ಬೆಂಗಳೂರು: ಬೆಂಗಳೂರಿನ ನಾಗರಿಕರ ಹಿತ ದೃಷ್ಟಿಯಿಂದ ಮೇಕೆದಾಟು ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿಯಾದರು ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ ಒತ್ತಾಯಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಇಲ್ಲಿನ ಅಗತ್ಯದ ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಗೆ ಕೂರಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಮುಖ ಯೋಜನೆಗಳ ಭವಿಷ್ಯ ಕೇಂದ್ರದ ಕೈಯಲ್ಲಿದೆ: ಕೃಷ್ಣಾ 3ನೇ ಹಂತದ ಯೋಜನೆಗಳ ಅನುಷ್ಠಾನ, ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿದ ನಮ್ಮ ಪಾಲಿನ ನೀರು ಬಳಕೆಗೆ ಕೃಷ್ಣಾ 2ನೇ ನ್ಯಾಯಾಧಿಕರಣದ ಐತೀರ್ಪು ಅಧಿಸೂಚನೆ ಪ್ರಕಟಿಸಲು ಸುಪ್ರೀಂ ಕೋರ್ಟ್ಗೆ ಕೇಂದ್ರ ಅಫಿಡವಿಟ್ ಸಲ್ಲಿಸಬೇಕು. ರಾಜ್ಯದ ಪ್ರಸ್ತಾವಿತ ಮೇಕೆದಾಟು, ಕೃಷ್ಣಾ ಐತೀರ್ಪಿನ ಗೆಜೆಟ್ ಅಧಿಸೂಚನೆ, ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿಗೆ ತ್ವರಿತ ತೀರುವಳಿಯಂತಹ ಪ್ರಮುಖ ಯೋಜನೆಗಳ ಭವಿಷ್ಯ ಕೇಂದ್ರ ಸರ್ಕಾರದ ಕೈಯ್ಯಲ್ಲಿದೆ. ಕೇಂದ್ರದಲ್ಲಿಯೂ ನಿಮ್ಮದೇ ಸರ್ಕಾರ ಇರುವುದರಿಂದ ಈ ಕಾರ್ಯ ಅತ್ಯಂತ ಸುಲಭವಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ 5,300 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ. ಆದರೆ ಯೋಜನೆಗೆ ಆಂಧ್ರದ ರಾಯಲ್ಸೀಮೆ ಪ್ರಾಂತದವರು ಯುಪಿಬಿಗೆ ನೀರು ಹಂಚಿಕೆಯಾಗಿಲ್ಲ ಎಂಬ ಅಪಸ್ವರ ಎತ್ತಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಕಾನೂನಾತ್ಮಕ ತೊಡಕು ನಿವಾರಣೆಯಾಗಿವೆ. ವಿಸ್ತೃತ ಯೋಜನಾ ವರದಿಗೆ ಕೇಂದ್ರದ ಇಲಾಖೆಗಳ ತೀರುವಳಿ, ಅನುಮತಿ ತ್ವರಿತವಾಗಿ ಲಭಿಸಬೇಕಾಗಿದೆ. ಬಚಾವತ್ ತೀರ್ಪಿನಲ್ಲಿ ಕೃಷ್ಣಾ ಕಣಿವೆಯಡಿ ರಾಜ್ಯಕ್ಕೆ ನೀರು ಹಂಚಿಕೆಯಾಗಿದೆ. ಕೃಷ್ಣಾ ಕಣಿವೆಯಲ್ಲಿ ತುಂಗಭದ್ರಾ, ಭದ್ರಾ ಉಪಕಣಿವೆಗಳು ಸೇರಿವೆ ಎಂದು ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟು, ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಇತ್ತರು.
ದಮ್ಮು ತಾಕತ್ತು ಪ್ರಸ್ತಾಪ:ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಮಾತನಾಡಿದ ಸಂದರ್ಭ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಸಾಕಷ್ಟು ವಾಕ್ ಸಮರ ನಡೆಯಿತು. ಯು.ಬಿ ವೆಂಕಟೇಶ್ ಮಾತನಾಡಿ, 'ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವವಿದೆ. ರಾಜ್ಯದ ಭೇಟಿ ಬಗ್ಗೆಯೂ ಆಕ್ಷೇಪವಿಲ್ಲ. ಆದರೆ ಪ್ರವಾಹ ಕಾಲಕ್ಕೆ ಬಂದರೂ ಬಾಧಿತ ಪ್ರದೇಶ ನೋಡಲಿಲ್ಲ. ಇಸ್ರೋ ಬಾಹ್ಯಾಕಾಶ ನೌಕೆ ಮಂಗಳಯಾನ ನೋಡಲು ಹೋದರು. ಅದು ವಿಫಲವಾಯಿತು. ಈ ಕಡೆ ಬಿ.ಎಸ್ ಯಡಿಯೂರಪ್ಪ ಒಬ್ಬಂಟಿಯಾಗಿ ರಾಜ್ಯ ಸುತ್ತಿದರು. ಆಗ ಬಾರದ ಮೋದಿ ಈಗ ಬರುತ್ತಿರುವುದೇಕೆ' ? ಎಂದು ಕೆಣಕಿದರು.