ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯಿಂದ ಸುಮಾರು 7 ಕೋಟಿ ಜನ ತತ್ತರಿಸಿ ಹೋಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಿದ್ದಾರೆ. ಆದ್ರೆ ಯಾವುದೇ ಪುನರ್ವಸತಿ ಕಾರ್ಯಗಳು ನಡೆದಿಲ್ಲ. ಕೇಂದ್ರ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಸದನ ಕರೆದಿದ್ದೇ ಮೂರು ದಿನ. ಇದು ಕೇವಲ ಕಾಟಾಚಾರಕ್ಕೆ ಮಾಡಿರುವಂತದ್ದು, ಯಾವ ರೀತಿ ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದಾರೋ, ಅದೇ ರೀತಿ ಹಿಂಬಾಗಿಲ ಮೂಲಕವೇ ಸದನ ಮುಗಿಸೋಕೆ ಹೊರಟಿದ್ದಾರೆ. ಸಂತ್ರಸ್ತರ ಚರ್ಚೆಗೆ ಇಂದು ಅವಕಾಶ ನೀಡ್ತಿಲ್ಲ ಎಂದು ದೂರಿದ್ರು.
ಸಿದ್ದರಾಮಯ್ಯನವರು ನೆರೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದರು. ಆದ್ರೆ, ಮಾನ್ಯ ಸಭಾಧ್ಯಕ್ಷರು ಸಂತಾಪ ಸೂಚನೆ ಬಳಿಕ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇವರು ಕೇವಲ ಆದರೆ ಮಸೂದೆ ಮಂಡಿಸುತ್ತಾರೆ. ಚರ್ಚೆಗೆ ಅವಕಾಶ ನೀಡಲ್ಲ. ಜನಸಾಮಾನ್ಯರ ಚರ್ಚೆಗೂ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಸರ್ಕಾರ ನಡೆದುಕೊಳ್ತಿದೆ. ಇದರಲ್ಲಿ ಸ್ಪೀಕರ್ ಕೂಡ ಸೇರಿರುವುದು ದುರಂತ , ಇದು ಸದನದ ಹಕ್ಕು ಚ್ಯುತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.