ಕರ್ನಾಟಕ

karnataka

By

Published : Jun 25, 2023, 10:08 AM IST

ETV Bharat / state

ಜಯದೇವ ಹೃದ್ರೋಗ ಸಂಸ್ಥೆಯಿಂದ 52 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ: ಡಾ.ಸಿ.ಎನ್.ಮಂಜುನಾಥ್‌

ಜಯದೇವ ಸಂಸ್ಥೆ ಮಾನವೀಯತೆ ಮತ್ತು ಹೃದಯ ವೈಶಾಲ್ಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಸಿ.ಎನ್.ಮಂಜುನಾಥ್‌ ಹೇಳಿದರು.

Jayadeva Heart Institute
ಜಯದೇವ ಹೃದ್ರೋಗ ಸಂಸ್ಥೆಯಿಂದ ಸಮಾಜ ಸೇವಾ ಕಾರ್ಯಕ್ರಮ: ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯಿಂದ 52 ಲಕ್ಷ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ ನಿರ್ಮಿಸಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ತಿಳಿಸಿದರು. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಶನಿವಾರ ರಕ್ಷಾ ಫೌಂಡೇಷನ್​ನಿಂದ 11ನೇ ವರ್ಷದ ಸಮಾಜ ಸೇವಾ ಕಾರ್ಯಕ್ರಮದಲ್ಲಿ 10 ಸಾವಿರ ಮಕ್ಕಳಿಗೆ 1.5 ಲಕ್ಷ ಉಚಿತ ನೋಟ್ ಪುಸ್ತಕಗಳು, ಕಲಿತಾ ಪರಿಕರಗಳ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್‌, "ಜಯದೇವ ಸಂಸ್ಥೆಯ ಸೇವಾ ಮನೋಭಾವನೆಯಿಂದಾಗಿ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಸೂತ್ರಗಳು. ಇದು ಕಂಪ್ಯೂಟರ್ ಲ್ಯಾಪ್ ಟಾಪ್ ಯುಗವಾಗಿ ಪರಿವರ್ತನೆಯಾಗಿದ್ದು, ಮಕ್ಕಳು ಪೆನ್ನು ಬಳಸಿ ಬರೆದರೆ ಮೆದುಳಿಗೆ ಒಳ್ಳೆಯದು" ಎಂದರು.

ಜಯದೇವ ಹೃದ್ರೋಗ ಸಂಸ್ಥೆಯಿಂದ ಸಮಾಜ ಸೇವಾ ಕಾರ್ಯಕ್ರಮ: ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, "ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಪುಸ್ತಕ, ಪರಿಕರಗಳನ್ನು ಒದಗಿಸಿದರೆ ವಿದ್ಯಾದಾನ ಮಾಡಿದಂತಾಗುತ್ತದೆ. ಅವಶ್ಯಕತೆ ಇರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು. ಜ್ಞಾನರ್ಜನೆಗೆ ಶಿಕ್ಷಣವೇ ಮಾರ್ಗ. ಶಿಕ್ಷಣ ಪಡೆದವರು ನಮ್ಮ ದೇಶ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು" ಎಂದು ಹೇಳಿದರು.

ಇದನ್ನೂ ಓದಿ:ವೀಕೆಂಡ್​ ವಿತ್​ ರಮೇಶ್..​​ ಸಾಧಕರ ಸೀಟ್​ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್​

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, "ಶಿಕ್ಷಣಕ್ಕೆ ಪ್ರೋತ್ಸಾಹ, ಸಹಕಾರ ನೀಡುವುದು ಮುಖ್ಯ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಣ, ಗುರುಗಳ ಸರಿಯಾದ ಮಾರ್ಗದರ್ಶನ ಲಭಿಸಿದರೆ ಉತ್ತಮ ಪ್ರಜೆಗಳಾಗಿ ಬೆಳಗುತ್ತಾರೆ" ಎಂದರು. ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, "ಸಮಾಜದಲ್ಲಿ ನೊಂದವರ ಮತ್ತು ಬಡವರ ಸೇವೆ ಮಾಡುವುದು ಅಗತ್ಯವಾಗಿದೆ. ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ. ಇವರಿಗೆ ಉತ್ತಮ ಭವಿಷ್ಯ ನೀಡಬೇಕು" ಎಂದು ಕರೆ ನೀಡಿದರು.

ಜಯದೇವ ಆಸ್ಪತ್ರೆಗೆ 2 ಲಕ್ಷ ರೂ.ದೇಣಿಗೆ ನೀಡಿದ ಶಾಸಕ ಸಿ.ಕೆ.ರಾಮಮೂರ್ತಿ

ರಕ್ಷ ಫೌಂಡೇಷನ್ ಸಂಸ್ಥಾಪಕ, ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, "ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣದಿಂದಲೂ ವಂಚಿತರಾಗಬಾರದು. ಶ್ರೀಮಂತರಿಗೆ ದೊರೆಯುವ ಶಿಕ್ಷಣ ಸೌಲಭ್ಯ ಬಡ ಮಕ್ಕಳಿಗೂ ದೊರೆಯುವಂತಾಗಬೇಕು" ಎಂದರು. ಶಾಸಕ ಸಿ.ಕೆ. ರಾಮಮೂರ್ತಿ ಜಯದೇವ ಆಸ್ಪತ್ರೆಗೆ 2 ಲಕ್ಷ ರೂ. ದೇಣಿಗೆ ನೀಡಿದರು. ಅಂತಾರಾಷ್ಟ್ರೀಯ ಅಂಧ ಮಹಿಳಾ ಕ್ರೀಡಾಪಟುಗಳಾದ ಗಂಗವ್ವ ಮತ್ತು ಜ್ಯೋತಿ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​​‌ ಸಹ ಕಾರ್ಯನಿರ್ವಾಹಕ ತಿಪ್ಪೇಸ್ವಾಮಿ, ಶಾಸಕ ಸತೀಶ್ ರೆಡ್ಡಿ, ಮಾಜಿ ಮಹಾ ಪೌರರಾದ ಎಸ್.ಕೆ. ನಟರಾಜ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ನಾಗರತ್ನ ರಾಮಮೂರ್ತಿ, ಗೋವಿಂದ ನಾಯ್ಡು, ಚಂದ್ರಶೇಖರ್ ರಾಜು, ಮಂಜುನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ್ ಮುಂದುವರಿಕೆ

ABOUT THE AUTHOR

...view details