ಕರ್ನಾಟಕ

karnataka

ETV Bharat / state

ಜಪ್ತಿ ಮಾಡಿದ ಜಯಲಲಿತಾ ಚರಾಸ್ತಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಜಾ

ಜಯಲಲಿತಾ ಅವರಿಂದ ಸ್ವಾಧೀನ ಪಡಿಸಿಕೊಂಡು ಚರಾಸ್ತಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಜೆ.ದೀಪಾ ಮತ್ತು ಜೆ.ದೀಪಕ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿದೆ.

By

Published : Jul 13, 2023, 10:22 PM IST

Updated : Jul 13, 2023, 10:29 PM IST

Etv Bharat
ಜಪ್ತಿ ಮಾಡಿದ ಜಯಲಲಿತಾ ಚರಾಸ್ತಿಯನ್ನು ತಮ್ಮ ವಶಕ್ಕೆ ನೀಡುವಂತೆ ಸಂಬಂಧಿಕರು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು:ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರಿಂದ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡು ಪ್ರಸ್ತುತ ಬೆಂಗಳೂರ ನ್ಯಾಯಾಲಯದ ವಶದಲ್ಲಿರುವ ಚರಾಸ್ತಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಅವರ ಸೊಸೆ ಜೆ.ದೀಪಾ ಮತ್ತು ಸೋದರಳಿಯ ಜೆ.ದೀಪಕ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನಗರದ 32ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ.ಮೋಹನ್ ಅವರು, ಜಯಲಲಿತಾರಿಂದ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಅವರ ಸಂಬಂಧಿಕರಿಗೆ ಪಡೆಯಲು ಅರ್ಹರಿಲ್ಲ ಎಂದು ಆದೇಶಿಸಿದ್ದಾರೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಇತರ ಆರೋಪಿಗಳಂತೆ ಜಯಲಲಿತಾರನ್ನು ದೋಷಿ ಎಂದು ಘೋಷಣೆ ಮಾಡಿಲ್ಲ. ಅಲ್ಲದೇ, ಈ ಸಂಬಂಧ ಸುಪ್ರೀಂ ಕೋರ್ಟ್‌ನ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಅವರು ಮೃತಪಟ್ಟಿದ್ದರು. ಇತರರ ಕುರಿತು ಅಪರಾಧಿಗಳು ಎಂದು ತೀರ್ಪು ನೀಡುವಾಗ ಜಯಲಲಿತಾ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿದೆ. ಹೀಗಾಗಿ ಅವರಿಂದ ಮುಟ್ಟುಗೋಲು ಹಾಕಿಕೊಂಡಿರುವ ವಸ್ತುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು.

ಇದನ್ನು ತಳ್ಳಿ ಹಾಕಿದ ನ್ಯಾಯಾಧೀಶರು, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಎಲ್ಲ ಆರೋಪಿಗಳು (ಜೆ. ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಎಳವರಸಿ, ವಿ.ಎನ್.ಸುಧಾಕರ್) ಒಟ್ಟಾಗಿ ಸೇರಿ ಕಂಪನಿಗಳನ್ನು ಪ್ರಾರಂಭಿಸಿ ಅಕ್ರಮವಾಗಿ ಗಳಿಸಿದ್ದ ಆಸ್ತಿಯನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದೆ.

ಅಲ್ಲದೆ, ಆರೋಪಿಗಳು ಕಾನೂನು ಬಾಹಿರವಾಗಿ ಆಸ್ತಿಗಳನ್ನು ಸಂಪಾದಿಸಿದ್ದಾರೆ. ಇದೇ ಕಾರಣದಿಂದ ನ್ಯಾಯಾಲಯ ಸ್ವಾಧೀನ ಪಡಿಸಿಕೊಂಡಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸುವ ಮುನ್ನವೇ ಮೊದಲನೇ ಆರೋಪಿಯಾಗಿದ್ದ ಜಯಲಲಿತಾ ಮೃತಪಟ್ಟಿದ್ದರು. ಹೀಗಾಗಿ ನ್ಯಾಯಾಲಯದ ವಶದಲ್ಲಿರುವ ವಸ್ತುಗಳನ್ನು ಅವರ ಸಂಬಂಧಿಕರಿಗೆ ನೀಡಲಾಗದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಪ್ಟಡಿಸಿದೆ.

ಜಯಲಲಿತಾರಿಂದ ವಶಪಡಿಸಿಕೊಂಡ ವಸ್ತುಗಳು: ಜಯಲಲಿತಾ ಅವರಿಂದ ಹಲವು ವಸ್ತುಗಳು ಜಪ್ತಿ ಮಾಡಲಾಗಿದೆ. 7,040 ಗ್ರಾಂ ತೂಕದ 486ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್‌ರೇಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ ನಗದು ಮುಟ್ಟುಗೋಲು ಹಾಕಲಾಗಿದೆ. ಇದೇ ಪ್ರಕರಣ ಸಂಬಂಧ ಸರ್ಕಾರದ ಪರ ವಾದ ಮಂಡಿಸಲು ರಾಜ್ಯ ಸರ್ಕಾರ ಕಿರಣ್ ಎಸ್.ಜವಳಿ ಅವರನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷ ಅಭಿಯೋಜಕರನ್ನು ನೇಮಕ ಮಾಡಿ ಆದೇಶಿಸಿತ್ತು.

ಇದನ್ನೂ ಓದಿ:ಜಯಲಲಿತಾರಿಂದ ಜಪ್ತಿ ಮಾಡಿದ್ದ ಬೆಲೆಬಾಳುವ ವಸ್ತುಗಳ ವಿಲೇವಾರಿಗೆ ವಿಶೇಷ ಅಭಿಯೋಜಕರನ್ನ ನೇಮಿಸಿದ ಸರ್ಕಾರ

Last Updated : Jul 13, 2023, 10:29 PM IST

ABOUT THE AUTHOR

...view details