ಬೆಂಗಳೂರು : 'ನಾವೂ ಸರ್ವೈವಲ್ ಆಗಬೇಕಲ್ಲವೇ' ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಯ ಗೂಢಾರ್ಥವೇನು, ಒಳ ಮರ್ಮವೇನು? ಅಂತಾ ಹೀಗೊಂದು ಚರ್ಚೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ವಿಧಾನಸಭೆಯಲ್ಲಿ ಇತ್ತೀಚಿಗೆ ಹೆಚ್ಡಿಕೆ ಮಾತನಾಡುತ್ತಿದ್ದ ವೇಳೆ ಪದೇ ಪದೆ ಬಿಜೆಪಿ ಬೆಂಬಲಿಸಿ ಮಾತನಾಡುತ್ತಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರು 'ಏನು ಕುಮಾರಸ್ವಾಮಿ ಅವರೇ ಬಿಜೆಪಿ ಜೊತೆ ಸೇರಿಕೊಂಡಿದ್ದಿರಾ?' ಎಂದು ಕುಟುಕಿದರು. ಆ ವೇಳೆ ನಾವೂ ಸರ್ವೈವಲ್ ಆಗಬೇಕಲ್ಲವೇ ಎಂದು ಮಾರ್ಮಿಕವಾಗಿ ಹೇಳಿದ್ದು, ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಅಧಿಕಾರದಲ್ಲಿದ್ದರೂ, ಪ್ರತಿಪಕ್ಷ ಕಾಂಗ್ರೆಸನ್ನೇ ಟಾರ್ಗೆಟ್ ಮಾಡಿ ಪದೇ ಪದೆ ಕುಮಾರಸ್ವಾಮಿ ಅವರು ಮಾತಮಾಡುತ್ತಿದ್ದರು. ಚುನಾವಣೆ ನಂತರ ಅಧಿಕೃತ ಪ್ರತಿಪಕ್ಷ ಬಿಜೆಪಿ ಬೆಂಬಲಿಸಿ ಮಾತನಾಡುತ್ತಿರುವುದು, ಅಲ್ಲದೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಅವರ ಮಾತಿನ ಮರ್ಮವೂ ಕೂಡ ಬಿಜೆಪಿ ಜತೆ ಕೈಜೋಡಿಸಬಹುದು ಎಂಬ ಊಹಾಪೋಹಕ್ಕೆ ರೆಕ್ಕೆಪುಕ್ಕ ಹುಟ್ಟುಹಾಕಿವೆ.
ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ಇತ್ತೀಚಿಗೆ ಕುಮಾರಸ್ವಾಮಿ ಅವರು ಆಡುತ್ತಿರುವ ಮಾತುಗಳು ಪುಷ್ಠಿ ನೀಡುತ್ತಿದೆ. ಈ ನಡುವೆ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜೆಡಿಎಸ್ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಇನ್ನೊಂದೆಡೆ ಎನ್ಡಿಎ ಮೈತ್ರಿಕೂಟವನ್ನು ಬಲಪಡಿಸಲು ಬಿಜೆಪಿ ಮುಂದಾಗಿದೆ. ಹೊಸ ಮಿತ್ರರ ಹುಡುಕಾಟ ನಡೆಸಿರುವ ಬಿಜೆಪಿ ಈ ಮಧ್ಯೆ ಜೆಡಿಎಸ್ಗೆ ಗಾಳ ಹಾಕಿದೆ. 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.