ಕರ್ನಾಟಕ

karnataka

ಸಂಪುಟ ವಿಸ್ತರಣೆಯಲ್ಲಿ ಇದೆಯೇ ಬಿಎಸ್​ವೈ ರಾಜಕೀಯ ಲೆಕ್ಕಾಚಾರ!?

By

Published : Jan 13, 2021, 7:56 PM IST

ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ರಾಜಕೀಯ ಲೆಕ್ಕಚಾರದಲ್ಲೇ ಸಂಪುಟಕ್ಕೆ ಏಳು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ವೀರಶೈವರು, ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಕುರುಬ ಹಾಗೂ ಒಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ತೆರೆಮರೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ವಿಧಾನಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಅವರಿಗೆ ವಿರೋಧದ ನಡುವೆಯೂ ಮಂತ್ರಿಸ್ಥಾನ ನೀಡಲಾಗಿದೆ.

ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ

ಬೆಂಗಳೂರು: ಪಕ್ಷದೊಳಗೆ ಎಷ್ಟೇ ಅಸಮಾಧಾನ ವ್ಯಕ್ತವಾದರೂ, ಸಮತೋಲನದ ಸಂಪುಟ ರಚನೆ ಎನ್ನಲಾಗುತ್ತಿದ್ದರೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜಕೀಯ ಲೆಕ್ಕಚಾರದಲ್ಲೇ ಸಂಪುಟಕ್ಕೆ ಏಳು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಆ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿರುವ ಬಿಎಸ್​ವೈ ಸಾಮಾಜಿಕ ನ್ಯಾಯಕ್ಕೂ ಒತ್ತು ಕೊಟ್ಟಿದ್ದಾರೆ.

ಸಂಪುಟಕ್ಕೆ ಸೇರ್ಪಡೆಯಾದ 7 ಮಂದಿ ಸಚಿವರಲ್ಲಿ ಇಬ್ಬರು ವೀರಶೈವರು, ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಕುರುಬ ಹಾಗೂ ಒಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ತೆರೆಮರೆಯಲ್ಲಿ ಕುಳಿತು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಶಾಸಕ, ಹಾಲಿ ವಿಧಾನಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಅವರು ವಿರೋಧದ ನಡುವೆಯೂ ಮಂತ್ರಿ ಸ್ಥಾನ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರ ರಚನೆಗಾಗಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಬಿಎಸ್​ವೈ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಿದ್ದಾರೆ.

ಮುಂಬೈ ಕರ್ನಾಟಕ ಭಾಗದಿಂದ ಪ್ರಬಲ ವೀರಶೈವ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಉಮೇಶ್ ಕತ್ತಿ ಅವರಿಗೆ ಎರಡು ಬಾರಿ ಸಚಿವ ಸ್ಥಾನ ಕೈತಪ್ಪಿತ್ತು. ಇದರಿಂದ ಅವರು ಅಸಮಾಧಾನಗೊಂಡಿದ್ದರು. ಈ ಹಿಂದೆ ಸಹ ಸಚಿವರಾಗಿದ್ದಾಗ ಒಳ್ಖೆ ಕೆಲಸ ಕೂಡ ಮಾಡಿದ್ದರು. ಹಾಗಾಗಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಿಂದ ಪಂಚಮಸಾಲಿಯ ಪ್ರಭಾವಿ ನಾಯಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲಾಗಿದೆ. ನಾಯಕತ್ವದ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್‍ ಬದಲಿಗೆ ನಿರಾಣಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಓದಿ:ಶಕ್ತಿಸೌಧದ 3ನೇ ಮಹಡಿಯಲ್ಲಿ ನೂತನ ಸಚಿವರುಗಳಿಗೆ ಕೊಠಡಿಗಳ ಹಂಚಿಕೆ..

ಪರಿಶಿಷ್ಟ ಜಾತಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ತಣ್ಣಗಾಗಿಸಲು ಈ ಬಾರಿ ಅದೇ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿರುವ ಎಸ್. ಅಂಗಾರ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ಕೆಲಸ ಮಾಡಿರುವ ಅಂಗಾರ ಅವರು, ಎರಡು- ಮೂರು ಬಾರಿ ಸಚಿವ ಸ್ಥಾನ ಕೈತಪ್ಪಿದರೂ ಯಾವುದೇ ಬೇಸರ ಮಾಡಿಕೊಳ್ಳದೇ ತಮ್ಮ ಪಕ್ಷ ನಿಷ್ಠೆಯನ್ನು ತೋರಿಸಿದ್ದರು. ಹಾಗಾಗಿ ಅವರಿಗೆ ಈ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.

ಕೆಲವು ಕಾರಣಗಳಿಂದ ದೂರ ಉಳಿದಿದ್ದ ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಕಳೆದ ಬಾರಿಯೇ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ಮೇಲೆ ಒತ್ತಡವನ್ನು ತಂದಿದ್ದರು. ಆದರೆ ಕೆಲ ಕಾರಣಗಳಿಗಾಗಿ ಸಚಿವ ಸ್ಥಾನ ಕೈತಪ್ಪಿತ್ತು. ಆದ್ರೆ ಈ ಬಾರಿ ಸಂಪುಟಕ್ಕೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಎಸ್ಸಿ ಸಮುದಾಯಕ್ಕೆ ತಮ್ಮ ಪಕ್ಷ ಸೂಕ್ತ ಸ್ಥಾನಮಾನ ನೀಡಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ದೆಹಲಿ ವರಿಷ್ಠರ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿದ್ದ ಬಿ. ಎಸ್. ಯಡಿಯೂರಪ್ಪ ಅವರು, ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ ನಡೆದ ಸಂದರ್ಭದಲ್ಲಿ ಮುನಿರತ್ನ ಅವರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಸಂಪುಟಕ್ಕೆ ಮುನಿರತ್ನ ಅವರನ್ನು ಸೇರಿಸಲು ಕೊನೆ ಕ್ಷಣದವರೆಗೂ ಸಚಿವ ಅಶೋಕ್, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದರಾದರೂ ಅದು ಫಲಕೊಡಲಿಲ್ಲ.

ABOUT THE AUTHOR

...view details