ಬೆಂಗಳೂರು: ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿ, ದೇಶದಿಂದ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಬಿಡದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೋಲ್ ಕರ್ನಾಟಕ ಪೊಲೀಸರಿಂದ ಸ್ಪಷ್ಟನೆ ಕೇಳಿದೆ. ನಿತ್ಯಾನಂದ ವಿರುದ್ಧ ಅತ್ಯಾಚಾರ, ವಂಚನೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪವಿದ್ದು ಕರ್ನಾಟಕ, ತಮಿಳುನಾಡು ಹಾಗೂ ಗುಜರಾತ್ಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವರ ವಿರುದ್ಧ ಕರ್ನಾಟಕ ಹಾಗೂ ಗುಜರಾತ್ ಪೊಲೀಸರು ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೊಟೀಸ್ ನೀಡುವಂತೆ ಇಂಟರ್ ಪೋಲ್ಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರಂತೆ ಕರ್ನಾಟಕ ಪೊಲೀಸರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿತ್ತು.
ತನಿಖೆ ನಡೆಸುತ್ತಿರುವ ಸಿಐಡಿಯು ಇಂಟರ್ ಪೋಲ್ ಕೇಳಿದ ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಿದೆ. ನಿತ್ಯಾನಂದ ವಿರುದ್ಧ ದಾಖಲಾಗಿರುವ ಪ್ರಕರಣ, ಅಪರಾಧದ ಸ್ವರೂಪ, ಇರುವ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಇಂಟರ್ ಪೋಲ್ ಮಾಹಿತಿ ಕೇಳಿದೆ ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಸಿಐಡಿ ವಿವರಣೆ ಒದಗಿಸಿದೆ. 2019ರಲ್ಲಿ ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪ ಹಿನ್ನೆಲೆಯಲ್ಲಿ ನಿತ್ಯಾನಂದ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. 2022ರಲ್ಲಿ ಗುಜರಾತಿನ ಆಶ್ರಮವೊಂದರಲ್ಲಿ ನಾಲ್ಕು ಮಕ್ಕಳನ್ನು ಅಪಹರಿಸಿದ ಆರೋಪದಡಿ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಂಧನ ಭೀತಿಯಿಂದ ದೇಶದಿಂದಲೇ ತಲೆಮರೆಸಿಕೊಂಡು ಈಕೆಡ್ವಾರ್ ಸಮೀಪದ ದ್ವೀಪವೊಂದನ್ನು ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ದೇಶ ಎಂದು ಹೆಸರಿಟ್ಟುಕೊಂಡಿದ್ದರು.