ಕರ್ನಾಟಕ

karnataka

By ETV Bharat Karnataka Team

Published : Sep 18, 2023, 1:16 PM IST

ETV Bharat / state

ವೈಜ್ಞಾನಿಕ ಮಾಹಿತಿ ಸಂಗ್ರಹ ಕೆಲಸ ಪ್ರಾರಂಭಿಸಿದ ಆದಿತ್ಯ-ಎಲ್ 1: ಇಸ್ರೋ ಮಾಹಿತಿ

ಆದಿತ್ಯ-ಎಲ್ 1 ನೌಕೆಯು ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಈ ದತ್ತಾಂಶ ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ನೆರವಾಗುತ್ತದೆ ಎಂದು ಇಸ್ರೋ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಆದಿತ್ಯ ಎಲ್ 1 ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭ
ಆದಿತ್ಯ ಎಲ್ 1 ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭ

ಬೆಂಗಳೂರು:ಭಾರತದ ಮೊಟ್ಟ ಮೊದಲ ಸೌರ ಯೋಜನೆ​ ಆದಿತ್ಯ-ಎಲ್ 1 ನೌಕೆಯು ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಕಾರ್ಯಾರಂಭಿಸಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಮಾಹಿತಿ ನೀಡಿದೆ.

ಸುಪ್ರಾ ಥರ್ಮಲ್ ಮತ್ತು ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ ಉಪಕರಣದ ಸಂವೇದಕಗಳು ಭೂಮಿಯಿಂದ 50,000 ಕಿ.ಮೀಗಿಂತಲೂ ಹೆಚ್ಚು ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿವೆ. ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತವೆ. ಅಂಕಿಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ ಎಂದು ಇಸ್ರೋ ತಿಳಿಸಿದೆ.

ಆದಿತ್ಯ-ಎಲ್ 1 ಕಕ್ಷೆಗೇರಿಸುವ ಪ್ರಕ್ರಿಯೆ: ಆದಿತ್ಯ-ಎಲ್ 1 ನೌಕೆಯನ್ನು ಎತ್ತರದ ಕಕ್ಷೆಗೆ ಏರಿಸುವ 4ನೇ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಹೇಳಿತ್ತು. ಬೆಂಗಳೂರಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಈ ಕಾರ್ಯಾಚರಣೆ ನಡೆಸಲಾಗಿತ್ತು.

ಸದ್ಯ ಆದಿತ್ಯ ನೌಕೆಯು ಭೂಮಿಯಿಂದ 256 ಕಿ.ಮೀ x 121973 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್‌ಡಿಎಸ್‌ಸಿ-ಎಸ್​ಹೆಚ್ಎಆರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೆೋ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ. ಹಾಗೆಯೇ ಮುಂದಿನ (5ನೇ) ಹಂತದ ಕಕ್ಷೆ ಬದಲಾವಣೆ ಕಾರ್ಯ ಸೆಪ್ಟೆಂಬರ್‌ 19ರಂದು ನಿಗದಿಯಾಗಿದೆ. ಇದಕ್ಕೂ ಮೊದಲು ಸೆ.5ರಂದು ಆದಿತ್ಯ-ಎಲ್​ 1, 2ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಅದು ಭೂಮಿಯಿಂದ 282 ಕಿ.ಮೀ x 40225 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತ್ತು ಎಂದು ಇಸ್ರೋ ತಿಳಿಸಿತ್ತು.

ಇಸ್ರೋ ಸೆ.2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ-ಎಲ್‌1 ಉಡ್ಡಯನ ಮಾಡಿತ್ತು. ಇದು 7 ವಿಭಿನ್ನ ಪೇಲೋಡ್‌ಗಳನ್ನು ನಭಕ್ಕೆ ಹೊತ್ತೊಯ್ದಿದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.

ಆದಿತ್ಯ-ಎಲ್​ 1 ಕುರಿತು:ಆದಿತ್ಯ-ಎಲ್ 1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಗಗನ ನೌಕೆ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡುಹಿಡಿಯಲಿದೆ. ಉಪಗ್ರಹವು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸುತ್ತದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ನಂತರ ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಪ್ರಕ್ರಿಯೆಗೆ ಒಳಗಾಗುತ್ತದೆ. ಅದಕ್ಕೆ ಸುಮಾರು 110 ದಿನಗಳು ಬೇಕು. ಎಲ್-1 ಬಿಂದು ತಲುಪಲು ಉಪಗ್ರಹವು ಸರಿಸುಮಾರು 15 ಮಿಲಿಯನ್ ಕಿ.ಮೀ ಪ್ರಯಾಣಿಸಬೇಕು. ಎಲ್-1 ಬಿಂದು‌ ಸೇರಿದ ನಂತರ, ಮತ್ತೊಂದು ಪ್ರಕ್ರಿಯೆ ಆದಿತ್ಯ-ಎಲ್​ 1 ಅನ್ನು ಎಲ್​ 1 ಸುತ್ತಲಿನ ಕಕ್ಷೆಯಲ್ಲಿ ಬಂಧಿಸುತ್ತದೆ. ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳ ಎಂದು ಇಸ್ರೋ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ:ಹಾಯ್​ ಫ್ರೆಂಡ್ಸ್​.. ಭೂಮಿ ಚಂದ್ರನ ಜೊತೆ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್​1

ABOUT THE AUTHOR

...view details