ಕರ್ನಾಟಕ

karnataka

ETV Bharat / state

ಬಿಬಿಎಂಪಿ ಚುನಾವಣೆ : ಬೆಂಗಳೂರಿನ ವಾರ್ಡ್​ಗಳಲ್ಲಿ ಸಂಚರಿಸಲಿದೆ ಜೆಡಿಎಸ್​ನ ಜನತಾ ಮಿತ್ರ ವಾಹನ! - BBMP election

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ 15 ಜನತಾ ಮಿತ್ರ ವಾಹನಗಳು ಬೆಂಗಳೂರಿನ ಎಲ್ಲಾ ವಾರ್ಡ್​ಗಳಲ್ಲಿ ಸಂಚರಿಸಲಿದ್ದು, ಪಕ್ಷದ ಹಾಗೂ ಹೆಚ್​.ಡಿ.ಕುಮಾರಸ್ವಾಮಿ ಅವರ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು..

ಬೆಂಗಳೂರಿನ ವಾರ್ಡ್​ಗಳಲ್ಲಿ ಸಂಚರಿಸಲಿದೆ ಜೆಡಿಎಸ್​ನ ಜನತಾ ಮಿತ್ರ ವಾಹನ !
ಬೆಂಗಳೂರಿನ ವಾರ್ಡ್​ಗಳಲ್ಲಿ ಸಂಚರಿಸಲಿದೆ ಜೆಡಿಎಸ್​ನ ಜನತಾ ಮಿತ್ರ ವಾಹನ !

By

Published : Jun 17, 2022, 5:42 PM IST

ಬೆಂಗಳೂರು : ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿ ನಡೆಸುತ್ತಿರುವ ಜೆಡಿಎಸ್‍, ಒಂದು ತಿಂಗಳ ಕಾಲ ವಿನೂತನ ಕಾರ್ಯಕ್ರಮ ರೂಪಿಸಲು ಸಜ್ಜಾಗುತ್ತಿದೆ. ರಾಜ್ಯದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಗಳೂರಿನಲ್ಲಿ 'ಜನತಾ ಮಿತ್ರ' ಎಂಬ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ನಡೆಸಲು ತಯಾರಿ ನಡೆಸಿದೆ.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜೂನ್ 22ರಂದು ಜನತಾ ಮಿತ್ರ ವಾಹನಗಳಿಗೆ ಚಾಲನೆ ನೀಡಲಾಗುತ್ತದೆ. ಬೆಂಗಳೂರಿನ ಎಲ್ಲಾ ವಾರ್ಡ್​ಗಲ್ಲೂ 15 ವಾಹನಗಳು ಸಂಚರಿಸಲಿವೆ. ಜನರಿಗೆ ಯಾವ ರೀತಿ ಆಡಳಿತ ಬೇಕೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಅಲ್ಲದೆ, ಜೆಡಿಎಸ್‍ ಉದ್ದೇಶಿತ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.

ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಏಕೆ ಮುಖ್ಯಮಂತ್ರಿ ಯಾಗಬೇಕೆಂಬುದರ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರ ಜೊತೆಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷ ಸಂಘಟನೆಗೆ ಜೆಡಿಎಸ್‍ ಮುಂದಾಗಿದೆ. ಈಗಾಗಲೇ ಕಳೆದ ಒಂದು ವಾರದಿಂದ ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸಭೆಗಳನ್ನು ಮಾಡುತ್ತಿದ್ದಾರೆ.

ಈಗ ಪಕ್ಷದ ಬಿಬಿಎಂಪಿ ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಮತ್ತು ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ನಗರದ ವಿವಿಧ ವಿಭಾಗಗಳ ಅಧ್ಯಕ್ಷರುಗಳ ಜೊತೆ ಕುಮಾರಸ್ವಾಮಿ ಅವರು ಸಭೆ ನಡೆಸಿ ಬಿಬಿಎಂಪಿ ಚುನಾವಣೆಗೆ ಯಾವ ರೀತಿ ತಯಾರಿ ನಡೆಸಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ವಿನ್ಯಾಸಗೊಳಿಸಿದ ವಾಹನ : ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿರುವ ವಾಹನಗಳು ಪ್ರತಿ ವಿಧಾನಸಭಾ ಕ್ಷೇತ್ರದ ವಾರ್ಡ್‌ನಲ್ಲೂ ಸಂಚರಿಸಲಿವೆ. ಸಾರ್ವಜನಿಕರು ಮುಂದಿನ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ತಮ್ಮ ಸಲಹೆಯನ್ನು ಬರೆದು ಡ್ರಾಪ್ ಬಾಕ್ಸ್‌ನಲ್ಲಿ ಹಾಕಬಹುದು. ಅಲ್ಲದೆ, ಮೊಬೈಲ್‌ನಲ್ಲಿ ಬಾರ್ಕೋಡ್ ಸ್ಕ್ಯಾನ್ ಮಾಡಿ ವೆಬ್ಸೈಟ್ ಮೂಲಕವೂ ಅಭಿಪ್ರಾಯ ತಿಳಿಸಬಹುದು. ಪೋಡಿಯಂನಲ್ಲಿ ಟ್ಯಾಬ್ ಲಭ್ಯವಿದ್ದು, ಅದರಲ್ಲೂ ಕೂಡ ತಮ್ಮ ಸಲಹೆಗಳನ್ನು ಬರೆಯಬಹುದಾಗಿದೆ.

ಒಂದು ತಿಂಗಳ ಕಾಲ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳುವ ಜನತಾ ಮಿತ್ರ ಯಾತ್ರೆಯು ಜೆಡಿಎಸ್‍ ಪಕ್ಷದ ಭರವಸೆಗಳನ್ನು ತಿಳಿಸಲಿದೆ. ಒಂದು ತಿಂಗಳ ನಂತರ ಜನತಾ ಮಿತ್ರ ಸಮಾರೋಪವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ಪಕ್ಷ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ನಾಳೆ ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ABOUT THE AUTHOR

...view details