ಕರ್ನಾಟಕ

karnataka

By

Published : Jun 6, 2023, 7:12 PM IST

ETV Bharat / state

ದೇಶದ ಅಭಿವೃದ್ಧಿಗೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ ಖಂಡ್ರೆ

ಸಚಿವರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಇಂದು ಈಶ್ವರ ಖಂಡ್ರೆ ಭೇಟಿ ನೀಡಿದರು.

Ishwara Khandre visited the All India Veerashaiva Mahasabha
Ishwara Khandre visited the All India Veerashaiva Mahasabha

ಬೆಂಗಳೂರು:ದೇಶದ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಸಮುದಾಯ ಮತ್ತು ಮಠಗಳ ಕೊಡುಗೆ ಅಪಾರ ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಸಚಿವರಾದ ಬಳಿಕ ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಮತ್ತು ಮಠಾಧೀಶರು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಅನ್ನ, ಜ್ಞಾನ ನೀಡಿದ್ದಾರೆ. ಜಗತ್ತಿಗೆ ಸಾಮಾಜಿಕ ನ್ಯಾಯ ನೀಡಿದ್ದು ವೀರಶೈವ ಲಿಂಗಾಯತ ಸಮುದಾಯ. ಇಂತಹ ಸಮಾಜದಲ್ಲಿ ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಹಿಂದುಳಿದ ಅನೇಕ ಜನರಿದ್ದಾರೆ. ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮೀಸಲಾತಿ ದೊರಕಬೇಕು. ಇದಕ್ಕಾಗಿ ಮಹಾಸಭಾ ಶ್ರಮಿಸುತ್ತಿದೆ ಎಂದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲು ಕಲ್ಪಿಸಬೇಕು ಎಂದು ಮಹಾಸಭಾ ಹಿಂದಿನಿಂದಲೂ ಆಗ್ರಹಿಸುತ್ತಿದೆ. ಇದಕ್ಕೆ ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ಕೊಟ್ಟರು. ಸಮಾಜದ ಎಲ್ಲ ಒಳಪಂಗಡಗಳನ್ನು ಮತ್ತು ಸರ್ವರನ್ನೂ ಒಗ್ಗೂಡಿಸಿ ಸಮಾಜದಲ್ಲಿ ಒಟ್ಟಾಗಿ ತೆಗೆದುಕೊಂಡು ಹೋಗಲು ಪೂಜ್ಯರಾದ ಮ.ನಿ.ಪ್ರ. ಶ್ರೀ ಕುಮಾರಸ್ವಾಮಿ ಅವರು ಈ ಸಂಸ್ಥೆ ಕಟ್ಟಿದ್ದಾರೆ. ಅವರ ಆಶಯವನ್ನು ಸಭಾದ ಎಲ್ಲ ಅಧ್ಯಕ್ಷರು ಮುಂದುವರೆಸಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಹಾಸ್ಟೆಲ್ ನಿರ್ಮಾಣ ಮಾಡುವಂತೆ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವಂತೆ ಸಮುದಾಯಕ್ಕೆ ಮನವಿ ಮಾಡಿದ ಸಚಿವರು, ಪ್ರಥಮ ಬಾರಿಗೆ ಮಹಾಸಭಾ ಆಗಮಿಸಿದ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಸಮುದಾಯದ ಜನರು ತೋರಿದ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ವೀರಶೈವ ಲಿಂಗಾಯತ ಮಠಗಳು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯನ್ನು ಉಳಿಸಿವೆ. ಸಂಸ್ಕೃತಿ ಸಮುದಾಯದ ಸೋಪಾನ. ಸಮುದಾಯದ ಅನೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರನ್ನು ಮೇಲೆತ್ತುವ ಕಾರ್ಯ ಆಗಬೇಕು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದರಿಂದಲೇ 35ಕ್ಕೂ ಹೆಚ್ಚು ಲಿಂಗಾಯತ ವೀರಶೈವ ಸಮಾಜದ ಶಾಸಕರು ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಮಹಾ ಸಭಾದ ಸಚ್ಚಿದಾನಂದ ಮೂರ್ತಿ, ಸಗರನಹಳ್ಳಿ ನಟರಾಜ್, ರೇಣುಕಾ ಪ್ರಸನ್ನ, ಗಂಗಮ್ಮ ಮೊದಲಾದವರು ಇದ್ದರು.

ಇದನ್ನೂ ಓದಿ:ಹಾರ-ತುರಾಯಿ ತರಬೇಡಿ: ಸಿದ್ದರಾಮಯ್ಯ, ಪರಮೇಶ್ವರ್ ನಡೆ ಅನುಸರಿಸಿದ ಸಚಿವ ಖಂಡ್ರೆ

'ಹಾರ, ತುರಾಯಿ ತರಬೇಡಿ':ಸಚಿವರಾದ ದಿನದಿಂದಲೂ ನಿತ್ಯ ಬೀದರ್ ಜಿಲ್ಲೆಯ ಅದರಲ್ಲೂ ಭಾಲ್ಕಿ ಕ್ಷೇತ್ರದಿಂದ ಬೆಂಗಳೂರಿನವರೆಗೆ ಸಾವಿರಾರು ಜನರು ಆಗಮಿಸಿ ಹಾರ, ತುರಾಯಿ ನೀಡಿ ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದಾರೆ. ಮತದಾರರು ಮತ್ತು ಜನತೆಯ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿರುವ ಸಚಿವ ಈಶ್ವರ್​ ಖಂಡ್ರೆ, ತಮ್ಮ ಫ್ಲೆಕ್ಸ್ ಹಾಕುವುದಾಗಲಿ, ಸನ್ಮಾನ ಮಾಡುವುದಾಗಲಿ ಮಾಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details