾಹಿಂ ಅವರನ್ನು ಸೆಳೆಯುವ ಯತ್ನ ನಡೆದಿದೆ. ಇನ್ನು, ಬಸವ ಕಲ್ಯಾಣ ಬಳಿಕ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮುಸ್ಲಿಂ ಅಭ್ಯರ್ಥಿಯನ್ನೇ ಘೋಷಿಸಲಾಗಿದೆ.

ಸ್ವಂತ ಬಲದಿಂದ 2023ರಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಜೆಡಿಎಸ್ ಇದೀಗ 5 ವಿಷಯಗಳನ್ನು ಗುರುತಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬರನ್ನು ತೃಪ್ತಿಪಡಿಸಲು ಕಾರ್ಯಕ್ರಮವನ್ನು ಜಾರಿಗೆ ತರಲು ದಳಪತಿಗಳು ಮುಂದಾಗಿದ್ದಾರೆ. ಅದು ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಮುಂಬರುವ ಚುನಾವಣೆಗೆ ಪೂರ್ವ ತಯಾರಿ : ನಾಳೆಯಿಂದ ಜುಲೈ 23ರವರೆಗೆ ಜೆಡಿಎಸ್‌ ಜಿಲ್ಲಾವಾರು ಸಭೆ

ABOUT THE AUTHOR

...view details