ಬೆಂಗಳೂರು: ಸಿಡಿ ಪ್ರಕರಣದ ಯುವತಿಗೆ ರಕ್ಷಣೆ ನೀಡಲು ನಾವು ಯಾವುದೇ ರೀತಿಯಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ಯುವತಿ ಹೊಸ ವಿಡಿಯೋದಲ್ಲಿ ಏನು ಹೇಳಿದ್ದಾರೆ ಅನ್ನೋದನ್ನು ನೋಡಿಲ್ಲ. ನಮ್ಮ ಸರ್ಕಾರ ಆ ಯುವತಿಗೆ ರಕ್ಷಣೆ ನೀಡೋದಾಗಿ ಸದನದಲ್ಲೇ ಹೇಳಿದೆ. ಗೃಹ ಸಚಿವ ಬೊಮ್ಮಾಯಿ ಮತ್ತು ಸ್ವತಃ ಮುಖ್ಯಮಂತ್ರಿಗಳು ಆಕೆಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮಿಂದ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಹೆಣ್ಣು ಮಗಳಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಸರ್ಕಾರ ಯುವತಿಗೆ ರಕ್ಷಣೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ತನಿಖೆಯ ವರದಿ ಏನೇ ಬರಲಿ. ಯುವತಿಗೆ ರಕ್ಷಣೆ ನೀಡುತ್ತೇವೆ ಎಂದು ತಿಳಿಸಿದರು.
ಓದಿ:ಮತ್ತೊಂದು ವಿಡಿಯೋ ಹರಿಬಿಟ್ಟ ಸಿಡಿ ಲೇಡಿ: ಪೋಷಕರಿಗೆ ರಕ್ಷಣೆ ಕೊಡಲು ಕೈ ನಾಯಕರಿಗೆ ಮನವಿ
ಆಕೆಗೆ ಅನ್ಯಾಯ ಆಗಿದೆಯಾ? ಇಲ್ಲವೋ? ಎಂಬುದು ಅನ್ನೋದು ಎಸ್ಐಟಿ ತನಿಖೆ ಬಳಿಕ ಗೊತ್ತಾಗುತ್ತದೆ. ಯುವತಿಗೆ ರಕ್ಷಣೆ ನೀಡೋದು ನಮ್ಮ ಜವಾಬ್ದಾರಿ. ಅದನ್ನು ಮಾಡ್ತೇವೆ. ತನಿಖಾ ತಂಡವೂ ಆ ಯುವತಿಯ ಹುಡುಕಾಟದಲ್ಲಿದೆ. ಆ ಯುವತಿ ನನ್ನ ಇಲಾಖೆಯಿಂದ ರಕ್ಷಣೆ ಕೇಳಿದರೆ, ನಮ್ಮ ಕಡೆಯಿಂದಲೂ ರಕ್ಷಣೆ ಕೊಡಲು ಸಿದ್ಧವೆಂದು ಸಚಿವೆ ಶಶಿಕಲಾ ಜೊಲ್ಲೆ ಅಭಯ ನೀಡಿದರು.